Homeಕರ್ನಾಟಕಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿ ಹಲವು ನಿರ್ಧಾರ ಕೈಗೊಂಡ ಸಿಎಂ ಡಿ.ಕೆ....

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿ ಹಲವು ನಿರ್ಧಾರ ಕೈಗೊಂಡ ಸಿಎಂ ಡಿ.ಕೆ. ಶಿವಕುಮಾರ್

ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಡಿ ಕೆ ಶಿವಕುಮಾರ್ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 10 ಸಾವಿರ ಯುವಕರ ಸಂಘ ಸ್ಥಾಪನೆ ಹಾಗೂ 10 ಲಕ್ಷ ಅನುದಾನ, ಒಸಿ ಸಿಸಿ ಸಮಸ್ಯೆಗೆ ಪರಿಹಾರ, ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ, ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ… ಇವಿಷ್ಟು ಕರ್ನಾಟಕ ರಾಜ್ಯದಲ್ಲಿ ಯುವ ಯುಗ ಆರಂಭಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಕೈಗೊಂಡಿರುವ ಷಟ್ಪದಿಗಳು.

“ರಾಜ್ಯದ ರೈತರು ನಮ್ಮ ಬೆನ್ನೆಲುಬು, ಕೂಲಿ ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಯುತ್ತಿತ್ತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ 2 ಗಂಟೆಗಳ ಕಾಲ ಚರ್ಚೆ ಮಾಡಿ 6 ವರ್ಗದ ಜನರಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಿ ಹೊಸ ಯುವ ಯುಗ ಆರಂಭಕ್ಕೆ ತೀರ್ಮಾನಿಸಲಾಗಿದೆ” ಎಂದರು.

“ಮೊದಲ ಸಚಿವ ಸಂಪುಟದಲ್ಲಿ ಜನತೆಗೆ ಹೊಸ ಕೊಡುಗೆ ನೀಡಲು ತೀರ್ಮಾನ ಮಾಡಿದ್ದೆವು. ಇದು ಯುವ ಯುಗ. ಹೀಗಾಗಿ ಹೊಸ ಆಲೋಚನೆ ಮಾಡಿದೆವು. ರೈತರ ವಿಚಾರದಲ್ಲಿ ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ ನೀತಿ ರೂಪಿಸಬೇಕಿದೆ. ಕೇವಲ ಮಾತು ಕೊಡುವುದಲ್ಲ, ಅದನ್ನು ಜಾರಿಗೆ ತರಬೇಕು. ನಾನೇ ಬೆಂಗಳೂರಿನಲ್ಲಿ ಕಸ ಎತ್ತುವ ವಿಚಾರವಾಗಿ 3 ವರ್ಷಗಳಲ್ಲಿ ನಮ್ಮ ಮುಂದೆ ಎಷ್ಟು ಸವಾಲುಗಳು ಎದುರಾಗಿವೆ ಎಂದು ಅನುಭವಿಸಿದ್ದೇನೆ. ಅದೇ ರೀತಿ ದೊಡ್ಡ ಸವಾಲು ಎದುರಿಸಬೇಕಾಗಿದೆ. ರೈತರ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ. ಉದ್ಯೋಗ, ಶಿಕ್ಷಣಕ್ಕಾಗಿ ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಬೇಕಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಬಗ್ಗೆ ಸಂಕುಚಿತ ಮನೋಭಾವ ನಿರ್ಮೂಲನೆ ಮಾಡಬೇಕಿದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

“ನಮ್ಮ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಲ್ಲಿ ಮೊದಲನೆಯದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ. ನಾನು ಬೇರೆ ಭಾಗಗಳಿಗೆ ಹೋದಾಗೆಲ್ಲಾ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದೀರಿ ನಮಗೆ ಇಲ್ಲ ಎಂದು ಬಾಲಕರು ಕೇಳುತ್ತಿದ್ದರು. ಹೀಗಾಗಿ ವಿದ್ಯಾರ್ಥಇಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ತೀರ್ಮಾನಿಸಿದ್ದೇವೆ. ಈ ಸೌಲಭ್ಯ ಪಡೆಯಲು ಅರ್ಜಿ ಹಾಕಬೇಕಿದೆ” ಎಂದು ತಿಳಿಸಿದರು.

ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ

“ಎರಡನೆಯದಾಗಿ ಉದ್ಯೋಗದ ಸಮಸ್ಯೆಗೆ ನಿವಾರಣೆ ನೀಡಲು, ನಮ್ಮ ಸರ್ಕಾರ 56 ಸಾವಿರ ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ಈ ನೇಮಕಾತಿ ವೇಳಾಪಟ್ಟಿ ಬಿಡುಗಡೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಮಧ್ಯೆ ಈ ರಾಜ್ಯ ಮಾನವ ಸಂಪನ್ಮೂಲದಲ್ಲಿ ಶಕ್ತಿಶಾಲಿ ರಾಜ್ಯ. ಇಡೀ ದೇಶದಲ್ಲೇ ನಮ್ಮಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ಇಲ್ಲಿ ಸರ್ಕಾರವೇ ಖಾಸಗಿ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲು ಉದ್ಯೋಗ ವಿನಿಮಯ ಸೌಲಭ್ಯ ಕಲ್ಪಿಸಲಾಗುವುದು. ಖಾಸಗಿ ಸಂಸ್ಥೆಗೆ ಯಾವ ರೀತಿ ಉದ್ಯೋಗಿಗಳು ಬೇಕು ಅದಕ್ಕೆ ತಕ್ಕಂತೆ ಯುವಕರನ್ನು ತರಬೇತಿ ನೀಡಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಇಲ್ಲಿ ಕನ್ನಡಿಗರಿಗೆ ಹೆಚ್ಚಿನ ಪಾಲು ನೀಡಲಾಗುವುದು. ಈ ಕುರಿತ ಶೇಕಡಾವಾರು ಪ್ರಮಾಣವನ್ನು ಎಲ್ಲರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಇದಕ್ಕೆ ಒಂದು ತಿಂಗಳ ಕಾಲಾವಧಿಯಲ್ಲಿ ರೂಪುರೇಷೆ ಸಿದ್ಧಪಡಿಸಲು ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಲಾಗುವುದು” ಎಂದು ವಿವರಿಸಿದರು.

10 ಸಾವಿರ ಯುವಕರ ಸಂಘ ಸ್ಥಾಪನೆ

“ಮೂರನೆಯದು ನನ್ನ ಕನಸಿನ ಚಿಂತನೆಯಾಗಿದೆ. 10 ಸಾವಿರ ಭಾರತ ಜೋಡೋ ಯುವಕರ ಸಂಘ ರಚಿಸಲು ತೀರ್ಮಾನ ಮಾಡಲಾಗಿದೆ. ಪ್ರತಿ ಪಂಚಾಯ್ತಿಯಲ್ಲಿ ಯುವಕರ ಸಂಘ ರಚಿಸಬೇಕು. ಈ ಸಂಘದಲ್ಲಿ ಕನಿಷ್ಠ 150-200 ಯುವಕರಿರುತ್ತಾರೆ. ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಸಂಘ ರೂಪಿಸಲಾಗುವುದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಿಕೊಳ್ಳಲು, ಸಾಮಾಜಿಕ ಸಾಮರಸ್ಯಕ್ಕೆ, ಯುವಕರ ಪ್ರತಿಭೆ ಅವರಣಕ್ಕೆ ವೇದಿಕೆ ಕಲ್ಪಿಸಲಾಗುವುದು. ಈ ಸಂಘಕ್ಕೆ ಸರ್ಕಾರ 10 ಲಕ್ಷ ಅನುದಾನ ನೀಡಲಿದೆ. ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ಮುಂದಿನ ದಿನಗಳಲ್ಲಿ ರೂಪುರೇಷೆ ತೀರ್ಮಾನಿಸಲಾಗುವುದು” ಎಂದು ಹೇಳಿದರು.

ಒಸಿ ಸಿಸಿ ಸಮಸ್ಯೆಗೆ ಪರಿಹಾರ

“ನಾಲ್ಕನೆಯದಾಗಿ ಇನ್ನು ನಮ್ಮನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಮನೆ ಕಟ್ಟುವವರಿಗೆ ಒಸಿ ಹಾಗೂ ಸಿಸಿ ನೀಡುವ ವಿಚಾರ. ಈ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡಿ 2500 ಅಡಿವರೆಗೂ 20% ಹೆಚ್ಚುಕಮ್ಮಿ ಇದ್ದರೂ ಒನ್ ಟೈಮ್ ಕಳೆದ ತಿಂಗಳು 31ರವರೆಗೂ ಅರ್ಜಿ ಹಾಕಿ ಮನೆ ಕಟ್ಟಿರುವವರಿಗೆ ಅವಕಾಶ ನೀಡಲು ತೀರ್ಮಾನಿಸಿದ್ದೇವೆ. ಮನೆಕಟ್ಟುವವರಿಗೆ ನೀರು ನೀಡುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ

“ಐದನೆಯದಾಗಿ ಬಿ ಖಾತಾಯಿಂದ ಎ ಖಾತಾ ಪರಿವರ್ತನೆಗೆಯನ್ನು ಬೆಂಗಳೂರು ಮಾತ್ರವಲ್ಲದೇ, ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಆಗಿದೆ. ಜನರ ಆಸ್ತಿಗೆ ಸರಿಯಾದ ದಾಖಲೆ ಮಾಡಿಕೊಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣ; 2 ಸಾವಿರ ಕೋಟಿ ಅನುದಾನ

“ಆರನೇ ತೀರ್ಮಾನ ಬೆಂಗಳೂರಿಗೆ ಸಂಬಂಧಿಸಿದ್ದು, ಬೆಂಗಳೂರಿನ ನಗರಗಳ ರಸ್ತೆಗಳಲ್ಲಿ ಹಾಲಿ ಯೋಜನೆಗಳನ್ನು ಹೊರತುಪಡಿಸಿ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. 3-4 ತಿಂಗಳಲ್ಲಿ ಡಾಂಬರೀಕರಣ ಮಾಡಲು ತೀರ್ಮಾನಿಸಿದ್ದೇವೆ. ಉಳಿದ ವಿಚಾರಗಳನ್ನು ಬೇರೆ ದಿನಗಳಲ್ಲಿ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.

ಉಚಿತ ಬಸ್ ಪಾಸ್ ಗೆ ಎಷ್ಟು ವೆಚ್ಚವಾಗಲಿದೆ ಎನ್ನಜುವ ಪ್ರಶ್ನೆಗೆ, “ವಿದ್ಯಾರ್ಥಿಗಳು ನಮ್ಮ ಮಕ್ಕಳು. ಅವರಿಗೆ ಉಚಿತ ಪ್ರಯಾಣಕ್ಕೆ ಎಷ್ಟು ಸಾವಿರ ಕೋಟಿ ಆದರೂ ನೀಡುತ್ತೇವೆ” ಎಂದರು.

ಇನ್ನು ಯುವ ಸಂಘಗಳ ಅನುದಾನಕ್ಕೆ 1 ಸಾವಿರ ಕೋಟಿ ಆಗುತ್ತದೆ ಇದನ್ನು ಹೇಗೆ ನೀಡುತ್ತೀರಿ ಎಂದು ಕೇಳಿದಾಗ, “ಇದು ಡಿ.ಕೆ. ಶಿವಕುಮಾರ್ ಅವರ ಸರ್ಕಾರ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments