ಮೂರನ್ನು ಬಿಟ್ಟವರು ಊರಿಗೆ ದೊಡ್ಡವರು ಎಂಬ ಗಾದೆ ಮಾತಿನಂತೆ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ತಮ್ಮ ರಾಜಕೀಯ ಹೋರಾಟಗಳಿಗೆ ಬಿಜೆಪಿ ನಾಯಕರು ಕ್ರಿಮಿನಲ್ ಆರೋಪದ ಮುಖಂಡರನ್ನು ಜೊತೆಯಲ್ಲಿ ತೆಗೆದು ಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಪರಮಾವಧಿ ಎಂದು ಮಾಜಿ ಎಂಎಲ್ಸಿ ರಮೇಶ್ ಬಾಬು ಕಿಡಿಕಾರಿದ್ದಾರೆ.
“ದಿವ್ಯಾ ಹಾಗರಗಿ ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಇತರ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೂ ಬಿಜೆಪಿ ಅದನ್ನು ನಿರಾಕರಿಸಿ ಲೋಕದ ಕಣ್ಣಿಗೆ ಸುಳ್ಳಿನ ಸುಣ್ಣ ಸುರಿದಿತ್ತು. ಪಿಎಸ್ಐ ಹಗರಣದ ಪ್ರಮುಖ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ” ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಅವರು ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಪಿಎಸ್ಐ ಹಗರಣದಲ್ಲಿ ಜೈಲು ಪಾಲಾಗಿ, ಈಗ ಜಾಮೀನಿನ ಮೇಲೆ ಹೊರಗೆ ಇರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಹಲವಾರು ಪಾಲ್ಗೊಂಡಿದ್ದು ನಾಚಿಕೆಗೇಡಿನ ವಿಷಯವಾಗಿದೆ. ಕಲಬುರಗಿಯಲ್ಲಿ ಆರೋಪಿತರ ಜೊತೆ ಪಾದಯಾತ್ರೆಯ ಬೆವರು ಹರಿಸಿರುವ ಬಿಜೆಪಿ ನಾಯಕರು, ಕಳಂಕಿತರಿಗೆ ಪಕ್ಷದ ಉನ್ನತ ಸ್ಥಾನಗಳನ್ನು ನೀಡಿ ತಮ್ಮ ಪಕ್ಷದ ಸಿದ್ದಾಂತವನ್ನು ಬಹಿರಂಗವಾಗಿ ಜಾರಿಗೊಳಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ” ಎಂದಿದ್ದಾರೆ.
“ಇಡೀ ರಾಷ್ಟ್ರ ನೋಡುವಂತೆ ಪಿಎಸ್ಐ ಹಗರಣದಲ್ಲಿ ಗಂಭೀರ ಆರೋಪವನ್ನು ಹೊತ್ತಿದ್ದ ಭಾರತೀಯ ಜನತಾ ಪಕ್ಷ ತದನಂತರ ಸದರಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಕೈ ತೊಳೆದುಕೊಳ್ಳುವ ಪ್ರಯತ್ನವನ್ನು ಮಾಡಿತ್ತು. ಕರ್ನಾಟಕದ ಸಾವಿರಾರು ಯುವಕರ ಭವಿಷ್ಯವನ್ನು ಕಸಿ ದಂತಹ ಕರ್ನಾಟಕ ಪಿಎಸ್ಐ ಹಗರಣ, ಕಾಂಗ್ರೆಸ್ ಪಕ್ಷದ ಮತ್ತು ಪ್ರಿಯಾಂಕ ಖರ್ಗೆ ರವರ ಪ್ರಯತ್ನದಿಂದ ಆಚೆ ಬಂದಿತ್ತು, ಇಡೀ ರಾಜ್ಯದಲ್ಲಿ ಒಬ್ಬ ಹಿರಿಯ ದರ್ಜೆಯ ಐಪಿಎಸ್ ಅಧಿಕಾರಿ ಮತ್ತು ಐಎಎಸ್ ಅಧಿಕಾರಿ ಅಮಾನತು ಶಿಕ್ಷೆಗೆ ಒಳಗಾದಂತಹ ಪ್ರಕರಣವಿದು” ಎಂದು ಹೇಳಿದ್ದಾರೆ.
“ಇದೇ ಪ್ರಕರಣದಲ್ಲಿ ಅಂದಿನ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು ಪ್ರಮುಖ ಆರೋಪಿ ಬಿಜೆಪಿಯ ಅಂದಿನ ಮುಖಂಡರಾದ ದಿವ್ಯಾ ಹಾಗರಗಿ ಅವರ ಮನೆಗೆ ಮತ್ತು ಶಾಲೆಗೆ ಭೇಟಿ ನೀಡಿದ ಭಾವಚಿತ್ರಗಳು/ ಫೋಟೋಗಳು ಮಾಧ್ಯಮದಲ್ಲಿ ಪ್ರಕಟಗೊಂಡಿದ್ದವು. ಆಕೆಯ ಬಂಧನದ ನಂತರ ಭಾರತೀಯ ಜನತಾ ಪಕ್ಷ ಆಕೆಯನ್ನು ಪಕ್ಷದಿಂದ ಉಚ್ಛಾಟಿಸಿರುವ ಹೇಳಿಕೆಯನ್ನು ನೀಡಿತ್ತು. ಆದರೆ ಮತ್ತೆ ಕಲಬುರಗಿ ಪ್ರತಿಭಟನೆಯಲ್ಲಿ ಆಕೆಗೆ ಆದ್ಯತೆಯನ್ನು ನೀಡಿ ಅವರ ಜೊತೆಯಲ್ಲಿ ಬಿಜೆಪಿ ನಾಯಕರು ಬೀದಿ ಹೋರಾಟ ನಡೆಸಿರುವುದು ವಿಪರ್ಯಾಸ” ಎಂದು ಹರಿಹಾಯ್ದಿದ್ದಾರೆ.
“ಬಿಜೆಪಿ ನಾಯಕರಿಗೆ ಕಳಂಕಿತರನ್ನು, ಆರೋಪಿತರನ್ನು ಮತ್ತು ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನೂ ತಮ್ಮ ಹೋರಾಟಗಳಲ್ಲಿ ಜೊತೆ ಜೊತೆಯಲಿ ಕರೆದುಕೊಂಡು ಹೋಗದೆ ಇದ್ದರೆ ಆತ್ಮತೃಪ್ತಿ ಇರುವುದಿಲ್ಲ! ಕಳಂಕಿತರನ್ನು ಜೊತೆಯಲ್ಲಿ ಇಟ್ಟುಕೊಂಡು ಬಿಜೆಪಿ ನಾಯಕರು ಗುಲ್ಬರ್ಗದಲ್ಲಿ ಪ್ರತಿಭಟನೆಯನ್ನು ಮಾಡುವುದರ ಮೂಲಕ ಮತ್ತೊಮ್ಮೆ ತಮ್ಮ ವ್ಯಕ್ತಿತ್ವವನ್ನು ಮತ್ತು ಸಂಘ ಪರಿವಾರದ ಆದರ್ಶಗಳನ್ನು ಸಾಬೀತುಪಡಿಸಿಕೊಂಡಿದ್ದಾರೆ. ಕ್ರಿಮಿನಲ್ ಅಪರಾಧಿಗಳ ಜೊತೆ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಹವ್ಯಾಸವನ್ನು ಬೆತ್ತಲೆ ಗೊಳಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರ ಇಂತಹ ನಡೆಯನ್ನು ಖಂಡಿಸುತ್ತದೆ” ಎಂದು ಹೇಳಿದ್ದಾರೆ.