ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಜತೆ ಒಪ್ಪಂದವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣರನ್ನು ಓಡಿ ಹೋಗಲು ಬಿಟ್ಟಿದ್ದೇಕೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಆರೋಪ ಕೇಳಿಬಂದಕೂಡಲೇ ಯಾಕೆ ಪ್ರಜ್ವಲ್ ವಿರುದ್ಧ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಲಿಲ್ಲ? ರಾಜ್ಯದ ಪೊಲೀಸರು ಪ್ರಜ್ವಲ್ರನ್ನು ಬಂಧಿಸಬೇಕಿತ್ತು ಅಲ್ವಾ?” ಎಂದರು.
“ಇಲ್ಲಿ ದೂರು ದಾಖಲಾದರೆ ಕೇಂದ್ರ ಸರ್ಕಾರಕ್ಕೆ ಏನಾದರೂ ಕನಸು ಬೀಳುತ್ತದೆಯೇ? ಪ್ರಜ್ವಲ್ ಓಡಿಹೋಗಲು ಕೇಂದ್ರ ಸರ್ಕಾರದ ವಿಳಂಬ ನೀತಿ ಕಾರಣ ಎಂಬುದು ಕಾಂಗ್ರೆಸ್ನ ರಾಜಕೀಯ ಹೇಳಿಕೆ ಅಷ್ಟೇ” ಎಂದು ತಿರುಗೇಟು ನೀಡಿದರು.
“ರಾಜ್ಯ ಸರ್ಕಾರ ಕೂಡಲೇ ಎಫ್ಐಆರ್ ದಾಖಲಿಸಬೇಕಿತ್ತು. ಎಫ್ಐಆರ್ ದಾಖಲಿಸುವ ಮೊದಲೇ ಯಾಕೆ ಆರೋಪಿಯನ್ನು ಬಂಧಿಸಲಿಲ್ಲ? ನಾವು ಪ್ರಜ್ವಲ್ರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ನಮಗೆ ಪರಿಣಾಮವಾಗಲ್ಲ” ಎಂದರು.