ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದ ಆರೋಗ್ಯ ಇಲಾಖೆಯ ಆರೋಗ್ಯವೇ ಕೆಟ್ಟುಹೋಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 2,000 ವೈದ್ಯರ ಹುದ್ದೆ ಖಾಲಿ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ 25,000 ಗಡಿ ದಾಟಿದ ಡೆಂಘೀ ಪ್ರಕರಣ ಪತ್ತೆಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, “ಬಿಲ್ ಪಾವತಿ ಮಾಡಲಾಗದೆ 14 ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ, ಎಂಆರ್ಐ ಸ್ಕ್ಯಾನಿಂಗ್ ಸ್ಥಗಿತಗೊಂಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೀವರಕ್ಷಕ ಔಷಧಿಗಳ ಅನುದಾನ 40% ಕಟ್ ಆಗಿದೆ” ಎಂದು ದೂರಿದ್ದಾರೆ.
“3,500 ಆಂಬುಲೆನ್ಸ್ ಚಾಲಕರಿಗೆ 3 ತಿಂಗಳಿಂದ ಸಂಬಳ ಇಲ್ಲ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ ಮೂವರು ಗರ್ಭಿಣಿ ಮಹಿಳೆಯರ ಸಾವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕು ಹೆಚ್ಚು ಔಷಧಿಗಳು ‘No Stock’ ಎಂದು ಬೋರ್ಡ್ ಹಾಕಲಾಗಿದೆ” ಎಂದು ಕುಟುಕಿದ್ದಾರೆ
“ಇಷ್ಟೆಲ್ಲಾ ಎಡವಟ್ಟುಗಳ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ ದರ 20% ಹೆಚ್ಚಳವಾಗಿದೆ. ಒಂದು ವೇಳೆ ಸಂಪುಟ ಪುನಾರಚನೆ ಆದರೆ ಬಹುಶಃ ಮೊದಲು ತಲೆದಂಡ ಆಗಬೇಕಾಗಿರುವುದು ಆರೋಗ್ಯ ಸಚಿವರದೇ!” ಎಂದು ಆಗ್ರಹಿಸಿದ್ದಾರೆ.