ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತುಗೊಂಡಿರುವ ಸಿಸಿಬಿ ಘಟಕದ ಹೆಡ್ ಕಾನ್ಸ್ಟೆಬಲ್ ಸಲೀಂ ಪಾಷಾ ಅವರನ್ನು ಪೊಲೀಸ್ ಇಲಾಖೆಯ 2023ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರವಾಗಿ ವಿರೋಧಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ಮೈಸೂರು ಸಿಸಿಬಿ ಘಟಕದ ಪೊಲೀಸ್ ಕಾನ್ಸ್ಟೆಬಲ್ ಸಲೀಂ ಪಾಷಾ ಅವರು ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳವು ಸೇರಿದಂತೆ ಅನೇಕ ಗಂಭೀರ ಆರೋಪಿಗಳನ್ನು ಎದುರಿಸುತ್ತಿದ್ದಾರೆ. ಆದರೆ, ಸಲೀಂ ಪಾಷಾಗೆ ಮುಖ್ಯಮಂತ್ರಿಗಳ ಪದಕ ನೀಡಿದ್ದೇಕೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಆರೋಪ ಹೊತ್ತ ಪೊಲೀಸರಿಗೆ ಪದಕ ನೀಡಿದರೆ, ಕಷ್ಟಪಟ್ಟು ದುಡಿಯುತ್ತಿರುವ ನಿಷ್ಠಾವಂತ ಪೇದೆಗಳಿಗೆ, ಅಧಿಕಾರಗಳಿಗೆ ಮನೋಸ್ಥೈರ್ಯ ಏನಾಗಬೇಕೆಂದು ಯೋಚಿಸಿದ್ದೀರಾ? ನಿಮ್ಮ ಆಯ್ಕೆಯ ಮಾನದಂಡಗಳು ಏನೆಂಬುದನ್ನು ತಿಳಿಸಿ. ಕೂಡಲೇ ಪದಕವನ್ನು ವಾಪಾಸ್ ಪಡೆಯಬೇಕು. ಜತೆಗೆ, ಸಲೀಂ ಪಾಷಾ ವಿರುದ್ಧ ತನಿಖೆಯನ್ನು ಚುರುಕುಗೊಳಿಸಿ ಎಂದು ಯತ್ನಾಳ ಕಿಡಿಕಾರಿದ್ದಾರೆ.
ಸಲೀಂ ಪಾಷಾ ಮೇಲಿನ ಆರೋಪ ಏನು
ಸಿಸಿಬಿ ಘಟಕದ ಹೆಡ್ ಕಾನ್ಸ್ಟೆಬಲ್ ಪೇದೆ ಸಲೀಂ ಪಾಷಾ ಅವರಿಗೂ ಮುಖ್ಯಮಂತ್ರಿ ಪದಕ ದೊರಕಿದೆ. ಆದರೆ ಇವರು ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಹಾಗೂ ಗಾಂಜಾ ಪ್ರಕರಣಗಳಲ್ಲಿ ಆರೋಪಿಗಳು ಹಾಗೂ ಅವರ ಸಂಬಂಧಿಕರ ಜೊತೆಗೆ ಫೋನ್ ಮೂಲಕ ಸಂಪರ್ಕಿಸಿರುವುದು ಸಾಬೀತಾಗಿದ್ದು, ವಿಚಾರಣೆ ನಡೆಯುತ್ತಿರುವಂತೆಯೇ ರಾಜ್ಯ ಪೊಲೀಸ್ (ಶಿಸ್ತು ನಡಾವಳಿ) ಅನ್ವಯ ಜು.12ರಂದು ಸಿಸಿಬಿ ಘಟಕದ ಕಾನ್ಸ್ಟೆಬಲ್ ಸಲೀಂ ಪಾಷಾ ಅವರನ್ನು ಅಮಾನತುಗೊಳಿಸಿ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ ಆದೇಶಿಸಿದ್ದರು.