“ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆಯಾಚಿಸಲು ಸಿದ್ಧ ಎಂದಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ಮುಖ್ಯವಾಗಿ ಕಾಂಗ್ರೆಸ್ಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿತ್ತು. ಕುಮಾರಸ್ವಾಮಿ ಹೇಳಿಕೆಯಿಂದ ಎನ್ಡಿಎ ಮೈತ್ರಿಕೋಟಕ್ಕೆ ಹೊಡೆತ ಬೀಳುವ ಸಾಧ್ಯತೆ ಕಂಡು, ಡ್ಯಾಮೇಜ್ ಕಂಟ್ರೋಲ್ಗೆ ಸೋಮವಾರ ಬೆಂಗಳೂರಿನ ದಿಢೀರ್ ಆಗಿ ಜೆಪಿ ಭವನದಲ್ಲಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿದರು.
“ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ಸ್ಬಲ್ಪ ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಯಾರಿಗಾದರೂ ನೋವು ಉಂಟು ಮಾಡಿದ್ದಲ್ಲಿ ಅದಕ್ಕೆ ವಿಷಾದ ವ್ಯಕ್ತಪಡಿಸಲು ಸಿದ್ಧ” ಎಂದು ಮಾಜಿ ಕುಮಾರಸ್ವಾಮಿ ತಿಳಿಸಿದರು.
“ತುಮಕೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಿಳೆಯರ ಬಗ್ಗೆ ಅಪಮಾನ ಮಾಡಿದ್ದೇನೆ ಎಂದು ಡಿ ಕೆ ಶಿವಕುಮಾರ್ ತರಾತುರಿಯಲ್ಲಿ ಎಲ್ಲ ನಾಯಕರ ಜೊತೆಗೆ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾ ಗಾಂಧಿ ಹತ್ಯೆ ಸಂದರ್ಭದಲ್ಲಿ ದುಖಃ ಪಟ್ಟಿದ್ದು ಬಿಟ್ಟರೆ ಇವಾಗ ಎರಡನೇ ಬಾರಿ ಬೇಸರ ಪಟ್ಟಿದ್ದೇನೆ ಎಂದಿದ್ದಾರೆ. ಅಲ್ಲದೆ ಮಹಿಳೆಯರ ಪರವಾಗಿ ಕಂಬನಿ ಮಿಡಿದಿದ್ದಾರೆ. ಎರಡು ಕುಟುಂಬದ ಹೆಣ್ಣುಮಕ್ಕಳನ್ನು ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಳ್ಳುವಾಗ ದುಖಃ ಪಟ್ಟಿಲ್ಲವೇ ಡಿಕೆಶಿ” ಎಂದು ಪ್ರಶ್ನಿಸಿದರು.
“ಇದು ಪಿಕ್ ಪಾಕೆಟ್ ಗ್ಯಾರಂಟಿ ಪ್ಯಾಕೇಜ್ ಆಗಿದೆ. ತುಮಕೂರಿನಲ್ಲಿ ಗ್ಯಾರಂಟಿ ಕುರಿತಾಗಿ ನಾನು ನೀಡಿದ್ದ ಹೇಳಿಕೆ ತಿರುಚಲಾಗಿದೆ. ನನ್ನ ವಿರುದ್ಧ ಗೋಬ್ಯಾಕ್ ಕುಮಾರಸ್ವಾಮಿ ಪ್ರತಿಭಟನೆ ಮಾಡಿದ್ದಾರೆ. ಮಂಡ್ಯದಲ್ಲಿ ಹಣ ಕೊಟ್ಟಿದ್ದಕ್ಕೆ ಬಂದಿದ್ದೇವೆ ಎಂದು ಪ್ರತಿಭಟನೆಯಲ್ಲಿದ್ದ ಮಹಿಳೆಯರೇ ಹೇಳಿದ್ದಾರೆ” ಎಂದು ಕುಟುಕಿದರು.
