ಪಕ್ಷ ಬಿಟ್ಟು ಹೋಗುವೆ ಎಂದು ರಾಮಲಿಂಗಾರೆಡ್ಡಿ ಎಲ್ಲಾದರೂ ಹೇಳಿದ್ದಾರೆಯೇ: ಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ
ನಮ್ಮ ಕುಟುಂಬದ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ. ನಾನು ಮುಖ್ಯಮಂತ್ರಿ, ಅವರು (ರಾಮಲಿಂಗಾರೆಡ್ಡಿ) ಸಚಿವರು. ಆದರೂ ನಾವೆಲ್ಲರೂ ಸ್ನೇಹಿತರು. ರಾಮಲಿಂಗಾರೆಡ್ಡಿ ಅವರು ಪಕ್ಷದ ಹಿರಿಯರು, ಬೆಂಗಳೂರಿನಲ್ಲಿ ಪಕ್ಷ ಉಳಿಸುತ್ತಿರುವವರು. ಪಕ್ಷ ಬೆಳೆಸಲು ಕೆಲಸ ಮಾಡುತ್ತಿರುವವರು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಮಲಿಂಗಾರೆಡ್ಡಿ ಅವರ ಜತೆ ಶುಕ್ರವಾರ ತಡರಾತ್ರಿವರೆಗೂ ಸಮಾಲೋಚನೆ ನಡೆಸಿದ ಬಳಿಕ ಖಾಸಗಿ ಹೊಟೇಲ್ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
ರಾಮಲಿಂಗಾರೆಡ್ಡಿ ಅವರ ಮುನಿಸು ಶಮನವಾಗಿದೆಯೇ ಎಂದು ಕೇಳಿದಾಗ ಹೀಗೆ ಉತ್ತರಿಸಿದರು.
ಅದೇ ಖಾತೆಯಲ್ಲೇ ಮುಂದುವರೆಯುತ್ತಾರೆಯೇ ಎಂದು ಕೇಳಿದಾಗ, “ನಾವು ಖಾತೆ ವಿಚಾರವಾಗಿ ಏನು ಮಾತನಾಡಿದ್ದೇವೆ, ಬೇರೆ ಯಾವ ವಿಚಾರ ಮಾತನಾಡಿದ್ದೇವೆ ಎಂದೆಲ್ಲಾ ಮಾಧ್ಯಮಗಳ ಮುಂದೆ ಹೇಳಲು ಆಗುತ್ತದೆಯೇ?” ಎಂದು ಮರುಪ್ರಶ್ನಿಸಿದರು.
ಇಂತಹ ಬೆಳವಣಿಗೆಗಳ ಬಗ್ಗೆ ಕೇಳಿದಾಗ, “ಇದೆಲ್ಲಾ ಆಗುತ್ತಾ ಇರಬೇಕು. ಮಳೆ, ಗುಡುಗು, ಸಿಡಿಲು, ಸೂರ್ಯ ಮುಳುಗುವುದು, ಹುಟ್ಟುವುದು ಸಹಜ” ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರು ಖಾತೆ ಬದಲಾವಣೆಗೆ ಒಪ್ಪಿಕೊಂಡಿದ್ದಾರೆಯೇ ಎಂದು ಕೇಳಿದಾಗ, “ಅವರು ಪಕ್ಷ ಬಿಟ್ಟು ಹೋಗುತ್ತಾರೆಯೇ? ಹಾಗೆಂದು ಹೇಳಿದ್ದಾರೆಯೇ? ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಒಂದಷ್ಟು ತಪ್ಪು ಸಂವಹನ ಆಗಿದೆ. ಸರಿಪಡಿಸುತ್ತೇವೆ” ಎಂದರು.


