Homeಕರ್ನಾಟಕಬಿಜೆಪಿ ಶಾಸಕ ಮುನಿರತ್ನ ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್‌

ಬಿಜೆಪಿ ಶಾಸಕ ಮುನಿರತ್ನ ಜಾಮೀನು ತೀರ್ಪು ನಾಳೆಗೆ ಕಾಯ್ದಿರಿಸಿದ ಕೋರ್ಟ್‌

ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಜಾತಿ ನಿಂದನೆ, ಪ್ರಾಣ ಬೆದರಿಕೆ ಹಾಕಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ನಾಯ್ಡು ಜಾಮೀನು ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ಮುನಿರತ್ನ ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಬೆಂಗಳೂರಿನ 82ನೇ ಎಸಿಸಿಎಂ ನ್ಯಾಯಾಲಯದ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ. ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಮುನಿರತ್ನ ಬಿಡುಗಡೆ ಭವಿಷ್ಯ ನಿರ್ಧಾರವಾಗಲಿದೆ.

ಇದಕ್ಕೂ ಮುನ್ನ ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಗೂ ಸರ್ಕಾರದ ಪರ ವಿಶೇಷ ಸಾರ್ವಜನಿಕ ಅಭಿಯೋಜಕ(ಎಸ್ಪಿಪಿ) ಪ್ರದೀಪ್ ವಾದ ಮಂಡಿಸಿದರು.

ಮೊದಲು ಮುನಿರತ್ನ ಪರ ವಾದ ಮಂಡಿಸಿದ ಅಶೋಕ್ ಹಾರನಹಳ್ಳಿಯವರು, “ಪೊಲೀಸರು ತಮ ಕಕ್ಷಿದಾರರಿಗೆ ಕನಿಷ್ಟ ನೋಟಿಸ್ ಕೊಡದೆ ಬಂಧಿಸಿದ್ದಾರೆ. ಅಷ್ಟಕ್ಕೂ ಅವರೇನು ದೇಶಬಿಟ್ಟು ಹೋಗುತ್ತಿರಲಿಲ್ಲ. ವಿಚಾರಣೆಗೆ ಬರುವಂತೆ ಸೂಚಿಸಿದ್ದರೆ ಹಾಜರಾಗುತ್ತಿದ್ದರು. ಪೊಲೀಸರು ಆತುರದಲ್ಲಿ ಬಂಧಿಸಿದ್ದಾರೆ” ಎಂದು ವಾದಿಸಿದರು.

“ಈ ಪ್ರಕರಣ ನಡೆದಿರುವುದು ಶಾಸಕರ ಕಚೇರಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಒಬ್ಬ ವ್ಯಕ್ತಿಯನ್ನು ನಿಂದಿಸುವುದು, ಉದ್ದೇಶಪೂರ್ವಕವಾಗಿ ಅಪಮಾನ ಮಾಡುವುದು ಕಂಡುಬಂದರೆ ಜಾತಿ ನಿಂದನೆ ಪ್ರಕರಣ ದಾಖಲಿಸಬಹುದು. ಕಚೇರಿಯೊಳಗೆ ನಡೆದಿರುವ ಸಂಭಾಷಣೆ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ” ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.

ಇದಕ್ಕೆ ತೀವ್ರ ಆಕ್ಷೇಪಿಸಿದ ಸರ್ಕಾರಿ ಪರ ಅಭಿಯೋಜಕ ಪ್ರದೀಪ್ ಅವರು, “ಶಾಸಕರ ಕೊಠಡಿ ಸಾರ್ವಜನಿಕರ ವ್ಯಾಪ್ತಿಗೆ ಒಳಪಡುತ್ತದೆ. ಅವರು ದುರದ್ದೇಶಪೂರ್ವಕವಾಗಿಯೇ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಇನ್ನು ಕೆಲವರು ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಾಗಿಲ್ಲ” ಎಂದರು.

“ಜಾತಿ ನಿಂದನೆ ಮಾಡಿದಾಗ ಸೆಕ್ಷನ್ 17ರಡಿ ನೋಟಿಸ್ ನೀಡದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಬಹುದು. ಅಗತ್ಯವಿದ್ದರೆ ತನಿಖಾಧಿಕಾರಿಗಳು ಬಂಧಿಸಬಹುದು. ಇಲ್ಲಿ ಪೊಲೀಸರ ಕ್ರಮ ಕಾನೂನಿನ ಪ್ರಕಾರವಾಗಿಯೇ ನಡೆದಿದೆ” ಎಂದು ಸಮರ್ಥಿಸಿಕೊಂಡರು.

ದೂರುದಾರ ವೇಲು ನಾಯ್ಕರ್ ಪರ ಸೂರ್ಯ ಮುಕುಂದರಾಜ್ ವಾದ ಮಂಡಿಸಿದ್ದು, “ಮುನಿರತ್ನ ಜೈಲಿನಿಂದ ಹೊರಗೆ ಬಂದರೆ ದೂರುದಾರರಿಗೆ ಮತ್ತೆ ಪ್ರಾಣಬೆದರಿಕೆ ಹಾಕುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿಯಾದರೂ ಏನು? ಸಾಕ್ಷಿದಾರರ ಮೇಲೆ ಪ್ರಭಾವ ಬೀರುವುದಿಲ್ಲವೇ? ಹೀಗಾಗಿ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಕೊಡಬಾರದು” ಎಂದು ವಾದಿಸಿದರು.

ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಕಿರುಕುಳ ನೀಡಿರುವುದು, ಜಾತಿ ನಿಂದನೆ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದಾಖಲಾದ ನಂತರ ಸೆಪ್ಟೆಂಬರ್ 14 ರಂದು ಕೋಲಾರದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿದೆ.

ಮೊದಲ ಎಫ್‌ಐಆರ್​ನಲ್ಲಿ ಮುನಿರತ್ನ ವಿರುದ್ಧ ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ, ಸುಲಿಗೆ ಮಾಡಲು ವ್ಯಕ್ತಿಯನ್ನು ಗಾಯಗೊಳಿಸುವ ಭಯ, ವಂಚನೆ ಮತ್ತು ಸ್ವಯಂಪ್ರೇರಿತವಾಗಿ ಸಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments