Homeಕರ್ನಾಟಕಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿದ್ಧತೆ: ಡಿಸಿಎಂ ಡಿ ಕೆ ಶಿವಕುಮಾರ್

ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿದ್ಧತೆ: ಡಿಸಿಎಂ ಡಿ ಕೆ ಶಿವಕುಮಾರ್

ಸಣ್ಣ ಕೈಗಾರಿಕೆಗಳಿಗಾಗಿ ಪ್ರತ್ಯೇಕ ಸಚಿವಾಲಯ ರಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ನಾವು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ದಾಬಸ್ ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ನಡೆದ ಕಾಸಿಯಾ ಶ್ರೇಷ್ಠತಾ ಮತ್ತು ನಾವೀನ್ಯತಾ ಕೇಂದ್ರ ಮತ್ತು ವಸ್ತು ಪ್ರದರ್ಶನಾ ಕೇಂದ್ರ ಕಟ್ಟಡಗಳ ಉದ್ಘಾಟನಾ ಸಮಾರಂಭದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

“ಕೆಐಎಡಿಬಿ ವತಿಯಿಂದ ಶೇ.20 ರಷ್ಟು ಅನುದಾನ ಸಣ್ಣ ಕೈಗಾರಿಕೆಗಳಿಗೆ ನೀಡಬೇಕು ಎಂಬ ಕಾನೂನಿದೆ. ಈ ವಿಚಾರವಾಗಿ ಎಂ.ಬಿ ಪಾಟೀಲ್ ಅವರ ಬಳಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಸಣ್ಣ ಕೈಗಾರಿಕೆಗಳಿಗೆ ನಾವು ಒತ್ತು ನೀಡಬೇಕು. ಕಾರ್ಮಿಕರ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಚರ್ಚೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.

“ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ನೀವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಕಾಸಿಯಾ ಸಂಸ್ಥೆ ಮುಂದಿನ ಪೀಳಿಗೆಗೆ ಕೌಶಲ್ಯಾಭಿವೃದ್ಧಿ ಕೆಲಸವನ್ನು ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಕಾಸಿಯಾ ಸಂಸ್ಥೆ ಮಾಡುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ನಿಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತದೆ

“ನನಗೆ ಸಣ್ಣ ಕೈಗಾರಿಕಾ ವಲಯದ ಪರಿಸ್ಥಿತಿಯ ಬಗ್ಗೆ ಅರಿವಿದೆ. ಈ ವಲಯ ಎಷ್ಟು ಉದ್ಯೋಗ ಸೃಷ್ಟಿಸುತ್ತದೆ, ಎಷ್ಟು ಶ್ರಮಿಸುತ್ತದೆ ಎಂದು ನಾನು ನೋಡಿದ್ದೇನೆ. ನೀವು ಬೃಹತ್ ಕೈಗಾರಿಕೆಗಳಿಗಿಂತ ಹೆಚ್ಚು ಒತ್ತಡವನ್ನು ಸರ್ಕಾರಗಳ ಮೇಲೆ ಹಾಕಬೇಕು. ಆಗ ಮಾತ್ರ ನಿಮಗೆ ಹೆಚ್ಚು ಯಶಸ್ಸು ಸಿಗಲು ಸಾಧ್ಯ. ಕೇಂದ್ರ ಸರ್ಕಾರ ದೊಡ್ಡ ಯೋಜನೆ ಘೋಷಣೆ ಮಾಡುತ್ತದೆ. ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ ನೀಡಬೇಕು ಎಂದು ಹೇಳುತ್ತದೆ. ಆದರೆ ಬ್ಯಾಂಕಿನವರು ನಿಮಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹಳೇ ಉದ್ಯಮಿಗಳಿಗೆ ಸಹಕಾರ ನೀಡುವಂತೆ ಹೊಸಬರಿಗೆ ಸಹಕಾರ ನೀಡುವುದಿಲ್ಲ” ಎಂದು ತಿಳಿಸಿದರು.

