Homeಕರ್ನಾಟಕಸುನಿಲ್ ಬೋಸ್ ಗೆದ್ದರೆ ನಾನು ಇನ್ನಷ್ಟು ಗಟ್ಟಿಯಾಗಿ, ನನ್ನ ಶಕ್ತಿ ಹೆಚ್ಚುತ್ತದೆ: ಸಿದ್ದರಾಮಯ್ಯ

ಸುನಿಲ್ ಬೋಸ್ ಗೆದ್ದರೆ ನಾನು ಇನ್ನಷ್ಟು ಗಟ್ಟಿಯಾಗಿ, ನನ್ನ ಶಕ್ತಿ ಹೆಚ್ಚುತ್ತದೆ: ಸಿದ್ದರಾಮಯ್ಯ

ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ ಬಿಜೆಪಿಯ ಸುಳ್ಳುಗಳನ್ನು ಸೋಲಿಸಿ. ಮೈಸೂರು-ಚಾಮರಾಜನಗರ ಲೋಕಸಭೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ನಾನು ಇನ್ನಷ್ಟು ಗಟ್ಟಿಯಾಗಿ ನನ್ನ ಶಕ್ತಿ ಹೆಚ್ಚುತ್ತದೆ. ಇದಕ್ಕೆ ನೀವು ಮುಂದಾಗಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆಯಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.

“ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದಾಗಿ ರಾಜ್ಯದಲ್ಲಿ ಹೆಣ್ಣುಮಕ್ಕಳ ಆರ್ಥಿಕ‌ ಸಾಮರ್ಥ್ಯ ಹೆಚ್ಚಿದೆ. ದುಡಿಯುವ ಅವಕಾಶವೂ ಹೆಚ್ಚಿದೆ. ಪುರುಷರ ಜೇಬಿಗೆ ಹಣ ಉಳಿತಾಯವಾಗಿದೆ. ಜನಸಾಮಾನ್ಯರ ಜೇಬಿಗೆ ಹಣ ಹಾಕಿ ನಮ್ಮ ಜನರ ಕೊಳ್ಳುವ ಶಕ್ತಿ ಹೆಚ್ಚಿಸಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯ ಕಾರ್ಯಕರ್ತರೂ, ಬೆಂಬಲಿಗರೂ ನಮ್ಮ ಗ್ಯಾರಂಟಿ ಯೋಜನೆಗಳ ಫಾಲಾನುಭವಿಗಳಾಗಿದ್ದಾರೆ” ಎಂದರು.

“ನರೇಂದ್ರ ಮೋದಿ ನುಡಿದಂತೆ ನಡೆದಿದ್ದಾರಾ? ದೇಶದ ಜನರಿಗಾಗಿ ಏನೂ ಕಾರ್ಯಕ್ರಮ ರೂಪಿಸದೆ ಕೇವಲ ಅಚ್ಛೆ ದಿನ್ ಆಯೆಗಾ ಎಂದು ಡೈಲಾಗ್ ಹೊಡೆದರೆ ಸಾಕಾ? ಡೈಲಾಗ್ ನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ , ರಸಗೊಬ್ಬರ ಬೆಲೆ ಕಡಿಮೆ ಆಗತ್ತಾ? ಬರೀ ಬಾಯಲ್ಲಿ ಡೈಲಾಗ್ ಹೊಡೆದರೆ ಜನರ ಬದುಕಿನ ಸಂಕಷ್ಟ ಕಡಿಮೆ ಆಗ್ತದಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬರೀ 56 ಇಂಚಿನ ಖಾಲಿ ಎದೆ ಇದ್ದರೆ ಸಾಲದು. ಅದರೊಳಗೆ ಮಾತೃ ಹೃದಯ ಇರಬೇಕು. ಇಲ್ಲದಿದ್ದರೆ ಹೀಗೇ ಆಗೋದು. ಉದ್ಯೋಗ ಸೃಷ್ಟಿ‌ ಆಗೋದಿಲ್ಲ. ರೈತರ ಆದಾಯವೂ ದುಪ್ಪಟ್ಟಾಗುವುದಿಲ್ಲ” ಎಂದು ಟೀಕಿಸಿದರು.

“ಮುಂದಿನ ಜನ್ಮದಲ್ಲಿ ಮುಸ್ಲೀಮನಾಗಿ ಹುಟ್ಟುತ್ತೇನೆ ಎಂದವರು ದೇವೇಗೌಡರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ದೇಶಬಿಟ್ಟು ಹೋಗುತ್ತೇನೆ ಎಂದವರೂ ಇದೇ ದೇವೇಗೌಡರು. ಈಗ ತಮಗೂ ನರೇಂದ್ರ ಮೋದಿಯವರಿಗೂ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ. ಯಾಕಿಷ್ಟು ಈ ನಾಟಕ ದೇವೇಗೌಡರೇ, ನೀವು ಹೇಳಿದ್ದನ್ನು ನೆನಪಿಸಿದರೆ ಅದು ಗರ್ವ ಹೇಗಾಗುತ್ತದೆ” ಎಂದು ಪ್ರಶ್ನಿಸಿದರು.

“ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ಬಸವ ಜಯಂತಿ ದಿನ. ಎರಡನೇ ಬಾರಿ ಸಿಎಂ ಆಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆವು. ಬಸವಣ್ಣನವರು ಲಿಂಗಾಯತ ಧರ್ಮ‌ ಸ್ಥಾಪಿಸಿ ಮನುಷ್ಯ ಧರ್ಮದ ಏಳಿಗೆಗೆ ಮುಂದಾದರು. ಬಸವಾದಿ ಶರಣರು ಒಂದು ಜಾತಿ-ಧರ್ಮಕ್ಕೆ ಸೇರಿದವರಲ್ಲ. ನಾವು ಬಸವಾದಿ ಶರಣರ ಆಶಯದಂತೆ ಕಾಯಕ ಮತ್ತು ದಾಸೋಹ ಮೌಲ್ಯದಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ” ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ‌.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ದ್ರುವನಾರಾಯಣ್ ಸೇರಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಶಾಸಕರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments