ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂ. ಅಕ್ರಮ ವರ್ಗಾವಣೆ ಹಗರಣದ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ದಾಳಿಯು ಎರಡನೇ ದಿನವೂ ಮುಂದುವರಿದಿದ್ದು, ವಿಚಾರಣೆ ವೇಳೆ ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್ ಆಪ್ತರು ಕೋಟ್ಯಾಂತರ ಹಣದ ಡೀಲ್ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.
ದಾಳಿಯಲ್ಲಿ ದೊರೆತ ಅಕ್ರಮ ವ್ಯವಹಾರದ ದಾಖಲೆಪತ್ರಗಳು ಹಾಗೂ ಅಪ್ತರು ವಿಚಾರಣೆ ಯಾವುದೇ ಕ್ಷಣದಲ್ಲಿ ಶಾಸಕರಿಬ್ಬರನ್ನು ವಶಕ್ಕೆ ಪಡೆಯಬಹುದು ಎನ್ನುವುದು ಇ.ಡಿ ಮೂಲಗಳಿಂದ ತಿಳಿದುಬಂದಿದೆ.
ದದ್ದಲ್ ಪಿಎ ಪಂಪಣ್ಣ ವಶಕ್ಕೆ
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಸಂಬಂಧ ಕಾಂಗ್ರೆಸ್ ಶಾಸಕನ ಮಾಜಿ ಆಪ್ತ ಸಹಾಯಕನನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಬಸಗೌಡ ದದ್ದಲ್ ಮಾಜಿ ಆಪ್ತ ಸಹಾಯಕ(ಪಿಎ) ಪಂಪಣ್ಣನನ್ನು ಇ.ಡಿ ಅಧಿಕಾರಿಗಳು ಇಂದು (ಜುಲೈ 11) ವಶಕ್ಕೆ ಪಡೆದುಕೊಂಡಿದ್ದಾರೆ.
ಪಂಪಣ್ಣ ಮನೆ ಮೇಲೆ ಇ.ಡಿ ದಾಳಿ ನಡೆಸಿದ್ದು,ಅಲ್ಲಿ ಅಕ್ರಮಗಳ ಮಾಹಿತಿಯು ಲಭ್ಯವಾಗಿದೆ. ಬಿಚ್ಚಾಲಿ ಗ್ರಾ.ಪಂ ಪಿಡಿಒ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ, ಪಿಡಿಒ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದು ನೂತನ ಎಂಎಲ್ಸಿಯೊಬ್ಬರ ಪಿಎ ಆಗಲು ಹೊರಟಿದ್ದ ಎನ್ನಲಾಗಿದೆ.
ರಾಯಚೂರಿನ ಆಜಾದ್ ನಗರದಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದರೂ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬಸವನಗೌಡ ದದ್ದಲ್ನ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ.
ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂ ಕಮಿಷನ್ ಪಡೆದಿರುವ ಆರೋಪವಿದ್ದು ಆತ ಕಳೆದ ಜುಲೈ 5ರಂದು ಎಸ್ಐಟಿ ವಿಚಾರಣೆ ಒಳಗಾಗಿದ್ದ. ಪಂಪಣ್ಣನಿಂದ ಮಹತ್ವದ ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ಬೆನ್ನಲ್ಲೇ ಇ.ಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಪಂಪಣ್ಣ ಮನೆಯಲ್ಲಿ ಸಿಕ್ಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.
ಹರೀಶ್ ಬಾಯ್ಬಿಡಿಸಿದ ಇ.ಡಿ
ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್ನನ್ನು ವಶಕ್ಕೆ ತೆಗೆದುಕೊಂಡು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಮಲ್ಲೇಶ್ವರಂನ ಸಾಗರ ಹೋಟೆಲ್ ಬಳಿ ಡೀಲ್ ನಡೆದಿರುವುದು ಗೊತ್ತಾಗಿದೆ.
ಹರೀಶ್ ಎರಡು ಬ್ಯಾಗ್ಗಳಲ್ಲಿ 25 ಲಕ್ಷ ರೂ. ಹಣ ಪಡೆದಿದ್ದು, ನಿಗಮದ ಎಂಡಿ ಪದ್ಮನಾಭ, ಅಕೌಂಟೆಂಟ್ ಪರಶುರಾಮ ಬಳಿ 25 ಲಕ್ಷ ರೂ. ಕಮಿಷನ್ ಪಡೆಯಲು ಈ ಹೋಟೆಲ್ಗೆ ಬಂದಿದ್ದ.
ಪಿಎ ಹರೀಶ್ ಕೊಟ್ಟ ಮಾಹಿತಿ ಅಧಾರದ ಮೇಲೆ ನಾಗೇಂದ್ರ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ 25 ಲಕ್ಷ ಹಣ ತರಿಸಿದವರು ಯಾರು, ಆ ಹಣ ಎಲ್ಲಿದೆ ಎಂಬ ಮಾಹಿತಿ ಇಡಿಗೆ ಬೇಕಾಗಿದೆ. ಸದ್ಯ ಐದು ಜನ ಇಡಿ ಅಧಿಕಾರಿಗಳ ತಂಡದಿಂದ ನಾಗೇಂದ್ರ ಮನೆಯಲ್ಲಿ ಶೋಧ ಮುಂದುವರಿದ್ದು, ಬ್ಯಾಂಕ್ ಅಧಿಕಾರಿಗಳ ಮೇಲಿನ ಇಡಿ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಾಜಿ ಸಚಿವರ ವಿಚಾರಣೆ ನಡೆಸಲಾಗುತ್ತಿದೆ.
ಲಕ್ಷ ಲಕ್ಷ ಕಮಿಷನ್
ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಸಿಬ್ಬಂದಿಗೂ ಲಕ್ಷ ಲಕ್ಷ ರೂ. ಕಮಿಷನ್ ನೀಡಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಸಚಿವರ ಹಾಗೂ ಅಧ್ಯಕ್ಷರ ಪಿಎಗಳು ಬ್ಯಾಂಕ್ಗೆ ಸತತವಾಗಿ ಭೇಟಿ ನೀಡಿದ್ದರು. ಈಗಾಗಲೇ ಬ್ಯಾಂಕಿನ ಸಿಸಿ ಕ್ಯಾಮರಾ ರೆಕಾರ್ಡ್ಗಳನ್ನು ಎಸ್ಐಟಿ ಪರಿಶೀಲನೆ ಮಾಡಿದ್ದು, ಅದನ್ನು ಇಡಿ ಕೂಡ ಸಂಗ್ರಹಿಸಿದೆ. ಸಚಿವರ ಹಾಗೂ ಶಾಸಕರ ಮೇಲೆ ದಾಳಿಗೂ ಮುನ್ನ ಬ್ಯಾಂಕ್ಗೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದೆ.
ಅಧಿಕಾರಿಗಳಿಗೆ ಬುಲಾವ್
ಮಾಜಿ ಸಚಿವ ನಾಗೇಂದ್ರ ಮನೆಗೆ ಇಡಿ ಅಧಿಕಾರಿಗಳು ಬೆಳಗಿನ ಜಾವ ಐದು ಗಂಟೆಗೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿಕೊಂಡು ನಾಗೇಂದ್ರ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸತತ 24 ಗಂಟೆಗಳಿಂದ ಇಡಿ ಅಧಿಕಾರಿಗಳ ದಾಳಿ ಮುಂದುವರಿದಿದೆ.