Homeಕರ್ನಾಟಕಶರಣಾಗತರಾಗಿರುವ ಆರು ಜನರು ಕೊನೆಯ ನಕ್ಸಲರು: ಗೃಹ ಸಚಿವ ಪರಮೇಶ್ವರ್

ಶರಣಾಗತರಾಗಿರುವ ಆರು ಜನರು ಕೊನೆಯ ನಕ್ಸಲರು: ಗೃಹ ಸಚಿವ ಪರಮೇಶ್ವರ್

ಶರಣಾಗತರಾದ ನಕ್ಸಲರು ಶಸ್ತ್ರಾಸ್ತ್ರಗಳನ್ನು ಕಾಡಿನಲ್ಲಿ ಎಲ್ಲಿ ಬಿಸಾಕಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

‌ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಕ್ಸಲರಿಗೆ ಪರಿಹಾರ‌ ಮತ್ತು ಪುನರ್ವವಸತಿ ಕಲ್ಪಿಸುವ ವಿಚಾರದಲ್ಲಿ ತೋರಿದ ಮುತುವರ್ಜಿಯನ್ನು ಶಸ್ತ್ತಾಸ್ತ್ರ ಹುಡುಕುವುದರಲ್ಲಿ ಸರ್ಕಾರ ತೋರುತ್ತಿಲ್ಲ’ ಎಂಬ ಬಿಜೆಪಿ ಆರೋಪದ ಕುರಿತು‌ ಪ್ರತಿಕ್ರಿಯಿಸಿದರು.

“ನಾವು ಮಾಡುವ ಕೆಲಸ ಮಾಡುತ್ತೇವೆ. ಕಾಡಲ್ಲಿ ಎಲ್ಲಿ ಇಟ್ಟಿದ್ದಾರೆ ಎಂಬುದನ್ನು ನೆರವು ಪಡೆದು ಹುಡುಕುತ್ತಾರೆ. ಇದಕ್ಕೆಲ್ಲ ಪ್ರಕ್ರಿಯೆ ಇದೆ. ಅದರ ಅನುಸಾರ ಪೊಲೀಸರು ಕೆಲಸ‌ ಮಾಡುತ್ತಾರೆ. ಇದೆಲ್ಲ ಬಿಜೆಪಿಯವರಿಗೆ ಗೊತ್ತಿಲ್ಲವೇ? ಅವರು ಕೂಡ ಸರ್ಕಾರ ನಡೆಸಿದ್ದಾರೆ. ಆಗಲೂ ಇದೇ ಪೊಲೀಸ್ ಇಲಾಖೆ ಇತ್ತಲ್ಲವೇ?” ಎಂದು ತಿರುಗೇಟು ನೀಡಿದರು.

ನಕ್ಸಲ್ ರವೀಂದ್ರ ಎಂಬಾತ ನಾಪತ್ತೆ ಬಗ್ಗೆ ಪ್ರತಿಕ್ರಿಯಿಸಿ, “ಶರಣಾಗತರಾಗಿರುವ ಗುಂಪಿನವರು ಆತನನ್ನು ಹೊರ ಹಾಕಿದ್ದರು ಎನ್ನುವ ಮಾಹಿತಿ ಇದೆ. ಯಾವ ಕಾರಣಕ್ಕೆ ಹೊರಹಾಕಿದ್ದರು ಎಂಬುದು ಗೊತ್ತಿಲ್ಲ. ತನಿಖೆ ನಡೆದಿದೆ. ನಕ್ಸಲ್ ಚಟುವಟಿಕೆ ಬಗ್ಗೆ ನಮಗೆ ಈವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಶರಣಾಗತರಾಗಿರುವ ಆರು ಜನರೇ ಕೊನೆ ಎಂಬುದಾಗಿದೆ. ಹೊರಗಡೆಯಿಂದ ಬಂದರೆ ನಿಗಾವಹಿಸಲಿದ್ದಾರೆ” ಎಂದು ಹೇಳಿದರು.

“ಎನ್‌ಕೌಂಟರ್‌ನಲ್ಲಿ‌ ಮೃತಪಟ್ಟ ನಕ್ಸಲ್ ವಿಕ್ರಮ್ ಗೌಡ ಅವರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಬೇಡಿಕೆಯನ್ನು ಪರಿಶೀಲಿಸಲಿದ್ದಾರೆ. ನಕ್ಸಲರು ಶರಣಾಗತರಾಗಿರುವ ಪ್ರಕರಣ ಮತ್ತು ವಿಕ್ರಮ್ ಗೌಡ ಪ್ರಕರಣ ಬೇರೆ” ಎಂದರು.

“ಶಾಸಕಾಂಗ ಪಕ್ಷದ ಕಾರ್ಯಸೂಚಿ ಏನೆಂಬುದು ಗೊತ್ತಿಲ್ಲ. ಶಾಸಕಾಂಗ ಪಕ್ಷದಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಬಜೆಟ್ ಅಧಿವೇಶನ ಸಮೀಪಿಸುತ್ತಿದೆ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಬಗ್ಗೆ ಹಾಗೂ ಜಾತಿಗಣತಿ ವರದಿ ಜಾರಿಗೆ ತರುವ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments