ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು (ಜೂ.18) ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಏಳನೇ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ.
ವಿಧಾನಸೌಧ ಕಾರಿಡಾರಿನಲ್ಲಿ ಇಂದು ಉಚ್ಛಾಟಿತ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದು ಬೇರೆಯೇ ಸಂದೇಶ ರವಾಣಿಸಿದಂತೆ ಕಾಣುತ್ತಿದೆ.
ನಮ್ಮ ಎಲ್ಲಾ ಶಾಸಕರು ಮತ ಚಲಾಯಿಸಿದ್ದು ಹೆಚ್ಚುವರಿ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಹಾಕಿದ್ದೇವೆ ಎಂದು ಅಶೋಕ್ ಹೇಳಿದ್ದರೆ, ಶಿವರಾಂ ಹೆಬ್ಬಾರ್ ಮತ್ತು ಸ್.ಟಿ.ಸೋಮಶೇಖರ್ ಅವರು ಮತದಾನ ಗೌಪ್ಯವಾಗಿದ್ದು, ನಮ್ಮ ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ ಎಂದಿದ್ದಾರೆ.
ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವರಾಂ ಹೆಬ್ಬಾರ್, “ಕನಿಷ್ಠ ಪಕ್ಷ ಒಂದು ಮಾತಾದರೂ ಬಿಜೆಪಿ ಕೇಳಬೇಕಿತ್ತಲ್ಲ. ಅವರು ಕೇಳದೆ ನಾವು ಏನು ಮಾಡಬೇಕು. ಮತದಾನ ಗೌಪ್ಯವಾಗಿದ್ದು, ನಮ್ಮ ಆತ್ಮಸಾಕ್ಷಿಗೆ ಮತ ಹಾಕುತ್ತೇನೆ ಎಂದು ಶಿವರಾಂ ಹೆಬ್ಬಾರ್ ಹೇಳಿದರು.
ಇನ್ನು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, “ನಮಗೆ ಡಿಕೆ ಶಿವಕುಮಾರ್ ಅವರು ಕರೆ ಮಾಡಿದ್ದರು. ಬಿಡದಿಗೆ ನಾನು ಮತ್ತು ಶಿವರಾಂ ಹೆಬ್ಬಾರ್ ಹೋಗಿದ್ವಿ. ಬಿಜೆಪಿಯವರು ನಮಗೆ ಮತ ಕೇಳಿಲ್ಲ. ನಮಗೆ ಸ್ವಾಭಿಮಾನವಿದ್ದು, ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ” ಎಂದರು.
ಮುನಿಸಿಕೊಂಡಿರೋ ಶಾಸಕ ಜಿಟಿ ದೇವೇಗೌಡ್ರು ಮಾತ್ರ ರೆಸಾರ್ಟ್ಗೆ ತೆರಳಿಲ್ಲ. ಬದಲಾಗಿ ಒಂಟಿಯಾಗಿ ಬಂದು ಮತಚಲಾಯಿಸಿದ್ದಾರೆ. ಜೆಡಿಎಸ್ಗೆ ಜಿಟಿ ದೇವೇಗೌಡ ಕೈ ಕೊಟ್ರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.
ಈ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸ್ಪರ್ಧಾಕಣ ಕುತೂಹಲ ಕೆರಳಿಸಿದೆ. ಗೆಲ್ಲಿಸಬಹುದಾದ ಸ್ಥಾನಕ್ಕಿಂತ ಹೆಚ್ಚುವರಿ ಅಭ್ಯರ್ಥಿಯಾಗಿ ತಮ್ಮ ಅತ್ಯಾಪ್ತ ವಿನಯ್ ಕಾರ್ತಿಕ್ ಅವರನ್ನು ಕಣಕ್ಕೆ ಇಳಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನೇರ ಅಖಾಡಕ್ಕೆ ಇಳಿದಿದ್ದಾರೆ. ಏಕಾಂಗಿಯಾಗಿ ಗೆಲ್ಲಿಸುವಷ್ಟು ಸಂಖ್ಯಾಬಲ ಇಲ್ಲದಿದ್ದರೂ ಪಕ್ಷದ ಶಾಸಕರ ವಿಶ್ವಾಸವನ್ನು ಉಳಿಸಿಕೊಳ್ಳಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಹಾಲಿ ಸದಸ್ಯ ಗೋವಿಂದರಾಜ್ ಅವರನ್ನು ರಂಗಕ್ಕೆ ದೂಡಿದ್ದಾರೆ.


