HomeಅಂಕಣHuman Rights Day-2023 | ಮಾನವ ಹಕ್ಕುಗಳು ಮತ್ತು ಬಸವ ತತ್ವ

Human Rights Day-2023 | ಮಾನವ ಹಕ್ಕುಗಳು ಮತ್ತು ಬಸವ ತತ್ವ

ವಿಶ್ವಸಂಸ್ಥೆಯು "ಮಾನವ ಹಕ್ಕುಗಳ ಜಾಗತಿಕ ಘೋಷಣೆ" (ಯೂನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್) ಯನ್ನು 1948ನೇ ಡಿಸೆಂಬರ್ 10ರಂದು ಅಂಗೀಕರಿಸಿತು. ಇದು ಮಾನವ ಇತಿಹಾಸದ ಮಹತ್ವದ ಕ್ಷಣಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಓದುಗರಿಗಾಗಿ ಬಸವ ತತ್ವದ ಪ್ರಬಲ ಪ್ರತಿಪಾದಕರಾದ ರಂಜಾನ್‌ ದರ್ಗಾ ಅವರ ಲೇಖನ ಇಲ್ಲಿದೆ.

ಎರಡನೇ ಮಹಾಯುದ್ಧದಲ್ಲಿ ಐದು ಕೋಟಿ ಜನರ ಮಾರಣಹೋಮ ನಡೆಯಿತು. ಇದೇ ಸಂದರ್ಭದಲ್ಲಿ ಯುದ್ಧಗಳನ್ನು ಶಮನ ಮಾಡುವ ಮುಖ್ಯ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಮೂಡಿಸುವಂಥ “ವಿಶ್ವಸಂಸ್ಥೆ ಘೋಷಣೆ”ಯನ್ನು 1942ನೇ ಜನವರಿ 1ರಂದು ಅಂಗೀಕರಿಸಿತು. ಅದಕ್ಕೆ “ಚಾರ್ಟರ್ ಆಫ್ ದಿ ಯುನೈಟೆಡ್ ನೇಷನ್ಸ್” ಎಂದು ಕರೆಯುತ್ತಾರೆ.

1948ನೇ ಡಿಸೆಂಬರ್ 10ರಂದು ವಿಶ್ವಸಂಸ್ಥೆಯು “ಮಾನವ ಹಕ್ಕುಗಳ ಜಾಗತಿಕ ಘೋಷಣೆ” (ಯೂನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್) ಯನ್ನು ಅಂಗೀಕರಿಸಿದ್ದು ಮಾನವ ಇತಿಹಾಸದ ಮಹತ್ವದ ಕ್ಷಣಗಳಲ್ಲಿ ಒಂದಾಗಿದೆ. ಮಾನವಕುಲದ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಸಿದ ಮೊದಲ ಅಂತಾರಾಷ್ಟ್ರೀಯ ಪ್ರಯತ್ನ ಇದಾಗಿದೆ. ಎಲ್ಲ ದೇಶಗಳ ಜನಸಮುದಾಯಗಳನ್ನು ಮಾನವ ಘನತೆಯೊಂದಿಗೆ ಬೆಸೆಯುವ ಘೋಷಣೆ ಇದು.

20ನೇ ಶತಮಾನದಲ್ಲಿ ಎರಡು ಮಹಾಯುದ್ಧಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದರೆ, 12ನೇ ಶತಮಾನದಲ್ಲಿ ಬಸವ ತತ್ವವು ಮಾನವ ಹಕ್ಕುಗಳನ್ನು ಎತ್ತಿಹಿಡಿದ ನಂತರ ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡವಾಯಿತು!

