18ನೇ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಕ್ಕೂ ಮುನ್ನ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರು ಒಗ್ಗಟ್ಟಾಗಿ ಕೈಯಲ್ಲಿ ಭಾರತೀಯ ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡು ನೂತನ ಸಂಸತ್ ಭವನಕ್ಕೆ ಆಗಮಿಸಿದರು.
ಸಂಸತ್ ಪ್ರವೇಶ ದ್ವಾರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರು ಜೊತೆಯಾಗಿ ಸಂಸತ್ ಪ್ರವೇಶಿಸುವ ಮುನ್ನ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸಿ ಒಳನಡೆದರು.
ಈ ವೇಳೆ ‘ನಾವು ಸಂವಿಧಾನ ಉಳಿಸುತ್ತೇವೆ’, ‘ಪ್ರಜಾಪ್ರಭುತ್ವ ಉಳಿಸಿ’, ‘ಲಾಂಗ್ ಲೈವ್ ಕಾನ್ಸ್ಟಿಟ್ಯೂಷನ್’ ಎಂಬ ಘೋಷಣೆಗಳನ್ನು ಕೂಗಿದರು. “ಸಂವಿಧಾನ ಉಳಿಸಲು ಜನರು ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ ಎಂದು ಈ ಬಾರಿಯ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ” ಎಂದು ‘ಇಂಡಿಯಾ’ ನಾಯಕರು ಹೇಳಿದರು.
“ಸಂವಿಧಾನ ಉಳಿಸಲು ನಾವು ಒಗ್ಗಟ್ಟಾಗಿದ್ದೇವೆ. ಆದ್ದರಿಂದ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಂವಿಧಾನ ಪುಸ್ತಕ ಹಿಡಿದಿದ್ದೇವೆ. ಯಾವ ಶಕ್ತಿಯು ಭಾರತದ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ಸಾರುತ್ತಿದ್ದೇವೆ” ಎಂದು ರಾಹುಲ್ ಗಾಂಧಿ ಸುದ್ದಿ ಸಂಸ್ಥೆಗೆ ತಿಳಿಸಿದರು.