ಸಹೋದರ ಡಿ ಕೆ ಸುರೇಶ್ಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ. ಜನ ನಮಗೆ ಸ್ವಲ್ಪ ವಿಶ್ರಾಂತಿ ಕೊಟ್ಟಿದ್ದಾರೆ. ಆದರೆ, ಪಕ್ಷದ ಕೆಲಸ ಮಾಡಬೇಕೆಂಬ ಆಸೆ ಇದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ” ಚನ್ನಪಟ್ಟಣ ಜನಕ್ಕೆ ಏನೂ ಆಗಿಲ್ಲ ಎಂಬ ಭಾವನೆ ಇದೆ. ನಾವು ಒಂದಷ್ಟು ಅಳಿಲು ಸೇವೆ ಮಾಡಬೇಕೆಂದು ಇದ್ದೇವೆ. ನಾವು ಅಧಿಕಾರ ಇದ್ದಾಗ ಮಾಡಿದ್ದೇವೆ. ಇದೀಗ ಸರಿಯಾದ ಸಮಯ. ಏನೋ ಒಂದು ಸಹಾಯ ಮಾಡಬೇಕೆಂದು ಇದ್ದೇವೆ” ಎಂದರು.
“ಚನ್ನಪಟ್ಟಣ ಜನತೆ ನಮಗೆ 85 ಸಾವಿರ ಮತ ಕೊಟ್ಟಿದ್ದಾರೆ. ಎಂದಿಗೂ ಆ ಜನರನ್ನು ಬಿಡಲಾಗದು. ದೇವರು ನಮಗೆ ಈಗ ಅಧಿಕಾರ ಕೊಟ್ಟಿದ್ದಾರೆ. 136 ಸೀಟ್ ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳಬೇಕು” ಎಂದು ಹೇಳಿದರು.
“ಕುಮಾರಸ್ವಾಮಿ ಚನ್ನಪಟ್ಟಣ ನೋಡುವ ಮೊದಲು ನಾನು ನೋಡಿದ್ದೇನೆ. ಕುಮಾರಸ್ವಾಮಿ ಬಹಳ ಲೇಟಾಗಿ ರಾಜಕಾರಣಕ್ಕೆ ಬಂದವರು. ನಾನು 1985ರಲ್ಲೇ ವಿಧಾನಸಭಾ ಚುನಾವಣೆಗೆ ನಿಂತೆ. ಅವರು 1995ರ ನಂತರ ರಾಜಕಾರಣಕ್ಕೆ ಬಂದವರು. ಅವರಿಗಿಂತ 10 ವರ್ಷ ಮೊದಲೇ ನನಗೆ ಚನ್ನಪಟ್ಟಣ ಗೊತ್ತು” ಎಂದರು.
ಕುಮಾರಸ್ವಾಮಿ ಬಳ್ಳಾರಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, “ಕುಮಾರಸ್ವಾಮಿಗೆ ಎಷ್ಟು ಜ್ಞಾನ ಇದೆ ಅಥವಾ ಇಲ್ಲವಾ ಗೊತ್ತಿಲ್ಲ. ನನಗಂತು ಏನೂ ಗೊತ್ತಿಲ್ಲ” ಎಂದು ಹೇಳಿದರು.
ಡಿಸಿಎಂ ಸ್ಥಾನಗಳಿಗೆ ಬೇಡಿಕೆ ಸೃಷ್ಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, “ನೀವು ಪ್ರತಿ ದಿನ ಸುದ್ದಿ ಪ್ರಕಟ ಮಾಡುತ್ತಿದ್ದೀರಲ್ಲ, ಇದರಿಂದ ಖುಷಿಯಾಗುವವರಿಗೆ ಆಗಲಿ. ಯಾರು ಏನು ಬೇಕಿದ್ದರೂ ಬೇಡಿಕೆ ಇಡಲಿ. ಪಕ್ಷ ಯಾರಿಗೆ ಏನು ಉತ್ತರ ಕೊಡಬೇಕು ಕೊಡುತ್ತದೆ” ಎಂದು ಮಾರ್ಮಿಕವಾಗಿ ನುಡಿದರು.