ಕಾವೇರಿ ತಾಯಿಯ ಕೃಪೆಯಿಂದ ಕರುನಾಡು ಸುಭಿಕ್ಷವಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ಅಭಿಪ್ರಾಯಪಟ್ಟರು.
ಕೊಡಗಿನ ತಲಕಾವೇರಿಯಲ್ಲಿ ಗುರುವಾರ ನಡೆದ ತುಲಾಸಂಕ್ರಮಣ ಪವಿತ್ರ ತೀರ್ಥೋದ್ಭವದಲ್ಲಿ ಭಾಗವಹಿಸಿ ಮಾತನಾಡಿ, “ನಮ್ಮ ನಾಡಿನ ಜೀವ ನದಿ ಕಾವೇರಿ. ಕಾವೇರಿ ತಾಯಿಯ ಕೃಪೆಯಿಂದ ನಮ್ಮ ಕರುನಾಡು ಸುಭಿಕ್ಷವಾಗಿದೆ. ಈ ಬಾರಿ ಉತ್ತಮ ಮಳೆಯಾಗಿದ್ದು ಅಣೆಕಟ್ಟುಗಳು, ಕೆರೆಗಳು ತುಂಬಿವೆ. ನದಿಗಳು ಮೈದುಂಬಿ ಹರಿಯುತ್ತಿವೆ. ಕಾವೇರಿ ನದಿ ಪಾತ್ರದಲ್ಲೂ ಉತ್ತಮ ಮಳೆಯಾಗಿದ್ದು ನಮ್ಮ ಮೈಸೂರು ಭಾಗದ ಜನತೆಗೆ ಉತ್ತಮ ನೀರು ಲಭ್ಯವಾಗಿದೆ. ಕಾವೇರಿ ಮಾತೆಯ ಕೊಡುಗೆ ನಮ್ಮ ನಾಡಿನ ಮೇಲೆ ಅಪಾರವಾಗಿದೆ” ಎಂದರು.
“ಅತ್ಯಂತ ಸಂಭ್ರಮ ಹಾಗೂ ಖುಷಿಯಿಂದ ಈ ತೀರ್ಥೋದ್ಭವವನ್ನು ಕಣ್ತುಂಬಿಕೊಂಡಿದ್ದೇನೆ. ನಾಡಿನ ಸಮಸ್ತ ಜನತೆಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ಒಳಿತು ಮಾಡುವಂತೆ ಪ್ರಾರ್ಥಿಸಿದ್ದೇನೆ” ಎಂದು ಸಚಿವರು ತಿಳಿಸಿದರು.
ಕಾವೇರಿ ತೀರ್ಥೋದ್ಭವ ವೇಳೆ ಶಾಸಕರಾದ ಎ ಎಸ್ ಪೊನ್ನಣ್ಣ, ಡಾ. ಮಂತರ್ ಗೌಡ, ಸುಜಾಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಉಪಸ್ಥಿತರಿದ್ದರು.