ಮಹಿಳೆಯರು, ದಲಿತರು ಮತ್ತು ಕಾಯಕಜೀವಿಗಳ ಹಕ್ಕುಗಳನ್ನು ಬಸವಣ್ಣನವರ ಮಾನವ ಹಕ್ಕುಗಳು ಒಳಗೊಂಡಿವೆ. ಮಹಿಳೆಯರ, ಕಾರ್ಮಿಕರ ಮತ್ತು ಕರಿಯರ ಹಕ್ಕುಗಳ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಯಾರಿಗೂ ಕನಸುಗಳು ಕೂಡ ಬೀಳದ 12ನೇ ಶತಮಾನದಲ್ಲಿ ಜಗಜ್ಜ್ಯೋತಿ ಬಸವೇಶ್ವರರು ಈ ಎಲ್ಲರ ಹಕ್ಕುಗಳ ಬಗ್ಗೆ ಮಾತನಾಡಿದ್ದು ವಿಶ್ವದ ಇತಿಹಾಸದ ಪುಟಗಳಲ್ಲಿ ಸೇರಬೇಕಿದೆ. ಮಾನವ ಹಕ್ಕುಗಳನ್ನು ಅಹಿಂಸಾ ಹೋರಾಟದ ಮೂಲಕ ಸಾಧಿಸಬೇಕಾಗುವ ಕಲೆಯನ್ನು ಬಸವಣ್ಣನವರು ಕಲಿಸಿಕೊಟ್ಟಿದ್ದಾರೆ. ಬಸವ ತತ್ವಗಳನ್ನು ವಿಶ್ವಕ್ಕೆ ತಿಳಿಸುತ್ತ ಎಲ್ಲ ರೀತಿಯ ಕ್ರೌರ್ಯಗಳಿಂದ ಮಾನವ ಜನಾಂಗವನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ರೂಸೋನ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ಘೋಷಣೆಯು 1787-1789ರ ಫ್ರೆಂಚ್ ಕ್ರಾಂತಿಗೆ ಕಾರಣವಾಯಿತು. ಆದರೆ ಅದೇ ರೂಸೋ 1762ರಲ್ಲಿ “ಮೌಢ್ಯವು ಮಹಿಳೆಯರಿಗೆ ಸಂಪೂರ್ಣ ಲಾಭದಾಯಕವಾಗಿದೆ” ಎಂದು ಪ್ರತಿಪಾದಿಸಿದ್ದ. “ಅವರು ರಾಜಕೀಯದಲ್ಲಿ ಇರಬಾರದು” ಎಂದು ಕೂಡ ಹೇಳಿದ್ದ! ಹೀಗೆ ಜಗತ್ತಿನ ಎಲ್ಲಡೆ ಪುರುಷ ಪ್ರಧಾನವಾದ ಸಮಾಜಗಳಲ್ಲಿ ಮಹಿಳೆಯರು ಪುರುಷರ ಅಡಿಯಾಳುಗಳಾಗುತ್ತಲೇ ಬಂದಿದ್ದಾರೆ.

ಫ್ರೆಂಚ್ ಕ್ರಾಂತಿಯ ನಂತರ 1789ರಲ್ಲಿ ನಾಗರಿಕ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದಾಗ ಮಹಿಳೆಯರ ಕುರಿತ ರೂಸೋನ ವಿಚಾರಗಳನ್ನು ಆ ಘೋಷಣೆಯಲ್ಲಿ ಸೇರ್ಪಡೆ ಮಾಡಲಾಯಿತು! ಮಹಿಳೆಯರ ಮತ್ತು ಗುಲಾಮರ ಹಕ್ಕುಗಳ ಬಗ್ಗೆ ಮಾತನಾಡದ ಈ ಘೋಷಣೆ ಅಪೂರ್ಣವಾಯಿತು. ಇತಿಹಾಸದ ಬಹುಮುಖ್ಯ ಕ್ರಾಂತಿಗಳಲ್ಲಿ ಒಂದಾದ ಫ್ರೆಂಚ್ ಕ್ರಾಂತಿ ಮೇಲ್ವರ್ಗದ ಪುರುಷ ಪ್ರಧಾನ ಕ್ರಾಂತಿಯಾಗಿ ಮಾರ್ಪಟ್ಟಿತು.

ನಂತರ ಅಮೆರಿಕದ ಸ್ವಾತಂತ್ರ್ಯ ಘೋಷಣೆ ಕೂಡ ಮೇಲ್ವರ್ಗದ ಪುರುಷ ಪ್ರಧಾನವಾದ ಘೋಷಣೆಯಾಯಿತು. ಈ ಘೋಷಣೆಯಲ್ಲಿ ಎತ್ತಿಹಿಡಿದ ಸ್ವಾತಂತ್ರ್ಯ ಮತ್ತು ಸಮಾನತೆ ಶ್ರೀಮಂತ ಪುರುಷರಿಗಾಗಿ ಮಾತ್ರ ಇದ್ದವು. ಮಹಿಳೆಯರು, ಗುಲಾಮರು ಮತ್ತು ಆಸ್ತಿ ಇಲ್ಲದವರು ಈ ಹಕ್ಕುಗಳಿಂದ ವಂಚಿತರಾಗಿದ್ದರು. ತದನಂತರ ಬಂದ “ಮಾನವ ಹಕ್ಕುಗಳ ಜಾಗತಿಕ ಘೋಷಣೆ” ಸಂದರ್ಭದಲ್ಲಿ ಕೂಡ ಮಹಿಳೆಯರನ್ನು ಮರೆಯಲಾಗಿತ್ತು. ಆಗ ಮಹಿಳಾ ಪ್ರತಿನಿಧಿಗಳು ಪ್ರತಿಭಟನೆ ಮಾಡಿದರು. ಆ ಕಾರಣದಿಂದಲೇ “ಮಾನವ ಹಕ್ಕುಗಳ ಜಾಗತಿಕ ಘೋಷಣೆ” ಲಿಂಗತಾರತಮ್ಯವಿಲ್ಲದ ಮೊದಲ ಘೋಷಣೆಯಾಯಿತು. ಹೀಗೆ ಆಧುನಿಕ ಸಮಾಜ ಮಹಿಳೆಯರ ಹಕ್ಕುಗಳನ್ನು ಅಂಗೀಕರಿಸಲು ಒದ್ದಾಡುತ್ತಿದೆ.

ಆದರೆ ಬಸವಣ್ಣನವರು “ಶರಣ ಸತಿ ಲಿಂಗ ಪತಿ” ಘೋಷಣೆ ಮೂಲಕ ಲಿಂಗತಾರತಮ್ಯವನ್ನು ಆಧ್ಯಾತ್ಮಿಕವಾಗಿಯೂ ನಿವಾರಿಸಿದರು. ಕಾಯಕದ ಘೋಷಣೆಯೊಂದಿಗೆ ಯಾವುದೇ ಕಾಯಕ ಕೀಳಲ್ಲ ಎಂಬ ಅರಿವು ಮೂಡಿಸಿದರು. ಮಾನವನು ಅಹಂಕಾರದಿಂದ ಮುಕ್ತನಾದಾಗ ಮಾತ್ರ ಸಮಾಜವು ಎಲ್ಲ ರೀತಿಯ ಕೊರತೆ ಮತ್ತು ಹಿಂಸೆಯಿಂದ ಮುಕ್ತವಾಗುವುದೆಂಬುದನ್ನು ದಾಸೋಹದ ಘೋಷಣೆಯೊಂದಿಗೆ ತೋರಿಸಿಕೊಟ್ಟರು.

ಹೆಣ್ಣಿರಲಿ-ಗಂಡಿರಲಿ, ಬಡವನಿರಲಿ-ಶ್ರೀಮಂತನಿರಲಿ, ಸವರ್ಣೀಯನಿರಲಿ-ಅಸ್ಪೃಶ್ಯನಿರಲಿ ಜಗತ್ತಿನ ಜನರೆಲ್ಲ ದೇವರ ಚೈತನ್ಯದಿಂದ ಕೂಡಿದವರು ಎಂಬುದನ್ನು ಜಂಗಮಲಿಂಗದ ಘೋಷಣೆಯ ಮೂಲಕ ಎತ್ತಿಹಿಡಿದರು. ಯಾವುದೇ ರೀತಿಯ ಅಸಮಾನತೆ ಕೃತ್ರಿಮವಾದುದೆಂದು ಸಾರಿದರು. ಹೀಗಾಗಿ ಬಸವಣ್ಣನವರ ಶರಣ ಸಂಕುಲದಲ್ಲಿ ಅಸ್ಪೃಶ್ಯರು, ಮಹಿಳೆಯರು, ಬಡವರು ಮತ್ತು ಎಲ್ಲ ಕಾಯಕಜೀವಿಗಳು ಸರ್ವಸಮಾನತೆಯನ್ನು ಅನುಭವಿಸಿದರು. ಬ್ರಾಹ್ಮಣ ಮಧುವರಸರು ಶರಣರಾಗುವ ಮೂಲಕ ಮೇಲ್ಜಾತಿಯ ಅಹಂಕಾರದಿಂದ ಮುಕ್ತರಾಗಿದ್ದರು. ಸಮಗಾರ ಹರಳಯ್ಯನವರು ಶರಣರಾಗುವ ಮೂಲಕ ಕೆಳಜಾತಿಯ ಕೀಳರಿಮೆಯಿಂದ ಮುಕ್ತರಾಗಿದ್ದರು.

ಹೀಗೆ ವಿವಿಧ ಜಾತಿಗಳ ಸಂಕರವಾದಂಥ ಶರಣಸಂಕುಲ ಎಲ್ಲ ರೀತಿಯ ಅಸಮಾನತೆಯನ್ನು ಮೆಟ್ಟಿ ನಿಂತು ಮಾನವ ಹಕ್ಕುಗಳ ಧ್ವಜವನ್ನು ಹಾರಿಸಿದ ಸಮಾಜವಾಗಿತ್ತು. ಇಲ್ಲಿ ಎಲ್ಲರೂ ತಮ್ಮ ಮತ್ತು ಇತರರ ಜಾತಿಗಳನ್ನು ಮನಸ್ಸಿನಿಂದ ಅಳಿಸಿಹಾಕಿ ಕಾಯಕ ಉಳಿಸಿಕೊಂಡಿದ್ದರು. ಗಂಡ ಮತ್ತು ಹೆಂಡಂದಿರಲ್ಲಿ ಮೇಲುಕೀಳಿನ ಅನುಚರ ಭಾವ ಹೋಗಿ ಸಮಾನತೆಯ ಸಹಚರ ಭಾವ ಮೂಡಿತ್ತು. ಹೀಗೆ ವರ್ಗ, ವರ್ಣ, ಜಾತಿ, ಕುಲ, ಕಾಯಕ ಮತ್ತು ಲಿಂಗಭೇದಗಳಿಲ್ಲದೆ ಎಲ್ಲರನ್ನು ಒಂದಾಗಿಸಿ ಸಮಾನತೆ ಸಾಧಿಸಿದ್ದು ಮಾನವ ಇತಿಹಾಸದ ಬಹುಮುಖ್ಯ ಘಟನೆಗಳಲ್ಲಿ ಒಂದಾಗಿದೆ.

