ಗುಂಪುಗಾರಿಕೆ ಹಾಗೂ ಆಂತರಿಕ ಕಚ್ಚಾಟದಿಂದ ಕೆಂಗೆಟ್ಟು ಬೌದ್ಧಿಕವಾಗಿ ದಿವಾಳಿಯಾಗಿರುವ ಬಿಜೆಪಿಯು ರಾಜ್ಯದ ಜನಪರ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, “ರಾಜ್ಯದಲ್ಲಿ ಎಂದೂ ಜನರಿಂದ ಬಹುಮತ ಪಡೆಯದ ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದು ಹತ್ತಾರು ಹಗರಣ ಮಾಡಿ 40 ಪರ್ಸೆಂಟ್ ಸರ್ಕಾರ ಎಂಬ ಕುಖ್ಯಾತಿ ಪಡೆದು ಜನರಿಂದ ತಿರಸ್ಕೃತ ವಾಗಿದೆ. ಪ್ರತಿ ಪಕ್ಷ ಸ್ಥಾನದ ಜವಾಬ್ದಾರಿ ಯನ್ನೂ ಸರಿಯಾಗಿ ನಿಭಾಯಿಸದೆ ವಿಫಲಗೊಂಡು ಇದೀಗ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಎಂಬ ಹೊಸ ನಾಟಕ ಆರಂಭಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಹಾಗೂ ಜನಪರ ತೀರ್ಮಾನಗಳನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅನಗತ್ಯ ವಿಷಯ ಮುಂದಿಡುತ್ತಿದೆ. ಮೊದಲಿಗೆ ಮುಡಾ ಆಯ್ತು, ನಂತರ ವಕ್ಫ್ ಆಯ್ತು, ಇದೀಗ ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಹೋರಾಟ ಎಂದು ಹೇಳಿದೆ. ರಾಜಕೀಯವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಎದುರಿಸಲು ಸಾಧ್ಯವಾಗದೆ ಅವರಿಗೆ ಸಂಬಂಧವೇ ಇಲ್ಲದ ಅವರ ಪಾತ್ರವೇ ಇರದ ಸಚಿನ್ ಆತ್ಮಹತ್ಯೆ ಪ್ರಕರಣ ದಲ್ಲಿ ರಾಜೀನಾಮೆ ಕೇಳುತ್ತಿರುವುದು ಬಿಜೆಪಿಯವರ ಎಳಸುತನಕ್ಕೆ ಸಾಕ್ಷಿ” ಎಂದು ಲೇವಡಿ ಮಾಡಿದ್ದಾರೆ.
“ವಕ್ಫ್ ವಿಚಾರದಲ್ಲಿ ಅಧಿವೇಶನ ದಲ್ಲಿ ಎರಡೂ ಸದನಗಳಲ್ಲಿ ಸಮರ್ಪಕ ಉತ್ತರ ನೀಡಲಾಗಿದೆ. ಆಗ ಗಪ್ ಚುಪ್ ಆಗಿ ಯಾರೂ ಏನೂ ಮಾತನಾಡಲಿಲ್ಲ. ವಿಧಾನ ಸಭೆಯಲ್ಲಿ ಉತ್ತರ ನೀಡುವಾಗ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಪ್ಪಿಸಿಕೊಂಡು ಹೋದರು. ಅಂದು ನಾಪತ್ತೆ ಆಗಿದ್ದವರು ಈಗ ಮತ್ತೆ ಕಂಪ್ಲಿ ಯಿಂದ ಹೋರಾಟ ಎಂದು ಹೊರಟಿದ್ದಾರೆ. ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಬಿಜೆಪಿಯವರು ಎಷ್ಟೇ ಬಟ್ಟೆ ಹರಿದುಕೊಂಡು ಅರಚಿದರೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ” ಎಂದರು.