ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣವು ಮೇಲ್ನೋಟಕ್ಕೆ ವಿಚಾರಣೆಗೆ ಅರ್ಹವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೋಕ್ಸೊ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಬುಧವಾರ ನಡೆಸಿತು.
ಯಡಿಯೂರಪ್ಪ ಪರ ವಕಾಲತ್ತು ಹಾಕಿರುವ ವಕೀಲ ಸಂದೀಪ್ ಪಾಟೀಲ್ ಅವರನ್ನು ಕುರಿತು “ಮೇಲ್ನೋಟಕ್ಕೆ ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ನಿಮ್ಮ ವಾದ ಆಲಿಸಲಾಗುವುದು. ಯಡಿಯೂರಪ್ಪಗೆ ಇಷ್ಟು ವಯಸ್ಸಾಗಿದೆ. ಅನಗತ್ಯವಾಗಿ ಸಮನ್ ಮಾಡಬಾರದು ಎಂದು ಕೇಳಿದರೆ ಏನಾದರೂ ಮಾಡಬಹುದು. ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದ್ದಾರೆ. ಅನಗತ್ಯವಾಗಿ ಕಿರುಕುಳ ನೀಡುತ್ತಾರೆ ಎಂದು ಹೇಳಬಹುದು. ಕಿರುಕುಳ ತಪ್ಪಿಸಿ, ನ್ಯಾಯಯುತ ವಿಚಾರಣೆಗೆ ಸಂಬಂಧಿಸಿದಂತೆ ರಕ್ಷಣೆ ಮಾಡಬಹುದು. ಅಂಥ ಅಂಶವನ್ನು ಉಲ್ಲೇಖಿಸಿ, ಮೆರಿಟ್ ಮೇಲೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ” ಎಂದು ಹೇಳಿತು.
“ಹಿಂದೆ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ಪೀಠ ಉಲ್ಲೇಖಿಸಿರುವ ವಿಚಾರಗಳ ಬಗ್ಗೆ ನಿಮ್ಮ ಆತಂಕ ಇರಬಹುದು. ನಿಮ್ಮ ಹಿರಿಯ ವಕೀಲರನ್ನು ಕೇಳಿ. ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ಇಲ್ಲವಾದಲ್ಲಿ ಈ ಪ್ರಕರಣವನ್ನು ಒಂದು ವಾರ ವಿಚಾರಣೆ ನಡೆಸಬೇಕಾಗುತ್ತದೆ. ಇಲ್ಲಿ ಆರೋಪವೇ ಇಲ್ಲ ಎಂಬ ಪ್ರಕರಣ ಇದಲ್ಲ” ಎಂದಿತು.
“ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯೊಂದೇ ಆರೋಪಿಗೆ ಶಿಕ್ಷೆ ವಿಧಿಸಲು ಕೆಲವೊಮ್ಮ ಸಾಕಾಗುತ್ತದೆ. ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ವಿಚಾರಣೆಯಲ್ಲಿ ಆಕೆಯ ತಾಯಿಗೆ ದೂರು ನೀಡುವುದು ಹವ್ಯಾಸವಾಗಿತ್ತು, ಇಂಥವರೆಲ್ಲರ ವಿರುದ್ಧ ಆಕೆ ಇಷ್ಟೆಲ್ಲಾ ಪ್ರಕರಣ ದಾಖಲಿಸಿದ್ದಾರೆ, ಆಕೆಯ ಮೇಲೆ ಇಷ್ಟೆಲ್ಲಾ ಕ್ರಿಮಿನಲ್ ಪ್ರಕರಣ ಇವೆ, ಈ ಹುಡುಗಿಯೇ ಎರಡು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.. ಅವರು ಏತಕ್ಕೆ (ಯಡಿಯೂರಪ್ಪ ಮನೆಗೆ) ಬಂದಿದ್ದರು, ಒಂದು ಪೋಕ್ಸೊ ಪ್ರಕರಣ, (ಯಡಿಯೂರಪ್ಪ ಸಂತ್ರಸ್ತೆ ನೀಡಲು ಮುಂದಾಗಿದ್ದರು ಎನ್ನಲಾದ) ದುಡ್ಡು, ಅದು ಎಲ್ಲಿಂದ ಬಂದಿದೆ.. ನೀವು ಸಹ ಇದು ಹನಿ ಟ್ರ್ಯಾಪ್ ಎಂದು ಹೇಳಬಹುದು…ಇವೆಲ್ಲವೂ ಇದನ್ನು ವಿಚಾರಣೆಗೆ ಅರ್ಹವಾದ ಪ್ರಕರಣವನ್ನಾಗಿಸಿವೆ. ಇದಕ್ಕೆ ಕನಿಷ್ಠ ಐದು ದಿನಗಳ ಮಧ್ಯಾಹ್ನದ ಸಂಪೂರ್ಣ ಕಲಾಪ ವಿನಿಯೋಗವಾಗುತ್ತದೆ” ಎಂದು ಹೇಳಿತು.
ಆಗ ಸಂದೀಪ್ ಪಾಟೀಲ್ ಅವರರು “ನ್ಯಾಯಾಲಯದ ಅಭಿಪ್ರಾಯ ಏನಿದೆ ಎಂಬುದು ಅರ್ಥವಾಗುತ್ತದೆ. ಈ ಕುರಿತು ಚರ್ಚಿಸಿ, ವಿಚಾರ ತಿಳಿಸಲಾಗುವುದು” ಎಂದರು.


