ಜಾನಪದ ವಿವಿಯಿಂದ ಸ್ನಾತಕೋತ್ತರ/ಸಂಶೋಧನಾ ಕೇಂದ್ರ ಹಾಗೂ ಜಾನಪದ ಲೋಕ ನಿರ್ಮಿಸಲು ಶಹಾಪುರ ತಾಲ್ಲೂಕಿನಲ್ಲಿ ಹತ್ತು ಎಕರೆ ಭೂಮಿ ಕೊಡಿಸಲು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಒಪ್ಪಿಕೊಂಡಿದ್ದಾರೆ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, “ಕಲಬುರ್ಗಿಗೆ ಆಗಮಿಸಿದ್ದ ಕರ್ನಾಟಕ ಜಾನಪದ ವಿವಿಯ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಅವರಿಗೆ ವಿವಿಯಿಂದ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಿ ಗೌರವಿಸಲಾಯಿತು. ಅದೇ ಸಮಯದಲ್ಲಿ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾನಪದ ಲೋಕ,ಜಾನಪದ ಸಂಶೋಧನಾ ಕೇಂದ್ರ ಹಾಗೂ ಸ್ನಾತಕೋತ್ತರ ಕೇಂದ್ರ ಸ್ಥಾಪಿಸುವ ವಿಚಾರವಿದೆ. ಹತ್ತು ಎಕ್ರೆ ಭೂಮಿ ಕೊಡಿಸಿದರೆ ಅಲ್ಲಿ ಮಾಡಲಾಗುವುದು ಎಂದು ತಿಳಿಸಿದ್ದರು” ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಅಭಿವೃದ್ಧಿ ಬಗ್ಗೆ ಸದಾ ಯೋಚಿಸುವ ಹಾಗೂ ಶೈಕ್ಷಣಿಕ ಪ್ರೇಮಿಗಳು ಆದ ನಮ್ಮ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರೊಂದಿಗೆ ಮಾತಾಡಿ ಕುಲಪತಿಗಳೊಂದಿಗೆ ಮಾತಾಡಿಸಲಾಯಿತು. ಈ ವೇಳೆ ಹತ್ತು ಎಕರೆ ಭೂಮಿ ಕೊಡಿಸಲು ಸಚಿವರು ಮುಂದೆ ಬಂದಿದ್ದಾರೆ” ಎಂದು ತಿಳಿಸಿದ್ದಾರೆ.
“ಸಚಿವರಿಗೆ ಅನಂತ ಧನ್ಯವಾದಗಳು. ನಮ್ಮ ಭಾಗದಲ್ಲಿ ಸ್ನಾತಕೋತ್ತರ ಕೇಂದ್ರ/ಸಂಶೋಧನಾ ಕೇಂದ್ರ ಹಾಗೂ ಜಾನಪದ ಲೋಕ ನಿರ್ಮಿಸಲು ಮುಂದಾದ ಕುಲಪತಿಗಳಿಗೂ ಧನ್ಯವಾದಗಳು. ನಮ್ಮ ಭಾಗದ ವಿದ್ಯಾರ್ಥಿಗಳಿಗೆ,ಜಾನಪದ ಕವಿ ಕಲಾವಿದರಿಗೆ ಇದರಿಂದ ಮುಂದೆ ಬಹಳ ಉಪಯೋಗ ಆಗಲಿದೆ. ಈ ಸಮಾಜಮುಖಿ ಶೈಕ್ಷಣಿಕ ಕೆಲಸಕ್ಕೆ ಮುಂದಾದ ನಮ್ಮ ಸಚಿವರು ಅಭಿನಂದನಾರ್ಹರು” ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಹೇಳಿದ್ದಾರೆ.