ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವ ಉದ್ದೇಶದಿಂದ ಆಗಸ್ಟ್ 2024ರಲ್ಲಿ ರಚಿಸಿದ್ದ ಸಂಪನ್ಮೂಲ ಕ್ರೋಡೀಕರಣ ಸಮಿತಿಯು ತನ್ನ ಅಂತಿಮ ವರದಿಯನ್ನು ಗುರುವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು.
ಸಂಪನ್ಮೂಲ ಕ್ರೋಡೀಕರಣ ಸಮಿತಿಯು ಕೈಗೊಂಡ ಸಮಗ್ರ ವಿಶ್ಲೇಷಣೆ ಮತ್ತು ಶಿಫಾರಸುಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕರಿಸಿದರು.
ಕರ್ನಾಟಕ ರಾಜ್ಯವು, ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತ್ಯುತ್ತಮ ಆರ್ಥಿಕ ಬೆಳವಣಿಗೆಯನ್ನು ಸಾಧಿಸುತ್ತಿದೆ. ರಾಜ್ಯದ ಒಟ್ಟು ರಾಜಸ್ವ ಸ್ವೀಕೃತಿಗಳಲ್ಲಿ ಸ್ವಂತ ತೆರಿಗೆ ರಾಜಸ್ವದ ಪಾಲು ಶೇ.60-70 ರಷ್ಟಿದ್ದು, ರಾಜ್ಯದ ಪ್ರಮುಖ ಆದಾಯದ ಮೂಲವಾಗಿದೆ. ವಾಣಿಜ್ಯ ತೆರಿಗೆ, ರಾಜ್ಯ ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ತೆರಿಗೆಗಳು ರಾಜ್ಯದ ಸ್ವಂತ ತೆರಿಗೆ ರಾಜಸ್ವದ ಪ್ರಮುಖ ಸ್ವೀಕೃತಿಗಳಾಗಿರುತ್ತದೆ.
ಪ್ರಮುಖ ಸವಾಲುಗಳು
ತೆರಿಗೆಯೇತರ ಆದಾಯ ಕಡಿಮೆಯಿರುವುದು, ವಿಶೇಷವಾಗಿ ಬಳಕೆದಾರರ ಶುಲ್ಕಗಳು ಹಾಗೂ ಸರ್ಕಾರಿ ಸ್ವತ್ತುಗಳಿಂದ, ಗುತ್ತಿಗೆ ಮತ್ತು ನಗದೀಕರಣದಿಂದ ಹೆಚ್ಚಿನ ರಾಜಸ್ವ ಸೃಜಿಸಲು ವಿಫುಲ ಅವಕಾಶಗಳಿರುತ್ತದೆ.
ಆಸ್ತಿ ದತ್ತಾಂಶಗಳ ಉತ್ತಮ ನಿರ್ವಹಣೆ ಮತ್ತು ಸರ್ಕಾರಿ ಆಸ್ತಿಗಳ ವ್ಯವಸ್ಥಿತ ಸಮೀಕ್ಷೆಯ ಅಗತ್ಯವಿರುತ್ತದೆ.
ಮಾರ್ಗಸೂಚಿ ದರಗಳು ಮತ್ತು ಆಸ್ತಿ ತೆರಿಗೆಗಳ ಪರಿಷ್ಕರಣೆಯಿಂದಾಗಿ ಸ್ಥಳೀಯ ಸಂಸ್ಥೆಗಳು ರಾಜಸ್ವ ಸೃಜಿಸಬಹುದಾದ ಅವಕಾಶವಿರುತ್ತದೆ.
ಪ್ರಮುಖ ಶಿಫಾರಸುಗಳು
ತೆರಿಗೆ ಸುಧಾರಣೆ ಮೂಲಕ ಕೆಲ ಪ್ರಮುಖ ರಾಜಸ್ವ ಮೂಲಗಳ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು.
ಅಬಕಾರಿ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹರಾಜು ಆಧಾರಿತ ಡಿಜಿಟಲ್ ಸನ್ನದುಗಳನ್ನು ನೀಡುವುದು.
ಸಾರ್ವಜನಿಕ ಸೇವೆಗಳಲ್ಲಿ ಬಳಕೆದಾರ ಶುಲ್ಕಗಳನ್ನು ತರ್ಕಬದ್ಧಗೊಳಿಸುವುದು; ಪ್ರಮಾಣಾತ್ಮಕ ಬಿಲ್ಲಿಂಗ್ (volumetric billing) ವ್ಯವಸ್ಥೆಗೆ ಹಂತ ಹಂತವಾಗಿ ಸ್ಥಳಾಂತರಿಸುವುದು ಮತ್ತು ಹಣ ದುಬ್ಬರಕ್ಕೆ ಅನುಗುಣವಾಗಿ ಬಳಕೆದಾರರ ಶುಲ್ಕಗಳನ್ನು ಸ್ವಯಂಚಾಲಿತವಾಗಿ ಪರಿಷ್ಕರಿಸುವ ವ್ಯವಸ್ಥೆಯನ್ನು ರೂಪಿಸುವುದು.
ವೈಜ್ಞಾನಿಕ ಆಸ್ತಿ ಮೌಲ್ಯಮಾಪನ, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಅಡಿಯಲ್ಲಿ ಗುತ್ತಿಗೆಯನ್ನು ವಿಸ್ತರಿಸುವುದು ಮತ್ತು ನಗರ ಭೂ-ಸ್ವತ್ತುಗಳನ್ನು ನಗದೀಕರಿಸುವ ಮೂಲಕ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸುವುದು.
ಸಿಬ್ಬಂದಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಇಲಾಖಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಆಸ್ತಿ ಸಮೀಕ್ಷೆಗಳನ್ನು ನಿಯತಕಾಲಿಕವಾಗಿ ಮಾಡುವುದು ಮತ್ತು ತೆರಿಗೆಯೇತರ ಆದಾಯ ಮತ್ತು ಆಸ್ತಿ ನಗದೀಕರಣದ ಮೇಲ್ವಿಚಾರಣೆ ಮಾಡಲು ಆರ್ಥಿಕ ಇಲಾಖೆಯಲ್ಲಿ ಆರ್ಥಿಕ ನೀತಿ ವಿಭಾಗವನ್ನು ರಚಿಸುವುದು.
ಮುಂದಿನ ದಾರಿ
ಸಮಿತಿಯ ವರದಿಯಲ್ಲಿ ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಂತಹ ಬೆಳವಣಿಗೆಯನ್ನು ಉತ್ತೇಜಿಸುವ ಕ್ಷೇತ್ರಗಳಿಗೆ ಅಗತ್ಯ ಅನುದಾನ ಮೀಸಲಿಡುವುದು, ಹಾಗೂ ಪರಿಣಾಮಕಾರಿಯಾಗಿ ವೆಚ್ಚವನ್ನು ನಿರ್ವಹಿಸುವ ಅಗತ್ಯದ ಬಗ್ಗೆ ವಿವರಿಸಲಾಗಿದೆ. ರಾಜ್ಯದ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯದ ರಾಜಸ್ವ ಸಂಗ್ರಹಣೆಯಲ್ಲಿ ವ್ಯವಸ್ಥಿತ ಮತ್ತು ಕ್ರಮಬದ್ಧ ಸುಧಾರಣೆಗಳು ಅತ್ಯಾವಶ್ಯಕವೆಂದು ತಿಳಿಸಲಾಗಿದೆ.


