ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಹರಿಹಾಯ್ದ ಅವರು, “ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಹಗರಣದಲ್ಲಿ ಸಿಎಂ-ಡಿಸಿಎಂ ಸಹ ಭಾಗಿಯಾಗಿದ್ದಾರೆ ಎಂದು ತಪ್ಪೊಪ್ಪಿಗೆ ನೀಡಿ, ಇಲ್ಲದಿದ್ದರೆ ನಿಮಗೆ ಇಡಿ ಪವರ್ ಗೊತ್ತಿಲ್ಲ. ಆಮೇಲೆ ನೀವು ಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಇಡಿ ಅಧಿಕಾರಿಗಳು ತನಿಖೆಯನ್ನೇ ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಇಡಿ ಅಧಿಕಾರಿಗಳ ಜೊತೆ ರಾಜಿ ಸಂಧಾನ ಮಾಡಿಕೊಂಡು ಅವರು ಹೇಳಿದ್ದನ್ನು ಕೇಳಿಕೊಂಡು ಇರುವವರಿಗೆ ಅಭಯ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾಯಿತಗೊಂಡಿರುವ ಸರ್ಕಾರವನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
“ಜನ ಮನ್ನಣೆ ಹಾಗೂ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ದುರ್ಬಲವಾಗಿರು ಬಿಜೆಪಿ ನಾಯಕರು ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದಾರೆ. ಆಪರೇಷನ್ ಕಮಲ ಸೇರಿದಂತೆ ಬಿಜೆಪಿಯ ಇಂತಹ ಜನ ವಿರೋಧಿ ಕಸರತ್ತುಗಳು ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ವಿಚಾರವೇನಲ್ಲ. ಇಡಿ, ಸಿಬಿಐ ಹಾಗೂ ಐಟಿಯನ್ನು ಸರ್ಜಿಕಲ್ ಸ್ಟ್ರೈಕ್ ತರ ವಿರೋಧ ಪಕ್ಷಗಳ ವಿರುದ್ದ ಬಿಜೆಪಿ ಬಳಕೆ ಮಾಡುತ್ತಲೇ ಇದೆ. ಇದೀಗ ಮುಂದುವರೆದ ಬಾಗವಾಗಿ ಕರ್ನಾಟಕದಲ್ಲೂ ಹತಾಶ ಮನೋಭಾವದಿಂದ 2009ರಂತೆ ಆಪರೇ಼ನ್ ಕಮಲ ಸಾಧ್ಯವಿಲ್ಲ ಎಂದು ತಿಳಿದು ಇದೀಗ ಇಡಿ ಮೂಲಕ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮುಂದೆ ನಿಂತು ಮಾಡುತ್ತಿದೆ. ಆದರೆ, ಇವರ ಗೊಡ್ಡು ಬೆದರಿಕೆಗಳಿಗೆ, ಸಂವಿಧಾನ ವಿರೋಧಿ ನಡೆಗಳಿಗೆ ಬಗ್ಗುವ ಮಾತೇ ಇಲ್ಲ” ಎಂದರು.
ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ
“ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಕಳೆದ 10 ವರ್ಷದಲ್ಲಿ ಇಡಿ ರಾಜಕೀಯ ಅಸ್ತ್ರವಾಗಿದೆ. ಬಿಜೆಪಿಗೆ ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಇಡಿ-ಐಟಿ ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ಮಾಡುವುದು ವಾಡಿಕೆಯಾಗಿಬಿಟ್ಟಿದೆ. ಬಿಜೆಪಿಯ ಇಂತಹ ನೀಚ ನಡೆಗಳಿಗೆ ಜಾರ್ಖಂಡ್, ಪಶ್ಚಿಮ ಬಂಗಾಳ, ದೆಹಲಿ. ತಮಿಳುನಾಡು, ಕೇರಳ, ಆಂದ್ರಪ್ರದೇಶ ಮಹಾರಾಷ್ಟ್ರದ ಸೇರಿದಂತೆ ಸಾಕಷ್ಟು ಉದಾಹರಣೆಗಳಿದ್ದು, ಪಟ್ಟಿ ಇನ್ನೂ ದೊಡ್ಡದಿದೆ” ಎಂದು ಹೇಳಿದರು.
“ಕೆಲವು ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡಿವೆ. 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ಇಡಿ ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400 ರಷ್ಟು ಹೆಚ್ಚಾಗಿದೆ. ಅದರಲ್ಲಿ ಶೇ.95 ರಷ್ಟು ಪ್ರಕರಣಗಳು ವಿಪಕ್ಷಗಳ ವಿರುದ್ಧವಾಗಿದೆ. ಶೇ.5 ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ಗುರಿಯಾಗಿದೆ. ಈ ಅಂಕಿಅಂಶಗಳೆಲ್ಲವೂ ಬಿಜೆಪಿ ವಾಷಿಂಗ್ ಮೆಷಿಂಗ್ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ. ವಿಪಕ್ಷದಲ್ಲಿದ್ರೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಕ್ಕೆ ಮಹಾರಾಷ್ಟ್ರ ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಉದಾಹರಣೆಗಳಿವೆ” ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.
ಬಿಜೆಪಿ ಹಗರಣಗಳ ಬಗ್ಗೆ ಇಡಿ ತನಿಖೆ ಏಕಿಲ್ಲ?
“ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಹಗರಣಗಳು ನಡೆದಿವೆ. ಕೊರೋನಾ ಸಂದರ್ಭದಲ್ಲಿ ಹೆಣದ ಮೇಲೂ ಕಾಸು ಮಾಡಿದ ಆರೋಪ ಬಿಜೆಪಿ ಮೇಲೆ ಇದೆ. ಆದರೆ, ಜಾರಿ ನಿರ್ದೇಶನಾಲಯ ಈ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ” ಎಂದು ಪ್ರಶ್ನಿಸಿದರು.
“ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 46 ಕೋಟಿ ರೂಪಾಯಿ ಲೂಟಿಯಾಗಿದೆ. ಬಿಜೆಪಿಯ ಮಾಜಿ ಎಂಎಲ್ಸಿ ಹಾಗೂ ಮಾಜಿ ಎಂಪಿ ಅಭ್ಯರ್ಥಿಯೊಬ್ಬರ ಬ್ಯಾಂಕ್ ಖಾತೆಗೆ 3 ಕೋಟಿ ರೂಪಾಯಿ ಹೋಗಿದೆ. ಈ ಪ್ರಕರಣವನ್ನು ಏಕೆ ಇಡಿ ತನಿಖೆ ಮಾಡುತ್ತಿಲ್ಲ, ಇದು ಹಗರಣದ ಲಾಭಾಂಶ ಅಲ್ವ, ಆ ಲೂಟಿಯ ಹಣ ಯಾವ ಎಲೆಕ್ಷನ್ಗೆ ಹೋಗಿದೆ ಅಂತ ಇಡಿ ಏಕೆ ತನಿಖೆ ನಡೆಸುತ್ತಿಲ್ಲ. ಭೋವಿ ನಿಗಮ, ತಾಂಡ ಅಭಿವೃದ್ಧಿ ನಿಗಮದಲ್ಲೂ ಕೋಟಿ ಕೋಟಿ ಲೂಟಿಯಾಗಿದೆ ಅಲ್ಲಿ ಏಕೆ ತನಿಖೆ ಇಲ್ಲ” ಎಂದು ಕುಟುಕಿದರು.
“ವಾಲ್ಮೀಕಿ ನಿಗಮದ ಹಗರಣದ ಸ್ವರೂಪದಂತೆಯೇ ಈ ಹಿಂದೆ ಡಾ. ಅಂಬೇಡ್ಕರ್ನಿಗಮದಲ್ಲೂ ಹಗರಣವಾಗಿದೆ. ಈ ಬಗ್ಗೆ ಏಕೆ ತನಿಖೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಹೆಣಗಳು ಬೀಳ್ತಾ ಇದ್ರೆ, ಬಿಜೆಪಿ ನಾಯಕರು ಹೆಣಗಳ ಮೇಲೆ ಹಣ ಮಾಡ್ತಾ ಇದ್ರಲ್ಲ ಆ ಬಗ್ಗೆ ತನಿಖೆ ಏಕಿಲ್ಲ. ಹಾಗಾದ್ರೆ ಅದು ಹಗರಣ ಅಲ್ವ. ಬಿಜೆಪಿಯ ಶಾಸಕರೇ ಒಬ್ಬರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆಗಾಗ್ಗೆ ದುಬೈ ಹೋಗಿಬರುತ್ತಿರುವ ಬಗ್ಗೆ ದ್ವನಿ ಎತ್ತುತ್ತಿದ್ದಾರಲ್ಲ ಆ ಬಗ್ಗೆ ತನಿಖೆ ಏಕಿಲ್ಲ?” ಎಂದು ಗುಡುಗಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಚಿವರಾದ ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಇದ್ದರು.