• ಬಾಕಿ ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇಗೆ ಸೂಚನೆ
• ಎಸಿ ಆದೇಶಗಳು ಕಡ್ಡಾಯವಾಗಿ ಆರ್ಸಿಸಿಎಂನಲ್ಲಿ ದಾಖಲು
• ಅನುಮಾನಿತ ಆದೇಶಗಳ ಮರುಪರಿಶೀಲನೆಗೆ ಜಿಲ್ಲಾಧಿಕಾರಿಗೆ ಆದೇಶ
ಆಡಳಿತ ಹಾಗೂ ವಿಪಕ್ಷ ನಾಯಕರಿಂದ ಅಸಾಧ್ಯ ಎಂದು ಬಣ್ಣಿಸಲಾಗುತ್ತಿದ್ದ ಕೆಲಸವನ್ನು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಸಹಕಾರದಿಂದ ಇಂದು ನಾವು ಸಾಧ್ಯವಾಗಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಪ್ರಶಂಸಿಸಿದರು.
ಸೋಮವಾರ ವಿಕಾಸಸೌಧದಿಂದ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “2023ಕ್ಕೂ ಮುಂಚೆ ಆಡಳಿತ ನಡೆಸಿದ ಸರ್ಕಾರಗಳು ಎಸಿ ನ್ಯಾಯಾಲಯದಲ್ಲಿ ಅವಧಿ ಮೀರಿದ 62,857 ತಕರಾರು ಪ್ರಕರಣಗಳನ್ನು ವಿಲೇವಾರಿ ಮಾಡದೆ ಉಳಿಸಿಹೋಗಿದ್ದವು. ಇದಲ್ಲದೆ, 11,000 ಪ್ರಕರಣಗಳನ್ನು ಆರ್ಸಿಸಿಎಂಎಸ್ ನಲ್ಲಿ ದಾಖಲು ಮಾಡಿರಲಿಲ್ಲ. ಇವೆಲ್ಲವನ್ನೂ ಕೂಡಿದರೆ ಒಟ್ಟಾರೆ 73,000 ಪ್ರಕರಣಗಳ ಬಾಕಿ ಇದ್ದವು. ಜನ ಸಾಮಾನ್ಯರು ದಿನನಿತ್ಯ ಸರ್ಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು” ಎಂದು ವಿಷಾದಿಸಿದರು.
“ನಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಈ ಎಲ್ಲಾ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಿ ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ್ದೆ. ವಿಪಕ್ಷದ ನಾಯಕರಿರಲಿ, ಸ್ವತಃ ಆಡಳಿತ ಪಕ್ಷದ ನಾಯಕರೇ ಈ ಕೆಲಸ ಅಸಾಧ್ಯ ಎಂದಿದ್ದರು. ಆದರೆ, ಇಂದು ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಸಹಕಾರದಿಂದ, ಶ್ರಮದಿಂದ ಅಸಾಧ್ಯ ಎಂದು ಬಣ್ಣಿಸಲಾಗಿದ್ದ ಕೆಲಸವನ್ನು ಸಾಧ್ಯವಾಗಿಸಲಾಗಿದೆ. ಅವಧಿ ಮೀರಿದ 73,000 ಪ್ರಕರಣಗಳನ್ನು ಪ್ರಸ್ತುತ 10656 ಕ್ಕೆ ಇಳಿಸಲಾಗಿದೆ. ಈ ಮೂಲಕ ಜನರು ಅನಗತ್ಯವಾಗಿ ಸರ್ಕಾರಿ ಕಚೇರಿಗೆ ಅಲೆಯುವ ಪ್ರಸಂಗಕ್ಕೆ ಅಂತ್ಯ ಹಾಡಲಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ಎಸಿ ನ್ಯಾಯಾಲಯಗಳಲ್ಲಿ ಕಳೆದ ಎರಡೂವರೆ ವರ್ಷದಿಂದ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಆದರೂ, ಇನ್ನೂ 10,000 ಕ್ಕೂ ಅಧಿಕ ಅವಧಿ ಮೀರಿದ ಪ್ರಕರಣಗಳು ಬಾಕಿ ಇದೆ. ಈ ಪೈಕಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅಧಿಕ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿಗೊಳಿಸಬೇಕು. ಮಾರ್ಚ್ ತಿಂಗಳ ನಂತರ ಯಾವುದೇ ಹಳೆಯ ಪ್ರಕರಣಗಳ ಗೊಡವೆ ಇರಕೂಡದು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
“ಈ ಹಿಂದೆ ಎಸಿ ನ್ಯಾಯಾಲಯಗಳ ಆದೇಶವನ್ನು ಆರ್ಸಿಸಿಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವ ಪ್ರವೃತ್ತಿ ಇರಲಿಲ್ಲ. ಇದರಿಂದ ಕೆಲ ಅಧಿಕಾರಿಗಳು ತಮ್ಮ ಇಷ್ಟ ಬಂದಂತೆ ಆದೇಶ ನೀಡಿರುವ ಪ್ರಸಂಗಗಳೂ ಕಂಡುಬಂದಿದೆ. ಎಸಿ ಆದೇಶಗಳನ್ನು ನ್ಯಾಯಬದ್ಧಗೊಳಿಸುವ ನಿಟ್ಟಿನಲ್ಲಿ ಈ ಹಿಂದಿನ ಎಲ್ಲಾ ಅನುಮಾನಿತ ಆದೇಶಗಳನ್ನೂ ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಪ್ರಸ್ತುತ ಆದೇಶಗಳನ್ನು ಆರ್ಸಿಸಿಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಲು ಸೂಚಿಸಿದ್ದು, ಉಪ ವಿಭಾಗಾಧಿಕಾರಿಗಳ ಎಲ್ಲಾ ಆದೇಶಗಳನ್ನೂ ಪಾರದರ್ಶಕಗೊಳಿಸಲಾಗಿದೆ. ಈ ಮೂಲಕ ಜನ ಸಾಮಾನ್ಯರಿಗೆ ನ್ಯಾಯವನ್ನು ಖಚಿತಪಡಿಸಲಾಗಿದೆ” ಎಂದು ಅವರು ಅಧಿಕಾರಿಗಳನ್ನು ಎಚ್ಚರಿಸಿದರು.
“ಅವಧಿ ಮೀರಿದ ಎಲ್ಲಾ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಉದ್ದೇಶದಿಂದ ಕಳೆದ ಎರಡೂವರೆ ವರ್ಷಗಳಿಂದ ಉಪ ವಿಭಾಗಾಧಿಕಾರಿಗಳಿಗೆ ಅದನ್ನೇ ಪ್ರಮುಖ ಜವಾಬ್ದಾರಿ ಎಂದು ವಹಿಸಲಾಗಿತ್ತು. ಆದರೆ, ಇದೀಗ ಉಪ ವಿಭಾಗಾಧಿಕಾರಿಗಳು ಬೇರೆ ಪ್ರಮುಖ ಕೆಲಸಗಳ ಕಡೆಗೂ ಮುಖ ಮಾಡಬೇಕಿದೆ. ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಜಮೀನುಗಳ ವಿವರಗಳನ್ನೂ ಬೀಟ್ ಆ್ಯಪ್ ನಲ್ಲಿ ದಾಖಲು ಮಾಡಿದ್ದಾರೆ. ಇದರ ಆಧಾರದಲ್ಲಿ ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ, ಭೂ ಸರ್ವೇ ಮಾಡಿಸಿ ತಹಶೀಲ್ದಾರರಿಂದ ಆದೇಶ ಹೊರಡಿಸಿ ಒತ್ತುವರಿ ತೆರವು ಮಾಡಬೇಕು. ಈ ಕೆಲಸ ಬೆಂಗಳೂರಿನಿಂದಲೇ ಆರಂಭವಾಗಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಹಾಗೂ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.


