ದಾವಣಗೆರೆ ದಕ್ಷಿಣದ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅಭ್ಯರ್ಥಿತನ ವಾಪಸ್ ಪಡೆದಿರಬಹುದು; ಹರಿದ ಬಟ್ಟೆಯನ್ನು ತೇಪೆ ಹಾಕಬಹುದೇ ಹೊರತು ಅದು ಹೊಸ ಬಟ್ಟೆ ಆಗುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ತುಂಡಾದ ಹಗ್ಗಕ್ಕೆ ಗಂಟು ಹಾಕಬಹುದೇ ಹೊರತು ಅದು ಹೊಸ ಹಗ್ಗ ಆಗುವುದಿಲ್ಲ ಎಂದರು.
ಮುಸಲ್ಮಾನ ಬಂಧುಗಳೆಲ್ಲ ನಮಗೆ ಮತ ಹಾಕುತ್ತಾರೆಂದು ನಾನು ಹೇಳಲಾರೆ. ಯಾಕೆಂದರೆ ಕಾಂಗ್ರೆಸ್ಸಿನವರು ಅವರ ತಲೆಗೆ ಬಿಟ್ಟ ಹುಳಗಳು ಸತ್ತಿಲ್ಲ; ಅವು ಬದುಕಿವೆ ಎಂದು ನುಡಿದರು. ಅವರನ್ನು ದಾರಿ ತಪ್ಪಿಸಿ ನಿಮ್ಮ ಮತಬ್ಯಾಂಕ್ ಮಾಡಿದ್ದೀರಿ. ಅವರೆಲ್ಲ ವಿರೋಧ ಮಾಡಿದರೂ ದೇಶ ಆಳುತ್ತಿದ್ದೇವೆ. ಮುಸಲ್ಮಾನರು ಭಾರತದಲ್ಲಿ ಸುಭದ್ರವಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ಕೇವಲ ಮುಸಲ್ಮಾನರಿರುವ ಪಾಕಿಸ್ತಾನ, ಬಾಂಗ್ಲಾದೇಶ, ಅಪಘಾನಿಸ್ತಾನದಲ್ಲಿ ಎಷ್ಟು ಸಮಸ್ಯೆಗಳಿವೆ ನೋಡಿ ಎಂದು ಕೇಳಿದರು.
ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನ ಎಲ್ಲ ರೀತಿಯ ರಕ್ಷಣೆಯನ್ನು ಅವರಿಗೂ ಕೊಟ್ಟಿದೆ. ಆದ್ದರಿಂದ ಅವರು ಸುಭದ್ರತೆಯಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದರು. ಮನುವಾದ ಬದುಕಿರುವುದು ಕಾಂಗ್ರೆಸ್ಸಿನ ತಲೆಯಲ್ಲಿ ಮಾತ್ರ ಎಂದು ಟೀಕಿಸಿದರು.
ಸರ್ವರಿಗೂ ಸಮಪಾಲು, ಸಮಬಾಳು ಕೊಡುವುದು ಬಿಜೆಪಿಯ ಕರ್ತವ್ಯ. ಅದನ್ನು ಮಾಡುತ್ತಿದ್ದೇವೆ ಎಂದರು. ಕಾಂಗ್ರೆಸ್ಸಿಗರೇ, ಬಿಜೆಪಿ ಗುಮ್ಮ ತೋರಿಸಿ ಎಷ್ಟು ದಿನ ನೀವು ಮುಸಲ್ಮಾನರನ್ನು ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಅವರಲ್ಲೂ ಯುವಕರು, ತಿಳಿದವರು ಇದ್ದು ಯೋಚನೆ ಮಾಡುತ್ತಾರೆ. ಕಾಂಗ್ರೆಸ್ ನಮಗೇನು ಮಾಡಿದೆ? ಪ್ರಧಾನಮಂತ್ರಿ ಮೋದಿಯವರು ನಮಗೇನಾದರೂ ಅನ್ಯಾಯ, ವಂಚನೆ ಮಾಡಿದ್ದಾರಾ ಎಂದು ಯೋಚಿಸುತ್ತಾರೆ. ಆ ಜನಾಂಗಗಳು ಯೋಚನೆ ಮಾಡಿ ಸ್ವಾಭಿಮಾನವನ್ನು ಉಳಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.


