‘ವಾರಕ್ಕೆ 70 ಗಂಟೆ ದುಡಿಯಬೇಕು’ ಎಂದು ಕೆಲಸದ ಅವಧಿ ಬಗ್ಗೆ ಈ ಹಿಂದೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಈಗ ಮತ್ತೆ ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸಿಎನ್ಬಿಸಿ ಗ್ಲೋಬಲ್ ಲೀಡರ್ಶಿಪ್ ಶೃಂಗಸಭೆಯಲ್ಲಿ ಶೆರೀನ್ ಭಾನ್ ಜತೆ ಸಂವಾದದ ವೇಳೆ ವಾರದಲ್ಲಿ ಆರು ದಿನ ಕೆಲಸದ ಕುರಿತಾದ ತಮ್ಮ ಹಳೆಯ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.
“ಉದ್ಯೋಗದ ಅವಧಿ ವಿಸ್ತರಣೆ ಕುರಿತು ನನ್ನ ನಿಲುವು ಬದಲಾಗುವುದಿಲ್ಲ. ಪ್ರತಿಭಾವಂತರು ದಿನಕ್ಕೆ ಕನಿಷ್ಠ 10 ತಾಸು ಕೆಲಸ ಮಾಡಲೇಬೇಕು. ಅಂದಾಗ ನಮ್ಮ ದೇಶ ಸಾಕಷ್ಟು ಅಭಿವೃದ್ಧಿ ಹೊಂದಲು ಸಾಧ್ಯ” ಎಂದು ಹೇಳಿದ್ದಾರೆ.
“ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಕೋರುವೆ. ಆದರೆ ಕೆಲಸದ ಅವಧಿ ವಿಚಾರದಲ್ಲಿ ನಾನು ಸತ್ತರೂ ನನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಠಿಣ ಪರಿಶ್ರಮವೇ ದೇಶದ ಅಭಿವೃದ್ಧಿಗೆ ಮೂಲಾಧಾರ” ಎಂದು ಅಭಿಪ್ರಯಾಪಟ್ಟಿದ್ದಾರೆ.
“ಪ್ರಧಾನಿ ಮೋದಿ ಅವರು ವಾರಕ್ಕೆ 100 ಗಂಟೆವರೆಗೆ ಕೆಲಸ ಮಾಡುತ್ತಾರೆ. ಅವರಿಗೆ ಈ ದೇಶದ ಯುವಕರು ಮೆಚ್ಚುಗೆ ಸೂಚಿಸಬೇಕಾದರೆ ಅವರಂತೆಯೇ ವಾರಕ್ಕೆ ಕನಿಷ್ಠ 70 ತಾಸಾದರೂ ಕೆಲಸ ಮಾಡಬೇಕು. ನಾನು ನನ್ನ ವೃತ್ತಿ ಜೀವನದ ಆರಂಭದಲ್ಲಿ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಬೆಳಿಗ್ಗೆ 6.30 ಕ್ಕೆ ಕಚೇರಿಯಲ್ಲಿ ಹಾಜರಿರುತ್ತಿದ್ದೆ. ರಾತ್ರಿ 8-30 ಕ್ಕೆ ಮನೆಗೆ ಹೊರಡುತ್ತಿದ್ದೆ. ಸಮರ್ಪಣೆಯಿಂದ ಕೆಲಸ ಮಾಡುತ್ತಿದ್ದೆ. ಕಠಿಣ ಪರಿಶ್ರಮವು ನಮ್ಮ ಸಂಸ್ಕೃತಿಯಲ್ಲೇ ಇದೆ” ಎಂದಿದ್ದಾರೆ.
ಜರ್ಮನಿ, ಜಪಾನ್ ದೇಶದವರು ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟಿದ್ದಾರೆ. ಅದಕ್ಕೆ ಪರ್ಯಾಯ ಯಾವುದೂ ಇಲ್ಲ. 1986 ರಲ್ಲಿ ನನಗೆ ದೊಡ್ಡ ಶಾಕ್ ಆಗಿತ್ತು. ಆಗ ಭಾರತದಲ್ಲಿ ಐಟಿ ಹಾಗೂ ಇತರ ಕೆಲ ವಲಯಗಳಲ್ಲಿ ವಾರದ ಆರು ದಿನ ಬದಲು 5 ದಿನ ಕೆಲಸ ಮಾಡುವ ನೀತಿ ತರಲಾಯಿತು. ಇದರಿಂದ ನಾನು ವಿಚಲಿತನಾಗಿದ್ದೆ” ಎಂದು ತಿಳಿಸಿದ್ದಾರೆ.