ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ತಂಡ, ಹೊಳೆನರಸೀಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತೆಯನ್ನು ಸೋಮವಾರ ಬೆಂಗಳೂರಿನ ಬಸವನಗುಡಿಯಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ ಮನೆಗೆ ಕರೆತಂದು ಮಹಜರು ನಡೆಸಿದರು.
ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ಇಲ್ಲಿಗೂ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿದಂತಿದೆ. ಹೀಗಾಗಿ ಪೊಲೀಸ್ ಜೀಪಿನಲ್ಲಿ ಸಂತ್ರಸ್ತೆಯನ್ನು ರೇವಣ್ಣ ಅವರ ಬಸವನಗುಡಿ ಮನೆಗೆ ಕರೆದೊಯ್ದಿದ್ದ ಅಧಿಕಾರಿಗಳು, ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದರು. ಘಟನೆಯ ಮರುಸೃಷ್ಟಿ ಮಾಡಿ, ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ಇದೆಲ್ಲ ಅಂಶವನ್ನು ಅಧಿಕಾರಿಗಳು, ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಿದ್ದಾರೆ.
ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರನ್ನು ಬಂಧಿಸಿರುವ ಅಧಿಕಾರಿಗಳು, ಮೇ 8ರವರೆಗೆ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ. ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದ ಸೆಲ್ನಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಪಹರಣವಾಗಿದ್ದ ಸಂತ್ರಸ್ತೆಯನ್ನು ರಕ್ಷಿಸಿ ಹೇಳಿಕೆ ಪಡೆದಿರುವ ಅಧಿಕಾರಿಗಳು, ಅವರನ್ನು ನ್ಯಾಯಾಧೀಶರ ಎದುರು ಸದ್ಯದಲ್ಲೇ ಹಾಜರುಪಡಿಸಲಿದ್ದಾರೆ. ಸಿಆರ್ಪಿಸಿ 164 ಅಡಿ ಹೇಳಿಕೆ ದಾಖಲಿಸಲಿದ್ದಾರೆ. ಅದಕ್ಕೂ ಮುನ್ನವೇ ಅವರನ್ನು ಆರೋಪಿ ಮನೆ ಹಾಗೂ ತೋಟದ ಮನೆಗಳಿಗೆ ಕರೆದೊಯ್ದು ಮಹಜರು ನಡೆಸುತ್ತಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಯಿಸಿಕೊಂಡಿರುವ ಮತ್ತೊಬ್ಬ ಆರೋಪಿ ರೇವಣ್ಣ ಅವರ ಪುತ್ರ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು, ಅವರ ವಿರುದ್ಧ ಎಸ್ಐಟಿ ಬ್ಲೂ ಕಾರ್ನರ್ ನೋಟಿಸ್ ಜಾರಿಮಾಡುವಂತೆ ಸಿಬಿಐಅನ್ನು ಕೋರಿದೆ.