ರಾಜ್ಯದ ಇತಿಹಾಸದಲ್ಲೇ 1,000 ಜನ ಗ್ರಾಮ ಆಡಳಿತ ಅಧಿಕಾರಿಗಳ ನೇಮಕಕ್ಕೆ ಒಂದೇ ಹಂತದಲ್ಲಿ ಆದೇಶ ಹೊರಡಿಸಿದ್ದು ಇದೇ ಮೊದಲು. ಅಲ್ಲದೆ, ಒಂದು ಪೈಸೆಯೂ ಲಂಚಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನೇಮಕ ಮಾಡಲಾಗಿದೆ ಎಂದು ಹೇಳಲು ಸಂತಸವಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ನೂತನವಾಗಿ ಆಯ್ಕೆಯಾಗಿರುವ 1,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೇಮಕಾತಿ ಆದೇಶ, ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣಾ ಹಾಗೂ ಕಂದಾಯ ಇಲಾಖೆಯ ಎರಡು ವರ್ಷದ ʼಸಾಧನೆಯ ಹಾದಿʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಒಂದೇ ಬಾರಿ ಅರ್ಜಿ ಕರೆದು, ಒಂದೇ ಬಾರಿ ಪರೀಕ್ಷೆ ನಡೆಸಿ ಮಧ್ಯವರ್ತಿಗಳ ಅವಕಾಶ ಇಲ್ಲದೆ ನೇಮಕಾತಿ ಮಾಡಿದ್ದೇವೆ. ಈ ಹುದ್ದೆಗೆ 6,33,916 ಜನ ಅರ್ಜಿ ಸಲ್ಲಿಸಿದ್ದರು. ಭಾಗಶಃ ಕರ್ನಾಟಕ ಬೇರೆ ಯಾವುದೇ ನೇಮಕಾತಿಗೆ ಇಷ್ಟು ಅರ್ಜಿ ಬಂದಿಲ್ಲ. ಇಲ್ಲಿ ಕೆಲಸ ಗಿಟ್ಟಿಸಿದವರು ಎಷ್ಟು ಪುಣ್ಯವಂತರೆಂದರೆ ಅರ್ಜಿ ಸಲ್ಲಿಸಿದವರ ಪೈಕಿ ಶೇ. 0.0016 ಜನ ಮಾತ್ರ ಆಯ್ಕೆಯಾಗಿದ್ದೀರಿ” ಎಂದು ತಿಳಿಸಿದರು.
ಮುಂದುವರೆದು, “ಗ್ರಾಮ ಆಡಳಿತ ಅಧಿಕಾರಿ ಕೆಲಸಕ್ಕೆ ಶಿಫಾರಸು ಮಾಡುವಂತೆ ಏಳೆಂಟು ಜನ ನನ್ನ ಬಳಿಯೂ ಬಂದಿದ್ದರು. ಆದರೆ, ನಾನೇ ಮನಸ್ಸು ಮಾಡಿದರೂ ಶಿಫಾರಸು ಮಾಡಲು ಸಾಧ್ಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದುವುದು ಸೇರಿದಂತೆ ಯಾವ ಅಕ್ರಮ ಚಟುವಟಿಕೆಗಳಿಗೂ ಆಸ್ಪದ ಇಲ್ಲದಂತೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ಕೆಲಸ ಗಿಟ್ಟಿಸಿದವರು ಹುದ್ದೆಗಾಗಿ ಒಂದು ಪೈಸೆಯಾದರೂ ಯಾರಿಗಾದರೂ ಲಂಚ ಕೊಟ್ಟಿದ್ದೀರ . ಇದೇ ಕಾರಣಕ್ಕೆ ಈ ಬಗ್ಗೆ ಈವರೆಗೆ ಒಂದೂ ತಕರಾರು ಬಂದಿಲ್ಲ. ಒಂದು ಪೈಸೆಯೂ ಲಂಚ ಇಲ್ಲದೆ ಹುದ್ದೆ ನೀಡಿದ್ದೇವೆ ಎಂದು ಹೇಳಲು ನನಗೂ ಸಂತೋಷವಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.
ನೂತನವಾಗಿ ಆಯ್ಕೆಯಾಗಿರುವ ಅಧಿಕಾರಿಗಳಿಗೂ ಕಿವಿಮಾತು ಹೇಳಿದ ಅವರು, “ವಿಧಾನಸೌಧದಲ್ಲಿ ಆದೇಶ ಪ್ರತಿ ಸ್ವೀಕರಿಸುತ್ತಿರುವ ಹೊಸ ಉದ್ಯೋಗಿಗಳಿಗೂ ಈ ಸಂದರ್ಭದಲ್ಲಿ ಅರಿವು ಇರಬೇಕು ಎಂಬ ಕಾರಣಕ್ಕೆ ಆದೇಶ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರ ಕೈಯಿಂದ ನೀಡಲಾಗುತ್ತಿದೆ. ಬಹುತೇಕರು ಸರ್ಕಾರಿ ಕೆಲಸ ಗಿಟ್ಟಿಸಿದ ಕುಟುಂಬದ ಮೊದಲಿಗರಾಗಿದ್ದಾರೆ. ಈ ಹುದ್ದೆಗೆ ನೀವು ಋಣ ತೀರಿಸಬೇಕು ಎಂತಿದ್ದರೆ ಜನರ ಪ್ರಮಾಣಿಕ ಸೇವೆ ಮಾಡುವ ಮೂಲಕ ಈ ಋಣ ತೀರಿಸಿ” ಎಂದರು.
4000 ಜನರಿಗೆ ಲ್ಯಾಪ್ಟಾಪ್ ವಿತರಣೆ
ಕಾರ್ಯಕ್ರಮದಲ್ಲಿ ನಾಲ್ಕು ಸಾವಿರ ಜನ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ (ಕ್ರೋಮ್ ಬುಕ್) ವಿತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಅವರು, “ದಿನ ಬೆಳಗಾದರೆ ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಕಚೇರಿಗಳಿಗೆ ಟಪಾಲು ಕೊಡೋದು ತಗೋಳೋದೆ ಅವರಿಗೆ ಕೆಲಸವಾಗಿದೆ. ಕೆಲಸ ಮಾಡೋದು ಬಿಟ್ಟು ಓಡಾಡೋದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ಈ ಟಪಾಲು ವ್ಯವಸ್ಥೆ 200 ವರ್ಷಗಳಷ್ಟು ಹಳೆಯದು. ಈ ವ್ಯವಸ್ಥೆಗೆ ಏನಾದ್ರೂ ಅರ್ಥ ಇದೆಯಾ? ಇದು ಎಷ್ಟಯ ಅನಗತ್ಯ ಹೊರೆ. ಈ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟ್ಯಾಪ್” ನೀಡಲಾಗುತ್ತಿದೆ.
“ನಾವು 4000 ಲ್ಯಾಪ್ಟ್ಯಾಪ್ ಕೇಳಿದ್ದೆವು. ಆದರೆ, ಕ್ಯಾಬಿನೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ನವರು 6,000 ಲ್ಯಾಪ್ಟಾಪ್ ಗಳಿಗೆ ಅನುಮೋದನೆ ನೀಡಿದ್ದಾರೆ. 20025-26ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ವಿಎ ಗಳಿಗೆ ಲ್ಯಾಪ್ಟಾಪ್ ನೀಡಲಾಗುವುದು. ಎಲ್ಲಾ ಕಡತ ವಿಲೇವಾರಿಯನ್ನೂ ಆನ್ಲೈನ್ಗೆ ತಂದು ಪಾರದರ್ಶಕವಾಗಿ ಕೆಲಸ ಆಗುವಂತೆ ಹಾಗೂ ಕೆಲಸದ ವಿಳಂಭ ಸೇರಿದಂತೆ ದಾಖಲೆಗಳು ಕಳೆದುಹೋಗದಂತೆ ನೋಡಿಕೊಳ್ಳುವುದು ಡಿಜಿಟಲೀಕರಣದ ಉದ್ದೇಶ” ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಬೆಂಗಳೂರು ವಲಯ ಆಯುಕ್ತರಾದ ಆದಿತ್ಯ ಆಮ್ಲನ್ ಬಿಶ್ವಾಸ್, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್ ಉಪಸ್ಥಿತರಿದ್ದರು.