ಮಾನವ ಹಕ್ಕುಗಳ ಜಾಗತಿಕ ಘೋಷಣೆಯ ಎಲ್ಲ 30 ಅಂಶಗಳನ್ನು ಕೆಳಗೆ ಕೊಡಲಾಗಿದ್ದು ಆವರಣದಲ್ಲಿ ಬಸವತತ್ವದ ವಿಚಾರಗಳನ್ನು ತಿಳಿಸಲಾಗಿದೆ.

 1. ಎಲ್ಲ ಮಾನವರು ಹುಟ್ಟಿನಿಂದಲೇ ಸ್ವತಂತ್ರರು ಮತ್ತು ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು.

     (“ಕೂಡಲಸಂಗನ ಶರಣರು ಸ್ವತಂತ್ರಧೀರರು” ಎಂದು ಬಸವಣ್ಣನವರು ತಿಳಿಸಿದ್ದಾರೆ. “ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ” ಎಂದು ಹೇಳುವ ಮೂಲಕ ಮಾನವ ಘನತೆಯನ್ನು ಎತ್ತಿ ಹಿಡಿದಿದ್ದಾರೆ.)

  2. ಮಾನವ ಹಕ್ಕುಗಳ ಘೋಷಣೆಯಲ್ಲಿನ ಎಲ್ಲ ಹಕ್ಕುಗಳು ಮತ್ತು ಸ್ವಾತಂತ್ರ್ಯ ಎಲ್ಲರಿಗೂ ಸಮಾನವಾಗಿವೆ.

    (“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ” ಎಂದು ಬಸವಣ್ಣನವರು ಹೇಳಿದ್ದಾರೆ. “ಕುದುರೆ ಸತ್ತಿಗೆಯವರು ಕಂಡಡೆ ಹೊರಳಿ ಬಿದ್ದು ಕಾಲ ಹಿಡಿವರು; ಬಡಭಕ್ತರು ಬಂದಡೆ ಎಡೆಯಿಲ್ಲ ಅತ್ತ ಸನ್ನಿ ಎಂಬರು” ಎಂದು ಸಾತ್ವಿಕ ಕೋಪ ತೋರಿದ್ದಾರೆ.)

  3. ಪ್ರತಿಯೊಬ್ಬನಿಗೂ ಬದುಕುವ, ಸ್ವತಂತ್ರವಾಗಿರುವ ಮತ್ತು ಭದ್ರತೆಯ ಹಕ್ಕಿದೆ.

     (“ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ.” ಎಂದು ಬಸವಣ್ಣನವರು ತಿಳಿಸಿದ್ದಾರೆ. ಬಸವಣ್ಣನವರ ಭಕ್ತಿಪಕ್ಷವು ಪ್ರತಿಯೊಬ್ಬರಿಗೂ ಬದುಕುವ, ಸ್ವತಂತ್ರವಾಗಿರುವ ಮತ್ತು ಭದ್ರತೆಯ ಹಕ್ಕನ್ನು ಕೊಡುವುದು.)

  4. ಗುಲಾಮಗಿರಿಗೆ ಅವಕಾಶವಿಲ್ಲ.

     (“ದಾಸೀ ಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ” ಎಂದು ಬಸವಣ್ಣನವರು ಎಲ್ಲರ ಘನತೆ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.)

  5. ಯಾರ ವಿರುದ್ಧವೂ ಕ್ರೂರವಾಗಿ ನಡೆದುಕೊಳ್ಳುವಂತಿಲ್ಲ, ಅಮಾನುಷ ಶಿಕ್ಷೆ ವಿಧಿಸುವಂತಿಲ್ಲ.

     (“ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು.” ಎಂದು ಬಸವಣ್ಣನವರು ಹೇಳುವುದರ ಮೂಲಕ ಕ್ರೌರ್ಯ ಮತ್ತು ಅಮಾನುಷ ನಡೆವಳಿಕೆಯನ್ನು ವಿರೋಧಿಸಿದ್ದಾರೆ.)

  6. ಕಾನೂನಿನ ಮುಂದೆ ಪ್ರತಿಯೊಬ್ಬನೂ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಹಕ್ಕನ್ನು ಪಡೆದಿರುತ್ತಾನೆ.

     (ಶರಣರು ಈ ಹಕ್ಕಿನ ಪರವಾಗಿದ್ದರು. ಆದರೆ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಗೆ ಸಂಬಂಧಿಸಿದಂತೆ ಅವರಿಗೆ ತಮ್ಮ ವಿಚಾರ ವ್ಯಕ್ತಪಡಿಸಲು ಅವಕಾಶ ಕೊಡದೆ ಚಿತ್ರಹಿಂಸೆ ನೀಡಲಾಯಿತು.)

  7. ಕಾನೂನಿನ ಮುಂದೆ ಎಲ್ಲರೂ ಒಂದೆ.

     (“ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರನು ನಾನಲ್ಲ” ಎಂದು ಹೇಳುವುದರ ಮೂಲಕ ಬಸವಣ್ಣನವರು ಕಾನೂನಿನ ಮುಂದೆ ಎಲ್ಲರೂ ಒಂದೆ ಎಂಬುದನ್ನು ಸಾರಿದ್ದಾರೆ.)

  8. ತನ್ನ ಮೂಲಭೂತ ಹಕ್ಕುಗಳ ಪ್ರಕಾರ ನ್ಯಾಯ ಕೇಳುವ ಹಕ್ಕು ಪ್ರತಿಯೊಬ್ಬನಿಗೆ ಇದೆ.

     (“ಆನೀ ಬಿಜ್ಜಳಂಗಂಜುವೆನೆ ಅಯಾ? ಕೂಡಲಸಂಗಮದೇವಾ” ಎಂದು ಬಸವಣ್ಣನವರು ಪ್ರಧಾನಿಯಾಗಿ ಅರಸ ಬಿಜ್ಜಳನ ಬಗ್ಗೆ ಹೇಳುತ್ತ ತಮ್ಮ ಹಕ್ಕಿನ ಪ್ರತಿಪಾದನೆ ಮಾಡಿದ್ದಾರೆ. )

  9. ಯಾರನ್ನೂ ಮನಸ್ಸಿಗೆ ಬಂದಂತೆ ಬಂಧಿಸಲಿಕ್ಕಾಗದು.

     (ಶೀಲವಂತ ಮತ್ತು ಲಾವಣ್ಯವತಿಯರ ವಿವಾಹದ ಕಾರಣ ಬಿಜ್ಜಳನು ಅವರ ತಂದೆಯಂದಿರಾದ ಸಮಗಾರ ಹರಳಯ್ಯ ಮತ್ತು ಮಧುವರಸರನ್ನು ಬಂಧಿಸಿದನು. ಶರಣ ತತ್ವದ ಪ್ರಕಾರ ಅವರಲ್ಲಿ ಜಾತಿಭೇದವಿಲ್ಲ. ಆದರೆ ಬಿಜ್ಜಳ ಒಪ್ಪಿದ ವೈದಿಕ ತತ್ವದ ಪ್ರಕಾರ ಅದು ಅಂತರ್ಜಾತೀಯ ವಿವಾಹವಾಗಿತ್ತು. ಹೀಗೆ ಆತ ತನ್ನ ಮನಸ್ಸಿಗೆ ಬಂದಂತೆ ಅಮಾಯಕರನ್ನು ಬಂಧಿಸಿದ. ಶಿಕ್ಷೆಯನ್ನೂ ವಿಧಿಸಿದ.)

 10. ಸ್ವತಂತ್ರ ನ್ಯಾಯ ಮಂಡಲಿಗಳ ಮೂಲಕ ನ್ಯಾಯ ಪಡೆಯುವ ಹಕ್ಕು ಪ್ರತಿಯೊಬ್ಬರಿಗೆ ಇದೆ.

     (ಬಿಜ್ಜಳನು ಶರಣರಿಗೆ ನ್ಯಾಯ ಪಡೆಯುವ ಹಕ್ಕನ್ನು ನಿರಾಕರಿಸಿ ಹಿಂಸೆಗೆ ಒಳಪಡಿಸಿದ ಕಾರಣ ಕಲ್ಯಾಣದಲ್ಲಿ ಹತ್ಯಾಕಾಂಡವಾಯಿತು.)

 11. ಆರೋಪಕ್ಕೊಳಗಾದವರು ಯಾರೇ ಇರಲಿ, ʼಅಪರಾಧಿ’ ಎಂದು ತೀರ್ಪು ಬರುವವರೆಗೂ ಮುಗ್ಧರು ಎಂದು ಹೇಳುವ ಹಕ್ಕನ್ನು ಹೊಂದಿದ್ದಾರೆ.

     (ಈ ಹಕ್ಕು ಶರಣರಿಗೆ ಸಿಗುವಂಥ ನ್ಯಾಯಪದ್ಧತಿ ಬಿಜ್ಜಳನ ರಾಜ್ಯದಲ್ಲಿ ಇರಲಿಲ್ಲ. ಏಕೆಂದರೆ ಆತ ಅನ್ಯಾಯ ಮತ್ತು ಅಸಮಾನತೆಯಲ್ಲಿ ನಂಬಿಕೆ ಇಟ್ಟವರ ಒತ್ತಡಕ್ಕೆ ಮಣಿದಿದ್ದ.)

