ಕೇಂದ್ರ ಸಚಿವ ಸ್ಥಾನ ಉಳಿಸಿಕೊಳ್ಳುವ ಒದ್ದಾಟ, ತೋಳಲಾಟದಲ್ಲಿ ಸಂಘವನ್ನೋ, ನರೇಂದ್ರ ಮೋದಿಯನ್ನೋ ಓಲೈಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ, ಹೌದು ಕಾಂಗ್ರೆಸ್ ಪಕ್ಷ ಗಾಂಧಿಯ ತತ್ವಾದರ್ಶಗಳನ್ನು ನಂಬಿಯೇ ರಾಜಕೀಯ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ. ಆದರೆ ನಿಮ್ಮದು ಗೋಡ್ಸೆಯ ಸಂತತಿ ಹೌದೋ ಅಲ್ಲವೋ ಮೊದಲು ಸ್ಪಷ್ಟಪಡಿಸಿ. ಕನಿಷ್ಟ ಪಕ್ಷ ಗೋಡ್ಸೆ ಈ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಎಂದು ಬಹಿರಂಗವಾಗಿ ಹೇಳುವ ಧೈರ್ಯವಾದರೂ ಇದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಕುಟುಕಿದ್ದಾರೆ.
ಗೋವು, ಪಾಕಿಸ್ತಾನ, ಧರ್ಮದ ಹೆಸರಿನ ಧ್ರುವೀಕರಣವಿಲ್ಲದೆ ಬಿಜೆಪಿ ಒಂದಾದರೂ ಸಾರ್ವತ್ರಿಕ ಚುನಾವಣೆಯನ್ನಾದರೂ ಗೆದ್ದ ಉದಾಹರಣೆ ತೋರಿಸಿ. ಚುನಾವಣೆ ಬಂದಾಗಲೆಲ್ಲಾ ಗೋವು, ಧರ್ಮ, ಪಾಕಿಸ್ತಾನ ನೆನಪಾಗುತ್ತದೆ; ಆದರೆ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒಂದು, ಎರಡರಲ್ಲಿ ಸ್ಪರ್ದೆ ಮಾಡುತ್ತಿರುವುದರ ಬಗ್ಗೆ ಮಾತ್ರ ಮೌನ ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾನು ಹೇಳಿದ್ದು “ದನ ಕೊಂದವರು ಜೈಲಲ್ಲಿದ್ದಾರೆ, ಮನುಷ್ಯರನ್ನು ಕೊಂದವರು ಅಧಿಕಾರದಲ್ಲಿದ್ದಾರೆ” ಎಂದು. ಈ ಮಾತಿಗೆ ನೀವು ಇಷ್ಟೊಂದು ತಲ್ಲಣಗೊಳ್ಳುವುದೇಕೆ? 2002ರ ಗೋಧ್ರಾ ಹಿಂಸಾಚಾರದ ಬಳಿಕ “ರಾಜಧರ್ಮ ಪಾಲಿಸಿ” ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕವಾಗಿ ಹೇಳಿದ್ದು ಯಾರಿಗೆ? ಆ ನೆನಪು ಕಾಡುತ್ತಿದೆಯೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಸೋಹ್ರಾಬುದ್ದೀನ್ ಕೊಲೆ ಪ್ರಕರಣದಲ್ಲಿ ಇಂದಿನ ಗೃಹ ಸಚಿವ ಅಮಿತ್ ಶಾ ನ್ಯಾಯಾಲದಿಂದಲೇ ಗಡಿಪಾರದ ನೆನಪು ಕಾಡುತ್ತಿದ್ದೆಯೇ? ಅಥವಾ ಬಿಹಾರದ ಬಿಜೆಪಿ ಮುಖ್ಯಮಂತ್ರಿಯ ಮೇಲಿರುವ ಗಂಭೀರ ಕೊಲೆ ಪ್ರಕರಣಗಳು ಕಾಡುತ್ತಿದ್ದೆಯೇ?ಹಿಂದುಳಿದವರು, ದಲಿತರು, ಆದಿವಾಸಿಗಳು ಹಾಗೂ ಸಾಮಾನ್ಯ ಜನರ ಭಾವನೆಗಳನ್ನು ಕೆರಳಿಸಿ ಸಮಾಜವನ್ನು ವಿಭಜಿಸುವ ರಾಜಕೀಯ ನಡೆಸಿದವರು ಇಂದು ತುಷ್ಟೀಕರಣದ ಪಾಠ ಮಾಡುವುದು ಕೇಳಿದರೆ ನಗು ಬರುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಪ್ರಧಾನಿಗಳ ಹುದ್ದೆಗಳಿಗೆ ಘನತೆ, ಗೌರವ ತಂದು ಕೊಟ್ಟಿದ್ದಾರೆ ಆದರೆ ಬಿಜೆಪಿ ಪಕ್ಷ ಸಾಂವಿಧಾನಿಕ ಹುದ್ದೆಗಳಿಗೆ ಕಳಂಕ ತಂದಿರುವುದು ದೇಶಕ್ಕೆ ಗೊತ್ತಿರುವ ಸತ್ಯ. ಅಷ್ಟಕ್ಕೂ ನಿಮ್ಮ ದ್ವೇಷದ ರಾಜಕೀಯಕ್ಕೆ ರಾಜ್ಯದ ಜನರು ತಕ್ಕ ಉತ್ತರ ಕೊಟ್ಟಾಗಿದೆ ಎಂದಿದ್ದಾರೆ.


