ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ ಗುಂಡು (ಪೆಲೆಟ್ಸ್) ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದ್ದು ಈ ಬಗ್ಗೆ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಹುಲಿಯ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವತ್ತೂ ಹುಲಿಯ ದರ್ಶನವೇ ಆಗಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲು ಸೂಚಿಸಿದ್ದಾರೆ.
ಶಿಕಾರಿಪುರ ಹಾಗೂ ಸಾಗರ ತಾಲೂಕಿನ ಗಡಿಭಾಗದಲ್ಲಿರುವ ಅಂಬ್ಲಿಗೊಳ ಜಲಾಶಯದ ಹಿನ್ನೀರಿನಲ್ಲಿ ಹುಲಿ ಮೃತ ದೇಹ ಸೋಮವಾರ ಸಂಜೆ ಪತ್ತೆಯಾಗಿದೆ. ಫೆ.17ರಂದು ಸೋಮವಾರ ಸಂಜೆ 7ಘಂಟೆಗೆ ಹುಲಿಯ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದ್ದು, ಹುಲಿಯ ಮೃತ ದೇಹವನ್ನು ನೀರಿನಿಂದ ಹೊರತೆಗೆದು ನೋಡಲಾಗಿದ್ದು ಅಂದಾಜು 8ರಿಂದ 10ವರ್ಷ ವಯಸ್ಸಿನ ಗಂಡು ಹುಲಿಯಾಗಿರುವುದು ಕಂಡು ಬಂದಿದೆ.
ಹುಲಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಿ, ನ್ಯಾಯಲಯದ ಅನುಮತಿ ಪಡೆದು ಫೆ.18ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಗೌತಮಪುರ ಗ್ರಾಮ ಪಂಚಾಯಿತಿ ಸದಸ್ಯರು, ಶಿಕಾರಿಪುರ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಅಂಬ್ಲಿಗೊಳ ವಲಯ ಅರಣ್ಯಾಧಿಕಾರಿ ಉಪಸ್ಥಿತಿಯಲ್ಲಿ ಪಶು ವೈದ್ಯಾಧಿಕಾರಿಗಳು, ಹುಲಿ ಮತ್ತು ಸಿಂಹಧಾಮ ತಾವರೆಕೊಪ್ಪ, ಇವರಿಂದ ಮರಣೋತ್ತರ ಪರೀಕ್ಷೆ ನಡೆಸಿ, ಸದರಿ ಗಂಡು ಹುಲಿಯ ಸಾವಿನ ಕಾರಣ ತಿಳಿಯಲು ಹೆಚ್ಚಿನ ಪರೀಕ್ಷೆಗಾಗಿ ಹುಲಿಯ ದೇಹದ ಭಾಗಗಳ ಮಾದರಿ/ಅಂಗಾಂಶಗಳನ್ನು ಸಂಗ್ರಹಿಸಲಾಗಿದೆ.