 12. ಯಾರದೇ ಖಾಸಗಿ ಬದುಕಿನಲ್ಲಿ ಕೈ ಹಾಕುವಂತಿಲ್ಲ. ಯಾರ ಘನತೆಗೂ ಕುಂದು ತರುವಂತಿಲ್ಲ.

     (“ಕೂಡಲಸಂಗಮದೇವಾ ಭಕ್ತರ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ!” ಎಂದು ಬಸವಣ್ಣನವರು ಹೇಳುತ್ತಾರೆ.)

 13. ಪ್ರತಿಯೊಬ್ಬರಿಗೂ ತಮ್ಮ ದೇಶದಲ್ಲಿ ಮುಕ್ತವಾಗಿ ಸಂಚರಿಸುವ ಹಕ್ಕಿದೆ.

     (ಮನುಸ್ಮೃತಿಯ ಪ್ರಕಾರ ಅಸ್ಪೃಶ್ಯರು ಈ ಹಕ್ಕನ್ನು ಕಳೆದುಕೊಂಡಿದ್ದರು. ಬಸವಣ್ಣನವರು “ಜಾತಿಸಂಕರವಾದ ಬಳಿಕ ಕುಲವನರಸುವರೆ” ಎಂದು ಪ್ರಶ್ನಿಸಿ ಎಲ್ಲರಿಗೂ ಮುಕ್ತವಾಗಿ ಸಂಚರಿಸುವ ಹಕ್ಕು ಬರುವಂತೆ ಮಾಡಿದರು.)

 14. ತಮ್ಮ ದೇಶದಲ್ಲೇ ಮಾನವಹಕ್ಕುಗಳ ದಮನ ನಡೆದಾಗ ಬೇರೆ ದೇಶಗಳಲ್ಲಿ ಆಶ್ರಯ ಪಡೆಯುವ ಅವಕಾಶವಿದೆ.

     (ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಅನೇಕ ಶರಣರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದರು.)

 15. ಪ್ರತಿಯೊಬ್ಬರಿಗೂ ರಾಷ್ಟ್ರೀಯತೆಯ ಹಕ್ಕಿದೆ.

     (ಇಂದಿನ ರಾಷ್ಟ್ರೀಯತೆಯ ಕಲ್ಪನೆ ಹಿಂದಿನ ಕಾಲದಲ್ಲಿ ಇರದಿದ್ದರೂ ಕಾಶ್ಮೀರದ ಮಹಾದೇವ ಭೂಪಾಲ (ಮೋಳಿಗೆ ಮಾರಯ್ಯ) ಮುಂತಾದವರು ಬಸವಣ್ಣನವರ ಪರ್ಯಾಯ ಸಮಾಜದಲ್ಲಿ ಸ್ಥಾನ ಪಡೆದಿದ್ದರು.)

 16. ದೇಶ, ಕುಲ ಮತ್ತು ಧರ್ಮಗಳನ್ನು ಮೀರಿ ಮದುವೆ ಮಾಡಿಕೊಳ್ಳುವ ಹಕ್ಕಿದೆ.

     (ಈ ಹಕ್ಕನ್ನು ಶರಣರು ಚಲಾಯಿಸಿದ ಕಾರಣ ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆ ವಿಧಿಸಲಾಯಿತು.)

 17. ಪ್ರತಿಯೊಬ್ಬರಿಗೂ ಆಸ್ತಿಯ ಹಕ್ಕಿದೆ.

     (“ನಾನು ಆರಂಬವ ಮಾಡುವೆನಯಾ ಗುರುಪೂಜೆಗೆಂದು, ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು, ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು” ಎಂದು ಬಸವಣ್ಣನವರು ಹೇಳುತ್ತಾರೆ. ಆಸ್ತಿಯ ಹಕ್ಕಿನೊಂದಿಗೆ ಸಾಮಾಜಿಕ ಜವಾಬ್ದಾರಿಯ ಬಗ್ಗೆಯೂ ತಿಳಿಸುತ್ತಾರೆ.

 18. ಪ್ರತಿಯೊಬ್ಬರು ವಿಚಾರ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಪಡೆದಿದ್ದಾರೆ.

     (ಬಸವಧರ್ಮ ವಿಚಾರ ಸ್ವಾತಂತ್ರ್ಯದ ಮೇಲೆ ನಿಂತಿದೆ. “ಗಂಡ ಶಿವಲಿಂಗದೇವರ ಭಕ್ತ, ಹೆಂಡತಿ ಮಾರಿ ಮಸಣಿಯ ಭಕ್ತೆ” ಎಂದು ಬಸವಣ್ಣನವರು ಹೇಳುವಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಸೂಚನೆ ಇದೆ.)

 19. ಪ್ರತಿಯೊಬ್ಬರು ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದಿದ್ದಾರೆ.

     (ಪ್ರತಿಯೊಬ್ಬ ಶರಣರು ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದ್ದು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ.)

 20. ಪ್ರತಿಯೊಬ್ಬರು ಶಾಂತಿಯುತವಾಗಿ ಸಭೆ ಸೇರುವ ಸ್ವಾತಂತ್ರ್ಯ ಹೊಂದಿದ್ದಾರೆ.

     (ಅನುಭವ ಮಂಟಪವು ಶಾಂತಿಯುತವಾಗಿ ಸಭೆ ಸೇರುವ ತಾಣವಾಗಿತ್ತು. ಈ ಸ್ವಾತಂತ್ರ್ಯವನ್ನು ಶರಣರು ತಮ್ಮ ಜವಾಬ್ದಾರಿಯುತ ನಡೆವಳಿಕೆಯಿಂದ ಸಾಧಿಸಿದ್ದರು.)                 

 21. ತಮ್ಮ ದೇಶದ ಸರ್ಕಾರದಲ್ಲಿ ಭಾಗಿಯಾಗುವ ಹಕ್ಕನ್ನು ಪ್ರತಿಯೊಬ್ಬರು ಪಡೆದಿದ್ದಾರೆ.

     (ಬಸವಣ್ಣನವರು ಬಿಜ್ಜಳನ ಪ್ರಧಾನಿಯಾಗಿದ್ದರು.)

 22. ಪ್ರತಿಯೊಬ್ಬರು ಸಾಮಾಜಿಕ ಭದ್ರತೆಯ ಹಕ್ಕನ್ನು ಪಡೆದಿದ್ದಾರೆ.

     (ಶರಣ ಸಂಕುಲದಿಂದಾಗಿ ಶರಣರು ಸಾಮಾಜಿಕ ಭದ್ರತೆ ಹೊಂದಿದ್ದರು.)

 23. ಪ್ರತಿಯೊಬ್ಬರು ದುಡಿಯುವ ಮತ್ತು ಕಾರ್ಮಿಕ ಸಂಘವನ್ನು ರಚಿಸುವ ಹಕ್ಕನ್ನು ಪಡೆದಿದ್ದಾರೆ.

     (ಬಸವಣ್ಣನವರಿಂದಾಗಿ ಕಾಯಕವು ಪ್ರತಿಯೊಬ್ಬರ ವ್ಯಕ್ತಿತ್ವದ ಭಾಗವಾಗಿತ್ತು. ಕಾಯಕಜೀವಿಗಳ ಸಮೂಹವೇ ಶರಣಸಂಕುಲ.)

 24. ಪ್ರತಿಯೊಬ್ಬರು ವಿಶ್ರಾಂತಿಯ ಹಕ್ಕನ್ನು ಪಡೆದಿದ್ದಾರೆ.

     (ಬಸವಣ್ಣನವರ ಕಾಲದಲ್ಲಿ ಸ್ವತಂತ್ರ ಕಾಯಕವು ಸಹಜವಾಗಿಯೇ ವಿಶ್ರಾಂತಿಯ ಹಕ್ಕನ್ನು ಒದಗಿಸಿತ್ತು.)

 25. ಗುಣಮಟ್ಟದ ಬದುಕಿನ ಹಕ್ಕನ್ನು ಪ್ರತಿಯೊಬ್ಬರು ಪಡೆದಿದ್ದಾರೆ.

     (“ಮನೆ ನೋಡಾ ಬಡವರು; ಮನ ನೋಡಾ ಘನ. ಸೋಂಕಿನಲ್ಲಿ ಶುಚಿ; ಸವಾಂಗ ಕಲಿಗಳು. ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು, ಕೂಡಲಸಂಗನ ಶರಣರು ಸ್ವತಂತ್ರಧೀರರು.” ಎಂದು ಬಸವಣ್ಣನವರು ಶರಣರ ಘನತೆವೆತ್ತ ಸರಳ ಬದುಕನ್ನು ಕೊಂಡಾಡುತ್ತಾರೆ.)

 26. ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ.

     (ಎಲ್ಲ ಕಾಯಕ ಜೀವಿಗಳು ವಚನ ರಚನೆ ಮಾಡುವಂಥ ಶಿಕ್ಷಣವನ್ನು ಪಡೆಯುವ ವ್ಯವಸ್ಥೆಯನ್ನು ಬಸವಣ್ಣನವರು ಮಾಡಿದ್ದರು.)

 27. ಸಮಾಜದ ಸಾಂಸ್ಕೃತಿಕ ಬದುಕಿನಲ್ಲಿ ಪಾಲ್ಗೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ.

     (ಜಾತಿ ಮತಗಳನ್ನು ಮೀರಿದ ಶರಣರು ಹೊಸ ಸಮಾಜದ ಸಂಸ್ಕೃತಿಯನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿದರು.)

 28. ಮಾನವ ಹಕ್ಕುಗಳ ಜಾಗತಿಕ ಘೋಷಣೆ ಪ್ರಕಾರ ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಬಯಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ.

