ನೆರೆಪೀಡಿತರು ಮತ್ತು ಮನೆ ಕಳಕೊಂಡವರಿಗೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿದ ಮಾದರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಹೆಚ್ಚು ಪರಿಹಾರ ಕೊಟ್ಟು ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಅಂಕೋಲಾ ತಾಲ್ಲೂಕಿನ ಉಳುವಾರೆ, ಶಿರೂರು ಮತ್ತಿತರ ಕಡೆ ಆದ ಮಳೆ ಹಾನಿ, ಅನಾಹುತದಿಂದ ಬಡವರು ಮನೆ ಕಳೆದುಕೊಂಡಿದ್ದಾರೆ. ಅದನ್ನು ನಾನು ವೀಕ್ಷಿಸಿ ಬಂದಿದ್ದೇನೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರವು ಎನ್ಡಿಆರ್ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡ ಬಡವರಿಗೆ ಸುಮಾರು 1 ಲಕ್ಷ ಕೊಡಬೇಕಿತ್ತು. ಅದು ಸಾಕಾಗುವುದಿಲ್ಲ ಎಂದು 5 ಲಕ್ಷ ನೀಡುವ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದರು” ಎಂದರು.
“ಗೋಡೆ ಕುಸಿದ ಮನೆಗೆ ಎನ್ಡಿಆರ್ಎಫ್ ನಿಯಮದ ಪ್ರಕಾರ 40 ಸಾವಿರ ಕೊಡುತ್ತಿದ್ದರು. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಯಡಿಯೂರಪ್ಪ ಅವರು ಕೈಗೊಂಡಿದ್ದರು. ರಾಜ್ಯಾದ್ಯಂತ ಬಡವರು ಅತಿವೃಷ್ಟಿಯಿಂದ ಮನೆಗಳನ್ನು ಕಳಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳು ಇದೇ ಮಾದರಿಯಲ್ಲಿ ಪರಿಹಾರ ಕೊಡಬೇಕು; ತಕ್ಷಣ ಈ ಸಮಸ್ಯೆಗೆ ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.
“ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕರ ಹಲವರು ಮೃತರಾಗಿದ್ದು, ಕುಟುಂಬದ ಮೂವರು ಮಹಿಳೆಯರು ನಿರ್ಗತಿಕರಾಗಿದ್ದಾರೆ. ಆದರೆ, ಅವರ ಮನೆಗೆ ಶಾಸಕರು, ಸಚಿವರು ಭೇಟಿ ಕೊಟ್ಟಿಲ್ಲ. ಕಾನೂನು ಏನೇ ಇದ್ದರೂ ಪರಿಹಾರ ನೀಡಬೇಕಿತ್ತು. ನಿನ್ನೆ ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಬಡವರ ಈ ಕುಟುಂಬಕ್ಕೆ ರಾಜ್ಯ ಸರಕಾರ ಕೂಡಲೇ ಸ್ಪಂದಿಸಬೇಕು, ಪರಿಹಾರ ಕೊಡಬೇಕಿದೆ” ಎಂದರು.