ಅಕ್ರಮವಾಗಿ ವಿದ್ಯುತ್ ಬಳಸಿಕೊಂಡಿರುವುದಕ್ಕೆ ಬೆಸ್ಕಾಂ ವಿಧಿಸಿದ್ದ 68,526 ರೂ. ದಂಡವನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಆನ್ಲೈನ್ ಮೂಲಕ ಪಾವತಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ನಿವಾಸಕ್ಕೆ ದೀಪಾವಳಿ ದೀಪಾಲಂಕಾರಕ್ಕಾಗಿ ಅನಧಿಕೃತವಾಗಿ ಬೀದಿ ದೀಪದ ಕಂಬದಿಂದ ವಿದ್ಯುತ್ ಕಳ್ಳತನ ಮಾಡಿರುವುದಕ್ಕೆ ಬೆಸ್ಕಾಂ ದಂಡವನ್ನು ವಿಧಿಸಿತ್ತು.
2.5 ಕಿಲೋ ವ್ಯಾಟ್ಗೆ 2526 ರೂ. ನಂತೆ ಒಟ್ಟು 68,526 ರೂ. ದಂಡದ ಮೊತ್ತವನ್ನು ಕುಮಾರಸ್ವಾಮಿ ಪಾವತಿಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, “ಬೆಸ್ಕಾಂನವರು 68,526 ರೂಪಾಯಿ ದಂಡ ವಿಧಿಸಿದ್ದಾರೆ. ಆ ಬಿಲ್ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ಉಪಯೋಗ ಅಂತ ಇದೆ. 2,526 ರೂಪಾಯಿ ಹಾಕಿದ್ದಾರೆ. ನಮ್ಮ ಮನೆಗೆ 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಮಹಜರ್ ಕಾಪಿ ಕೇಳಿದ್ದೇನೆ” ಎಂದು ತಿಳಿಸಿದರು.
“ಡಿಸಿಎಂ ಡಿಕೆ ಶಿವಕುಮಾರ್ಗೆ ಸೇರಿದ ಲುಲು ಮಾಲ್ ಕಾಮಗಾರಿ ವೇಳೆ ಕರೆಂಟ್ ಬಿಲ್ ನೀಡಿಲ್ಲ. ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಕರೆಂಟ್ ನೀಡಿಲ್ಲ. ಲುಲು ಮಾಲ್ ಬಳಕೆ ಮಾಡಿದ ವಿದ್ಯುತ್ ಬಿಲ್ಗೆ ದಂಡ ಹಾಕುತ್ತೀರಾ?” ಎಂದು ಸವಾಲು ಹಾಕಿದರು.
ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು? ನನಗೆ ಕರೆಂಟ್ ಕಳ್ಳ ಅಂತ ಲೇಬಲ್ ಬೇರೆ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ದಂಡ ಕಟ್ಟಿದ್ದೇನೆ. ಇನ್ಮುಂದೆ ವಿದ್ಯುತ್ ಕಳ್ಳ ಎಂದು ಕರೆಯುವುದನ್ನು ನಿಲ್ಲಿಸಿ” ಎಂದು ವಿನಂತಿಸಿಕೊಂಡರು.
ನನ್ನನ್ನು ಭ್ರಷ್ಟಾಚಾರಿ ಎಂದಾರೂ ಕರೆಯಿರಿ, ದ್ವೇಷ, ಅಸೂಯೆ ಉಳ್ಳವ ಎಂದಾದರೂ ತಿಳಿದುಕೊಳ್ಳಿ, ಯತೀಂದ್ರ ಪ್ರಕರಣವನ್ನು ಇಷ್ಟಕ್ಕೇ ಬಿಡುವುದಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುವೆ” ಎಂದು ಎಚ್ಚರಿಸಿದರು.