ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ನರೇಂದ್ರ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ. ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇಡೀ ಬಿಜೆಪಿ ತಂಡ ಕಲಬುರ್ಗಿಯಲ್ಲಿ “ಸದಾರಮೆ ನಾಟಕ” ಪ್ರದರ್ಶಿಸಿದ್ದರು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಎಕ್ಸ್ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಅದೇ ವ್ಯಕ್ತಿ ಈಗ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ, ಇದಕ್ಕೆ ಬಿಜೆಪಿ ನಾಯಕರು ಉತ್ತರ ಹೇಳಲೇಬೇಕಾಗಿದೆ. ಶೋಷಿತ ಸಮುದಾಯಗಳ ಮೀಸಲಾತಿ ರದ್ದುಗೊಳಿಸಬೇಕು, ಸಮುದಾಯ ಆಧಾರಿತ ಮೀಸಲಾತಿ ಕೇಳುವವರನ್ನು ಜೈಲಿಗಟ್ಟಬೇಕು ಎಂಬ ಮಾತುಗಳನ್ನು ಆಡಿದ್ದಾನೆ. ಈ ಬಗ್ಗೆ ಬಿಜೆಪಿಯವರು ಮೌನವಹಿಸಿರುವುದೇಕೆ? ಇದು ಬಿಜೆಪಿಯ ಒಳಮನಸಿನ ಮಾತುಗಳೇ? ಈ ಮಾತುಗಳನ್ನು ಬಿಜೆಪಿ ಅನುಮೋದಿಸುತ್ತದೆಯೇ” ಎಂದು ಪ್ರಶ್ನಿಸಿದ್ದಾರೆ.
“ಈ ವ್ಯಕ್ತಿಯ ಪರವಹಿಸಿ, ದಂಡೆತ್ತಿ ಬಂದು ‘ದಂಡ’ಯಾತ್ರೆ ಮಾಡಿದ್ದ ಆರ್ ಅಶೋಕ್, ಬಿ ವೈ ವಿಜಯೇಂದ್ರ ಹಾಗೂ ಚಲವಾದಿ ನಾರಾಯಣಸ್ವಾಮಿ ಅವರೇ, ಈತನ ಮಾತುಗಳಿಗೆ ನಿಮ್ಮ ಉತ್ತರವೇನು? ಈತನ ಅಭಿಪ್ರಾಯ ನಿಮ್ಮ ಅಭಿಪ್ರಾಯವೂ ಆಗಿದೆಯೇ? RSSನ ಚಿಂತನಾ ಕ್ರಮಗಳಿಂದಲೇ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ” ಎಂದು ಕುಟಿಕಿದ್ದಾರೆ.


