ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ ಸಹಿಸಿಕೊಂಡೆ. ಆದರೆ ಎಲ್ಲಕ್ಕೂ ಒಂದು ಮಿತಿ ಇದೆ. ಇದನ್ನು ಕುಮಾರಸ್ವಾಮಿ ಅರ್ಥಮಾಡಿಕೊಳ್ಳಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.
ಬೆಂಗಳೂರು ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, “ಕುಮಾರಸ್ವಾಮಿ ತಮ್ಮ ರಾಜಕೀಯ ಗುರಿಸಾಧನೆಗಾಗಿ ಸಮುದಾಯದಿಂದಲೇ ದೂರವಾಗುತ್ತಿದ್ದಾರೆ. ಈ ಲೋಕಸಭಾ ಚುನಾವಣೆಯ ನಂತರ ಅವರ ಮತ್ತು ಜೆಡಿಎಸ್ ಸ್ಥಿತಿ ಏನಾಗಲಿದೆ ಅಂತ ಜನ ನೋಡಲಿದ್ದಾರೆ, ಯಾರಿಗೂ ಮುಖ ತೋರಿಸದ ಸನ್ನಿವೇಶ ನಿರ್ಮಾಣವಾಗಲಿದೆ” ಎಂದರು.
“ಹೆಚ್ ಡಿ ಕುಮಾರಸ್ವಾಮಿ ವೈಯಕ್ತಿಕವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಬಂಡೆ ಒಡೆದೆ, ಕಲ್ಲು ಸೀಳಿದೆ ಅಂತ ಕುಮಾರಸ್ವಾಮಿ ಹೇಳ್ತಾರಲ್ಲ? ಹೌದು, ನನ್ನ ಜಮೀನಲ್ಲಿ ಬಂಡೆ ಸೀಳಿದ್ದೇನೆ, ಕಲ್ಲು ಒಡೆದಿದ್ದೇನೆ, ನನ್ನ ಮಕ್ಕಳ ಭವಿಷ್ಯಕ್ಕಾಗಿ ಅದೆಲ್ಲವನ್ನು ಮಾಡಿದ್ದೇನೆ” ಎಂದು ಸಮರ್ಥಿಸಿಕೊಂಡರು.
“ಯಾವುದೇ ಮಹಿಳೆಯ ಆಸ್ತಿಯನ್ನು ನಾನು ಕಬಳಿಸಿಲ್ಲ. ಅಪಾರ್ಟ್ ಮೆಂಟ್ನವರನ್ನು ಹೆದರಿಸಿದ್ದು ಸುಳ್ಳು. ನೀರಿನ ಅಗಾಧ ಕೊರತೆಯ ನಡುವೆಯೂ ಜನರಿಗೆ ಸಪರ್ಮಕವಾಗಿ ನೀರು ಒದಗಿಸುತ್ತಿರುವುದು ಸಹಿಸಲಾಗದೆ ಜನರ ಗಮನ ಬೇರೆ ಕಡೆ ಸೆಳೆಯಲು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.