     (ಶರಣರು ತಮ್ಮ ಈ ಸರ್ವ ಸಮಾನತೆಯ ಸಮಾಜ ಲೋಕದಲ್ಲಿ ಹಬ್ಬಲಿ ಎಂದು ಆಶಿಸಿದ್ದರು. ಆ ಕಾಲದ ಬೇರೆ ಬೇರೆ ದೇಶಗಳ ಜನ ಕಲ್ಯಾಣಕ್ಕೆ ಬಂದು ಶರಣ ಜೀವನ ಸಾಗಿಸಿದರು.)

 29. ಸಮಾಜಕ್ಕೆ ಸೇವೆ ಸಲ್ಲಿಸುವ ಕರ್ತವ್ಯ ಪ್ರತಿಯೊಬ್ಬರದಾಗಿದೆ.

     (ಶರಣರು ದಾಸೋಹದ ಮೂಲಕ ಸಮಾಜ ಸೇವೆಯ ಕರ್ತವ್ಯ ಪಾಲನೆ ಮಾಡಿದರು.)

 30. ಮೇಲೆ ತಿಳಿಸಿದ ಮಾನವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಹಾಳುಮಾಡುವಂಥ ವ್ಯಾಖ್ಯಾನ ಮಾಡಬಾರದು.

     (ಶರಣರು ತಮ್ಮ ಬಲಿದಾನ ಮಾಡಿದರೆ ಹೊರತು ತಮ್ಮ ತತ್ವಗಳಿಂದ ವಿಮುಖರಾಗಲಿಲ್ಲ.)

 ಹೀಗೆ ಬಸವಾದಿ ಪ್ರಮಥರು 12ನೇ ಶತಮಾನದಲ್ಲೇ ಮಾನವ ಹಕ್ಕುಗಳ ಪ್ರತಿಪಾದಕರಾಗಿ ಕಂಗೊಳಿಸುತ್ತಿದ್ದಾರೆ. ಅವರ ಅಭೂತಪೂರ್ವ ಸಾಧನೆ ಇದಾಗಿದೆ. ಈ ವಿಚಾರಗಳು ಪಾಶ್ಚಿಮಾತ್ಯ ಜಗತ್ತಿಗೆ ಹೊಳೆಯಲು 20ನೇ ಶತಮಾನದವರಗೆ ಕಾಯಬೇಕಾಯಿತು. ಅಲ್ಲದೆ ಎರಡು ಮಹಾಯುದ್ಧಗಳನ್ನು ಎದುರಿಸಬೇಕಾಯಿತು.

ಭಾರತದ ಸಂವಿಧಾನ ಕೂಡ ಈ ಮಾನವ ಹಕ್ಕುಗಳ ಅಂಶಗಳನ್ನು ಒಳಗೊಂಡಿರುವುದರಿಂದ ಬಸವಣ್ಣನವರ ವಚನಗಳು ಭಾರತದ ಸಂವಿಧಾನದ ಜೀವಾಳವಾಗಿವೆ. ಬಸವಣ್ಣನವರ ವಚನಗಳಂತೆ ನಡೆದರೆ ಅಂತಾರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳನ್ನು ಮತ್ತು ನಮ್ಮ ದೇಶದ ಸಂವಿಧಾನವನ್ನು ಏಕಕಾಲಕ್ಕೆ ಗೌರವಿಸಿದಂತಾಗುತ್ತದೆ. ಬಸವಣ್ಣನವರ ವಚನಗಳಿಗೆ ವಿರುದ್ಧವಾಗಿ ನಡೆದರೆ ಸಂವಿಧಾನಬಾಹಿರ ಕೃತ್ಯವಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳಿಗೆ ಅವಮಾನ ಮಾಡಿದಂತಾಗುತ್ತದೆ. ಕಲ್ಯಾಣ ಹತ್ಯಾಕಾಂಡಕ್ಕೆ ಕಾರಣವಾದ ಹರಳಯ್ಯ ಮಧುವರಸ ಮಕ್ಕಳ ಮದುವೆಯನ್ನು ಇಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭಾರತದ ಸಂವಿಧಾನ ಜೊತೆಯಾಗಿಯೇ ಗೌರವಿಸುತ್ತವೆ.

ಅನುಭವ ಮಂಟಪದ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಬೀಜಗಳು ಈ ನೆಲದಲ್ಲಿ ಮೊಳಕೆ ಒಡೆದವು ಮತ್ತು ಮಾನವ ಹಕ್ಕುಗಳ ಹೂಗಳು ಅರಳಿದವು. ಹೀಗೆ ಬಸವಣ್ಣನವರು ಈ ನೆಲದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮೂಲ ಪುರುಷರಾದರು.

ಬರೆಹ: ರಂಜಾನ್ ದರ್ಗಾ, ಧಾರವಾಡ

ಮೊಬೈಲ್: 8660173149

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments