Homeದೇಶಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ...

ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ರೂ.; ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿ.ಕೆ. ಶಿವಕುಮಾರ್

ಮಹಿಳೆಯರಿಗೆ 2 ಸಾವಿರ ರೂ., 3 ಲಕ್ಷ ಸರ್ಕಾರಿ ಹುದ್ದೆ ಭರ್ತಿ, ಭೂ ರಹಿತ ರೈತರಿಗೆ ವಾರ್ಷಿಕ 6 ಸಾವಿರ ಸೇರಿದಂತೆ ತಮಿಳುನಾಡಿನ ಎಲ್ಲಾ ವರ್ಗದವರ ಹಿತ ಕಾಪಾಡುವ ಮಹತ್ತರ ಭರವಸೆಗಳನ್ನು ಒಳಗೊಂಡ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಿದರು.

ಚೆನ್ನೈನ ತಮಿಳುನಾಡು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.

“ಈಗ ಕಾರ್ತಿ ಚಿದಂಬಂರಂ ಹಾಗೂ ಅವರ ತಂಡ ತಮಿಳುನಾಡಿನ ಮೂಲೆ ಮೂಲೆ ಸಂಚರಿಸಿ, ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಿ, ಜನರ ಭಾವನೆ ಅರಿತು ಈ ಪ್ರಣಾಳಿಕೆ ರೂಪಿಸಿದ್ದಾರೆ. ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕು, ಮಹಿಳೆ ಶಕ್ತಿಶಾಲಿಯಾದರೆ ಕುಟುಂಬ ಶಕ್ತಿಶಾಲಿಯಾಗುತ್ತದೆ. ಕುಟುಂಬ ಶಕ್ತಿಶಾಲಿಯಾದರೆ, ಸಮಾಜ ಬಲಿಷ್ಠವಾಗುತ್ತದೆ. ಇದಕ್ಕಾಗಿ ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ನೀಡಲು ತೀರ್ಮಾನಿಸಲಾಗಿದೆ. ನೇರ ಹಣ ವರ್ಗಾವಣೆ ಮೂಲಕ ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ಹಣ ತಲುಪಿಸಲಾಗುವುದು” ಎಂದು ತಿಳಿಸಿದರು.

“ಇನ್ನು ಆರೋಗ್ಯ ವಿಚಾರ, ಮೀನುಗಾರರ ಸಮಸ್ಯೆ, ಭೂ ದಾಖಲೆ ಹಂಚಿಕೆ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ರಾಜ್ಯದ ಜನರ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗಿದೆ. ನಿರುದ್ಯೋಗಿ ಯುವಕರಿಗಾಗಿ 3 ಲಕ್ಷ ಸರ್ಕಾರಿ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲಾಗುವುದು. ಹುದ್ದೆ ಖಾಲಿಯಾದ 300 ದಿನಗಳಲ್ಲಿ ಅವುಗಳನ್ನು ಭರ್ತಿ ಮಾಡಲಾಗುವುದು” ಎಂದು ತಿಳಿಸಿದರು.

“ತಮಿಳುನಾಡು ದೇಶದಲ್ಲೇ ವೈಶಿಷ್ಟ ರಾಜ್ಯವಾಗಿದೆ. ತನ್ನದೇ ಆದ ಇತಿಹಾಸವಿದೆ. ಇಲ್ಲಿ ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಹೀಗಾಗಿ ನಮ್ಮ ಪ್ರಣಾಳಿಕೆಯಲ್ಲಿ ನಾವು ಇಡೀ ದೇಶ ದಕ್ಷಿಣ ಭಾರತ ಅದರಲ್ಲೂ ತಮಿಳುನಾಡಿನ ದೇವಾಲಯಗಳತ್ತ ಆಕರ್ಷಿಸಲು ಕಾರ್ಯಕ್ರಮ ರೂಪಿಸಲಾಗುವುದು. ಪಿಂಚಣಿ ದರ ಏರಿಕೆ ಮಾಡಲಾಗಿದ್ದು, ಭೂರಹಿತ ರೈತರಿಗೆ ವಾರ್ಷಿಕ 6 ಸಾವಿರ ಹಣ ನೀಡಲಾಗುವುದು” ಎಂದರು.

“ಇಂದು ತಮಿಳುನಾಡಿನ ಕಾಂಗ್ರೆಸ್ ಸಮಿತಿಯು ದೂರದೃಷ್ಟಿಯ ದಾಖಲೆಯನ್ನು ಬಿಡುಗಡೆ ಮಾಡುತ್ತಿದೆ. ಈ ಪ್ರಣಾಳಿಕೆ ತಮಿಳುನಾಡಿನ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬಲಿದೆ. ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನರ ಬಗ್ಗೆ ಕಾಳಜಿ ವಹಿಸುತ್ತದೆ. ಮಹಿಳೆಯರು, ಯುವಕರು, ರೈತರು ಹಾಗೂ ಶೋಷಿತ ವರ್ಗದವರನ್ನು ರಕ್ಷಣೆ ಮಾಡುತ್ತದೆ. ನಾವು ಇಲ್ಲಿ ಕಳೆದ ಹತ್ತು ವರ್ಷಗಳಿಂದ ಮೈತ್ರಿ ಸರ್ಕಾರದ ಭಾಗವಾಗಿ ರಾಜ್ಯವನ್ನು ಬಲಿಷ್ಠಗೊಳಿಸಲು ಶ್ರಮಿಸಿದ್ದೇವೆ. ಮುಂದಿನ ಐದು ವರ್ಷಗಳ ಕಾಲ ಈ ರಾಜ್ಯದ ಸೇವೆ ಮಾಡುವ ವಿಶ್ವಾಸವಿದೆ. ನಾವು ಜಾತ್ಯಾತೀತ ತತ್ವದ ಮೇಲೆ ಒಂದಾಗಿ ದೇಶವನ್ನು ಮುನ್ನಡೆಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದರು.

ಕರ್ನಾಟಕದಲ್ಲಿ ನುಡಿದಂತೆ ನಡೆದಿದ್ದೇವೆ

“ಕರ್ನಾಟಕದಲ್ಲಿ ನಾವು ಕೊಟ್ಟ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಮೊದಲ ಆರು ತಿಂಗಳ ಒಳಗಾಗಿ ಜಾರಿ ಮಾಡಿದೆವು. ಪ್ರಧಾನಮಂತ್ರಿಗಳು ಸೇರಿದಂತೆ ಬಿಜೆಪಿಯ ಅನೇಕ ಸ್ನೇಹಿತರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ನಾವು ಈ ಗ್ಯಾರಂಟಿ ಯೋಜನೆ ಜಾರಿ ಮಾಡಿದ ಬಳಿಕ ಇಡೀ ದೇಶದೆಲ್ಲೆಡೆ ನಮ್ಮ ಮಾದರಿಯನ್ನೇ ಅವಲಂಬಿಸಿದ್ದಾರೆ. ಯಾವುದೇ ರಾಜ್ಯವಾಗಲಿ, ಯಾವುದೇ ಸರ್ಕಾರವಿರಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ರಾಜ್ಯಗಳಲ್ಲಿ ಬಿಜೆಪಿ ನಮ್ಮ ಯೋಜನೆಗಳನ್ನು ನಕಲು ಮಾಡಲಾಗಿದೆ. ಕಾಂಗ್ರೆಸ್ ಬೆಂಬಲಿತ ಡಿಎಂಕೆ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳ ಮೂಲಕ ಸಮಾಜದ ಎಲ್ಲಾ ವರ್ಗದವರನ್ನು ತಲುಪಿದೆ” ಎಂದರು.

“ಯುಪಿಎ ಸರ್ಕಾರದ ಅವಧಿಯಲ್ಲಿ ಮನರೇಗಾ ಮೂಲಕ ಉದ್ಯೋಗ ಖಾತರಿ, ಆಹಾರ ಭದ್ರತೆ, ಶೈಕ್ಷಣಿಕ, ಮಾಹಿತಿ ಹಕ್ಕು ನೀಡಿದ್ದೇವೆ. ಬಿಜೆಪಿ ಅಥವಾ ಅವರ ಮೈತ್ರಿ ಸರ್ಕಾರ ತಮ್ಮ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಮೈತ್ರಿ ಸರ್ಕಾರ ಇರುವ ರಾಜ್ಯಗಳಲ್ಲಿ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ನಿಮ್ಮ ಅನೇಕ ಸಮಸ್ಯೆಗಳು ಬಗೆಹರಿದಿದ್ದು, ಶಾಂತಿಯುತ ಹಾಗೂ ಪ್ರಗತಿಯ ಹಾದಿಯಲ್ಲಿ ರಾಜ್ಯವನ್ನು ಮುನ್ನಡೆಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಮೈತ್ರಿಕೂಟ ಜನಾಶೀರ್ವಾದದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಜನರ ಸೇವೆ ಮಾಡುವ ವಿಶ್ವಾಸ ನಮಗಿದೆ. ತಮಿಳುನಾಡಿನ ಜನತೆ ಪ್ರಜ್ಞಾವಂತರು, ಬುದ್ಧಿವಂತರು, ಪ್ರಗತಿಪರ ಆಲೋಚನೆ ಹೊಂದಿದ್ದು ಕಾಂಗ್ರೆಸ್ ಹಾಗೂ ನಮ್ಮ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಬೇಕು” ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments