ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಒಂದು ಅರ್ಥದಲ್ಲಿ ರಾಜ್ಯ ಸರ್ಕಾರದ ಹನಿಮೂನ್ ಅವಧಿ ಮುಗಿಸಿದೆ. ಆದರೆ, ಅಭಿವೃದ್ಧಿ ಕೆಲಸ ಮಾತ್ರ ಶೂನ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಳೆದ ಒಂದು ವರ್ಷದಲ್ಲಿ ಯಾವ ಸಚಿವ, ಶಾಸಕರು ಸಹ ಗುದ್ದಲಿ ಪೂಜೆ ಮಾಡಲಿಲ್ಲ ಹೊಸ ಅಭಿವೃದ್ಧಿ ಕೆಲಸ ಮಾಡಲಿಲ್ಲ” ಎಂದು ಹರಿಹಾಯ್ದರು.
“ಬರ ಪರಿಹಾರ ವಿತರಣೆ ಸಮರ್ಪಕವಾಗಿ ಆಗಿಲ್ಲ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಂದ್ರು ರೈತರಿಗೆ ಹಣ ನೀಡುತ್ತಿಲ್ಲ. ಟೆಕ್ನಿಕಲ್ ಕಾರಣ ಹೇಳಿ ಎಲ್ಲ ರೈತರಿಗೆ ಪರಿಹಾರ ನೀಡಿಲ್ಲ. ಕಣ್ಣು, ಕಿವಿ, ಹೃದಯ ಮೂರೂ ಇಲ್ಲದ `ಕೈ’ ಸರ್ಕಾರ ಇದು. ಇಲ್ಲಿ ಸಿಎಂ ಮಾತಿಗೂ ಕಿಮ್ಮತ್ತಿಲ್ಲ” ಎಂದು ಟೀಕಿಸಿದರು.
“ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂಪಾಯಿ ಹಗರಣ ನಡೆದಿದೆ. ಒಬ್ಬ ಎಂಜಿನಿಯರ್ ಸುಸೈಡ್ ಮಾಡಿಕೊಂಡಿದ್ದಾನೆ. ಎಲ್ಲಿ ಹೋಯಿತು ಕಾಂಗ್ರೆಸ್ ಭ್ರಷ್ಟಾಚಾರ ತಡೆ ನಿಲುವು. ಭ್ರಷ್ಟಾಚಾರದ ಪಿತಾಮಹ ಯಾರೆಂದ್ರೆ ಅದು ಕಾಂಗ್ರೆಸ್. ಡೆತ್ನೋಟ್ನಲ್ಲಿ ಕೆಲ ಉನ್ನತ ಅಧಿಕಾರಿಗಳ ಹೆಸರು ಹೇಳಲಾಗಿದೆ. ಸರ್ಕಾರ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣ ತನಿಖೆಗೆ ಕೊಡಲಿ” ಎಂದು ಆಗ್ರಹಿಸಿದರು.
ಚನ್ನಗಿರಿ ಘಟನೆಗೆ ಸಂಬಂಧಿಸಿ ಹರಿಹಾಯ್ದ ಅವರು, “ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಪೊಲೀಸರಿಗೆ ಪೊಲೀಸರೇ ರಕ್ಷಣೆ ಕೊಡೋ ಪರಿಸ್ಥಿತಿ ಬಂದಿದೆ. ಚನ್ನಗಿರಿಯಲ್ಲಿ ನಡೆದ ಘಟನೆ ಮಟ್ಕಾಗೆ ಸಂಬಂಧಪಟ್ಟಿದ್ದು. ಅರೆಸ್ಟ್ ಆದ ವ್ಯಕ್ತಿ ಮೃತನಾಗಿದ್ದಾನೆ. ಇದರ ಬೆನ್ನಲ್ಲೇ ಸಾವಿರಾರು ಜನ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ. ಇದೆಲ್ಲ ನೋಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ ಅನ್ನೊದು ತಿಳಿಯುತ್ತದೆ. ಈ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೆ ಅನ್ನುವ ಅನುಮಾನ ಮೂಡುತ್ತಿದೆ” ಎಂದರು.