Homeಕರ್ನಾಟಕಅಧಿವೇಶನ | ಅಕ್ರಮ ಮದ್ಯ ಮಾರಾಟ; ಪಕ್ಷಬೇಧ ಮರೆತು ಗಂಭೀರ ಚರ್ಚೆ

ಅಧಿವೇಶನ | ಅಕ್ರಮ ಮದ್ಯ ಮಾರಾಟ; ಪಕ್ಷಬೇಧ ಮರೆತು ಗಂಭೀರ ಚರ್ಚೆ

ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವಿಚಾರ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಪ್ರತಿಧ್ವನಿಸಿ, ಪಕ್ಷಬೇಧ ಮರೆತು ಗಂಭೀರ ಚರ್ಚೆಗೆ ದಾರಿಮಾಡಿಕೊಟ್ಟಿತು.

ಶಾಸಕ ಕೌಜಲಗಿ ಮಹಂತೇಶ್ ಶಿವಾನಂದ್ ಅವರ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಂತೆ ಆಗ್ರಹಿಸಿದರು.

“ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವ್ಯಕ್ತಿಗಳು ಸ್ವ ಲಾಭಕ್ಕಾಗಿ ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಪ್ರಕರಣಗಳು ಗಮನಕ್ಕೆ ಬಂದಿವೆ. ನಿಯಂತ್ರಣ ಮಾಡುವ ಕೆಲಸವನ್ನು ಇಲಾಖೆಯಿಂದ ಮಾಡುತ್ತಿದ್ದೇವೆ. ಕಾನೂನು ಉಲ್ಲಂಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಸಚಿವ ಆರ್‌ ಬಿ ತಿಮ್ಮಾಪುರ ಉತ್ತರಿಸಿದರು.

“ಅಕ್ರಮ ಮದ್ಯ ಮಾರಾಟದಿಂದ ವಿದ್ಯಾರ್ಥಿಗಳು ಮದ್ಯವ್ಯಸನಿಗಳಾಗುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಲಾಖೆಯಿಂದ ಅಗತ್ಯ ಸೂಚನೆಗಳನ್ನು ನೀಡಲಾಗುತ್ತಿದೆ” ಎಂದು ಸಚಿವರು ಹೇಳಿದರು.

“ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆಯಿಂದ ವಲಯ ವ್ಯಾಪ್ತಿಯ ಮಾರ್ಗಗಳಲ್ಲಿ ನಿರಂತರವಾಗಿ ಗಸ್ತು ನಡೆಸಲಾಗುತ್ತಿದೆ. ಗಸ್ತಿನ ಸಂದರ್ಭದಲ್ಲಿ ಮಹಿಳೆಯರು, ಮಹಿಳಾ ಸಂಘಗಳು ಸಾರ್ವಜನಿಕರಿಂದ ದೂರು ಸ್ವೀಕೃತವಾದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಸ್ಥಳಗಳ ಮೇಲೆ ದಾಳಿ ನಡೆಸಿ ಅಕ್ರಮ ಕಂಡುಬಂದಲ್ಲಿ ಅಬಕಾರಿ ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ” ಎಂದು ಹೇಳಿದರು.

18,253 ಆರೋಪಿತರ ದಸ್ತಗಿರಿ

“2024-25ನೇ ಅಬಕಾರಿ ಸಾಲಿನಲ್ಲಿ ಜನವರಿ ಅಂತ್ಯದವರೆಗೂ 17,390 ಮೊಕದ್ದಮೆಗಳನ್ನು ದಾಖಲಿಸಿ 18,253 ಆರೋಪಿತರನ್ನು ದಸ್ತಗಿರಿಗೆ ಒಳಪಡಿಸಲಾಗಿದೆ. ಮಾಸಿಕವಾಗಿ ಎಲ್ಲ ಮದ್ಯ ಮಾರಾಟ ಸನ್ನದ್ದುಗಳನ್ನು ನಿಯಮಿತವಾಗಿ ಪರಿಶೀಲಿಸಿ ಷರತ್ತು ಉಲ್ಲಂಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸಭೆ ನಡೆಸಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಕ್ರಮ ಮಾರಾಟ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮದ್ಯವ್ಯಸನ ಮತ್ತು ಮಾರಾಟದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ” ಎಂದು ಸಚಿವರು ಮಾಹಿತಿ ನೀಡಿದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷಗಳ ಶಾಸಕರು, ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು ಮಾತನಾಡಿ, “ಪ್ರತಿ ಮದ್ಯ ಮಾರಾಟದ ಅಂಗಡಿಗೆ ಗುರಿ ನಿಗದಿಪಡಿಸಿರುವುದರಿಂದ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವಂತಾಗಿದೆ” ಎಂದರು.

ಬಿಜೆಪಿಯ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, “ಕಿರಾಣಿ ಅಂಗಡಿಗೆ ಮದ್ಯ ಸರಬರಾಜಾಗುತ್ತಿವೆ. ಇದನ್ನು ತಡೆಯಬೇಕು. ಎಸ್‍ಸಿ/ಎಸ್‍ಟಿ ಕಾಲೋನಿಗಳಲ್ಲಿ ಹೆಚ್ಚು ಮದ್ಯವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯಲು ಕಾನೂನು ರೀತಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಇದಕ್ಕೆ ಆಕ್ಷೇಪವೆತ್ತಿದ ಆಡಳಿತ ಪಕ್ಷದ ಶಾಸಕ ನಾರಾಯಣಸ್ವಾಮಿ, “ಎಸ್‍ಸಿ/ಎಸ್‍ಟಿಯವರು ಮಾತ್ರ ಕುಡಿಯುತ್ತಾರಾ? ನೀವು ಕುಡಿಯುವುದಿಲ್ಲವೇ? ಎಂದು ಛೇಡಿಸಿದರು.

ಬಿಜೆಪಿ ಶಾಸಕ ಸುನೀಲ್‍ಕುಮಾರ್ ಮಾತನಾಡಿ, “ಸರ್ಕಾರ ಗುರಿ ನಿಗದಿಪಡಿಸಿರುವುದರಿಂದ ಅಕ್ರಮ ಮಾರಾಟಕ್ಕೆ ದಾರಿ ಮಾಡಿಕೊಟ್ಟಂತಾಗಿದೆ” ಎಂದು ಆರೋಪಿಸಿದರು. ಬಿಜೆಪಿಯ ಮತ್ತೊಬ್ಬ ಶಾಸಕ ಸಿದ್ದು ಸವದಿ ಮಾತನಾಡಿ, “ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಮಾಹಿತಿ ಅಬಕಾರಿ ಇನ್ಸ್‍ಪೆಕ್ಟರ್‍ಗಳಿಗೆ ಇರುತ್ತವೆ. ಇಂತಹ ಕಾರ್ಯಕ್ಕೆ ಉತ್ತೇಜನ ನೀಡುವ ಅಧಿಕಾರಿಯನ್ನು ಅಮಾನತು ಮಾಡಿ” ಎಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌, “ಎಲ್ಲೆಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತದೆ ಎಂಬ ಮಾಹಿತಿ ಶಾಸಕರಿಗೆ ಇರುತ್ತದೆ. ಅದರ ಪಟ್ಟಿ ಕೊಟ್ಟು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ, ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಯ ಮೇಲೆ ಕ್ರಮ ಜರುಗಿಸಿ” ಎಂದು ಸಲಹೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments