ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹುದ್ದೆ ಸೇರಿದಂತೆ ನಾನು ಪಕ್ಷದ ಯಾವುದೇ ಹುದ್ದೆಗೆ ಪ್ರಯತ್ನ ಮಾಡಿಲ್ಲ. 2025 ಮುಗಿಯುವುದರೊಳಗಾಗಿ ರಾಜ್ಯ ರಾಜಕಾರಣದಲ್ಲಿ ಸಣ್ಣ ಬದಲಾವಣೆಗಳಾಗಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ಎಲ್ಲಿದ್ದೇನೋ ಅಲ್ಲಿಯೇ ಇದ್ದೇನೆ. ನಮ್ಮನ್ನು ಪುಷ್ ಮಾಡೋರು ಯಾರೂ ಇಲ್ಲ. ವರ್ಷಾಂತ್ಯಕ್ಕೆ ಕಾಂಗ್ರೆಸ್ನಲ್ಲಿ ಬದಲಾವಣೆ ಆಗಲಿದೆ. ಹಾಗಂತ ದೊಡ್ಡ ಬದಲಾವಣೆ ಏನಿಲ್ಲ. ಸಚಿವರ ಬದಲಾವಣೆ ಆಗಲಿದೆ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬುದನ್ನು ಮಾರ್ಮಿಕವಾಗಿ ನುಡಿದರು.
“ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡಿಸಿಲ್ಲ. ಪ್ರಯತ್ನ ನಡೆಸಿದ್ದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ. ದೆಹಲಿಗೆ ಹೋದ ಮೇಲೆ ಸಕ್ರಿಯವಾಗುವುದು ಸ್ವಾಭಾವಿಕ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ. ಯುದ್ಧ ಇದ್ದಾಗ ಶಸ್ತ್ರ ಹಿಡಿಯಬೇಕು. ಯುದ್ಧ ಇಲ್ಲದೇ ಇರುವಾಗ ಶಸ್ತ್ರ ಹಿಡಿಯುವ ಅಗತ್ಯ ಇಲ್ಲ” ಎಂದು ಹೇಳಿದರು.
“ಶಾಸಕ ಬಿ.ಆರ್. ಪಾಟೀಲ ಅವರ ಹೇಳಿಕೆ ವಿಚಾರವೂ ದೆಹಲಿಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ವರಿಷ್ಠರು ಮಾತನಾಡಿದ್ದಾರೆ. ಅನುದಾನ, ವರ್ಗಾವಣೆ ಎಂದು ಹೇಳಲು ಆಗುವುದಿಲ್ಲ. ಕ್ಷೇತ್ರದಲ್ಲಿ ಬೇರೆ ಬೇರೆ ಸಮಸ್ಯೆಗಳು ಇರುತ್ತದೆ. ಶಾಸಕ ರಾಜು ಕಾಗೆ ಅವರು ಒಂದು ವರ್ಷದಿಂದ ನನ್ನ ಬಳಿಯೂ ಸಾಕಷ್ಟು ಹೇಳಿದ್ದಾರೆ. ಹಾಗೆಂದು, ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಸರಿ ಮಾಡುತ್ತಾರೆ” ಎಂದು ತಿಳಿಸಿದರು.
ಜಲಸಂಪನ್ಮೂಲ ಇಲಾಖೆ ಮೇಲೆ ಶಾಸಕ ರಾಜು ಕಾಗೆ ಆರೋಪ ವಿಚಾರದ ಬಗ್ಗೆ ಮಾತನಾಡಿ, “ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ರಾಜು ಕಾಗೆ ಹೇಳುತ್ತಲೇ ಇದ್ದಾರೆ. ಇದು ಸಿಎಂ ಗಮನಕ್ಕೆ ಕೂಡ ಬಂದಿದೆ. ಈ ಬಗ್ಗೆ ಸಿಎಂ ಅವರು ಡಿಸಿಎಂ ಕರೆದು ಹೇಳ್ತಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಹಣವಿದೆ, ಹಣವಿಲ್ಲ ಅಂತ ಯಾರು ಹೇಳಿದ್ದು? ಬಾಕಿ ಬಿಲ್ಗಳು ಕೂಡ ಇದ್ದಾವೆ. ಸುಮಾರು 3 ವರ್ಷದಷ್ಟು ಬಿಲ್ ಬಾಕಿ ಇದ್ದೇ ಇರುತ್ತವೆ” ಎಂದರು.
ಸಚಿವ ಕೆ.ಎನ್. ರಾಜಣ್ಣ ನಾವು ಆಗಾಗ ಸೇರುತ್ತಲೇ ಇರುತ್ತೇವೆ. ಹುಲಿ ಯಾವತ್ತಿದ್ರೂ ಹುಲಿನೇ, ವಯಸ್ಸಾದ್ರೂ ಹುಲಿ ಹುಲಿನೇ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ನೋಡಿಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳ್ಳು. ಬಿಜೆಪಿ ಫಾರ್ಮುಲಾ ಬೇರೆ ನಮ್ಮದು ಬೇರೆ. ಅವರ ತತ್ವ, ಸಿದ್ಧಾಂತ ಬೇರೆ ನಮ್ಮದು ಬೇರೆ. ಬಿಜೆಪಿಗೂ ನಮಗೂ ವ್ಯತ್ಯಾಸ ಇದೆ” ಎಂದು ಹೇಳಿದರು.