“ಎರಡು ಸಾವಿರಕ್ಕೆ ಮರುಳಾಗಬೇಡಿ, ದಾರಿ ತಪ್ಪಬೇಡಿ ಎಂದಿದ್ದೇನೆ. ನನ್ನ ಕಾರ್ಯಕ್ರಮ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯಕ್ರಮವಾಗಿದೆ. ನಾನು ಅಶ್ಲೀಲವಾದ ಪದ ಎಲ್ಲಿ ಬಳಕೆ ಮಾಡಿದ್ದೇನೆ? ನನ್ನ ಬಗ್ಗೆ ಅವರಿಗೆ ಮಾತನಾಡಲು ಯಾವ ವಿಚಾರ ಇಲ್ಲ. ರಾಜಕೀಯ ಮಾಡಲು ಇದನ್ನು ಬಳಕೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಸುರ್ಜೇವಾಲಾ ಹೇಳಿಕೆ ಸರಿಯೇ?
“ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಮಮಾಲಿನಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದು ಮಹಿಳೆಯರಿಗೆ ಕೊಡುವ ಗೌರವವೇ? ಇವರು ಮಹಿಳೆಯರಿಗೆ ಗೌರವ ಕೊಡುವ ಮಹಾನುಭಾವರೇ?” ಎಂದು ಲೇವಡಿ ಮಾಡಿದರು.
“ಕಂಗನಾ ರಾಣಾವತ್ ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕಾಗಿ ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ್ದೀರಿ. ಅದಕ್ಕೆ ಡಿ ಕೆ ಶಿವಕುಮಾರ್ ಏನು ಹೇಳ್ತಾರೆ? ರಾಜ್ಯದಲ್ಲಿ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನು ಹೇಳಿಕೆ ಕೊಟ್ಟಿದ್ದರು? ನಿಮ್ಮಿಂದ ನಾನು ಮಹಿಳೆಯರಿಗೆ ಗೌರವ ಕೊಡುವುದು ಕಲಿಯಬೇಕಾ?” ಎಂದು ವಾಗ್ದಾಳಿ ನಡೆಸಿದರು.
“ಅತ್ಯಾಚಾರ ಅನಿವಾರ್ಯ ಆದರೆ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿದ್ದರು. ಶಾಮನೂರು ಶಿವಶಂಕರಪ್ಪ ಮಹಿಳೆಯರು ಅಡುಗೆ ಮನೆಯಲ್ಲಿ ಇರಬೇಕು ಎಂದಿದ್ದರು. ಇಂತಹ ನೂರಾರು ನಿರ್ದಶನ ಇದೆ. ಎಷ್ಟು ಕುಟುಂಬಗಳನ್ನು ಆಸ್ತಿಯ ದುರಾಸೆಗೆ ಏನೆಲ್ಲ ಮಾಡಿದ್ದೀರಿ ಎಂಬುದಕ್ಕೆ ಬೇಕಾದಷ್ಟು ಉದಾಹರಣೆ ಇದೆ” ಎಂದು ಡಿಕೆಶಿಗೆ ತಿರುಗೇಟು ಣಿಡಿದರು.
“ನನ್ನ ಹೇಳಿಕೆ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳಿಗೆ ದುಖಃಕ್ಕೆ ಒಳಗಾಗುವ ಹಾಗೆ ಮಾಡಿದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ದಾರಿ ತಪ್ಪಿದಾಗ ನನ್ನ ಹೆಂಡತಿ ಸರಿ ದಾರಿಗೆ ತಂದಿದ್ದಾರೆ ಎಂದು ನಾನು ಸದನದಲ್ಲಿ ಹೇಳಿದ್ದೇನೆ. ತಮ್ಮನಿಗೆ ಮತ ಹಾಕಿ ನೀರು ಕೊಡುತ್ತೇನೆ ಎನ್ನುವವರು ಇವಾಗ ನನಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಹರಿಹಾಯ್ದರು.