“ಇತ್ತೀಚೆಗೆ ನೀವು ನಿಮ್ಮ ಕಾರ್ಮಿಕರ ಸಮಸ್ಯೆ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ದೀರಿ. ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಕಾರ್ಮಿಕ ಸಚಿವರಿಗೆ ಅಗತ್ಯ ಸೂಚನೆ ನೀಡಿದ್ದೇವೆ. ನಿಮ್ಮ ನಿಯೋಗ ಸಚಿವರನ್ನು ಭೇಟಿ ಮಾಡಿ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ನೀವು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳಲು ಹೇಗೆಲ್ಲಾ ಅವಕಾಶವಿದೆ ಎಂದು ನಮ್ಮ ನಾಯಕರುಗಳಿಗೆ ಹೇಳಿ. ನಮ್ಮ ಕೆಲವು ರಾಜಕಾರಣಿಗಳಿಗೆ ಇಂತಹ ವಿಚಾರಗಳು ಅರ್ಥವಾಗುವುದಿಲ್ಲ. ಕೇವಲ ಐಟಿ ಬಿಟಿಯನ್ನು ಮಾತ್ರ ಲೆಕ್ಕಹಾಕುತ್ತಾರೆ” ಎಂದರು.

“ನಿಮ್ಮೆಲ್ಲರಿಗೂ ಶುಭವಾಗಲಿ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಶಕ್ತಿ ತುಂಬಬೇಕಿದೆ. ನಮ್ಮ ನೀತಿಗಳು ಕೈಗಾರಿಕೆಗಳಿಗೆ ಉದಾರವಾಗಿರಬೇಕು, ಆಕರ್ಷಣೀಯವಾಗಿರಬೇಕು. ಬೇರೆ ರಾಜ್ಯಗಳಲ್ಲಿ ಹೆಚ್ಚು ಆಕರ್ಷಕವಾದ ನೀತಿ ರೂಪಿಸುತ್ತಾರೆ. ಆದರೆ ಅಲ್ಲಿ ಗುಣಮಟ್ಟದ ಮಾನವ ಸಂಪನ್ಮೂಲಗಳಿಲ್ಲ. ದೊಡ್ಡ ದೊಡ್ಡ ಸಂಸ್ಥೆಗಳ ಮುಖ್ಯಸ್ಥರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಾನು ಮೊನ್ನೆ ಗುಬ್ಬಿಗೆ ಹೋಗಿ ಅಲ್ಲಿ ನಿರ್ಮಿಸಲಾಗಿರುವ 10.47 ಕಿ.ಮೀ ಉದ್ದದ ಮೇಲ್ಗಾಲುವೆಯನ್ನು ವೀಕ್ಷಣೆ ಮಾಡಿದೆ. ಸುಮಾರು 40 ಮೀ. ಎತ್ತರದ ಮೇಲ್ಗಾಲುವೆ ಇದಾಗಿದೆ. ವಿಶ್ವಮಟ್ಟದ ಯೋಜನೆ ಮಾಡುವ ಇಂಜಿನಿಯರ್ ಗಳು ನಮ್ಮಲ್ಲಿ ಇದ್ದಾರೆ” ಎಂದು ಹೇಳಿದರು.

ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ

ಗೃಹಸಚಿವರು ಮಧ್ಯರಾತ್ರಿ ನಿಮ್ಮನ್ನು ಭೇಟಿ ಮಾಡಿದ್ದು, ಪವರ್ ಶೇರಿಂಗ್ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಮಾಧ್ಯಮಗಳು ಕೇಳಿದಾಗ, “ಅವರು ಬಂದು ಭೇಟಿ ಮಾಡಿದ್ದು ನಿಜ, ಆದರೆ ಬೇರೆ ವಿಚಾರ ಚರ್ಚೆ ಮಾಡಿದೆವು. ಇಲ್ಲಿ ಪವರ್ ಶೇರಿಂಗ್ ವಿಚಾರ ಚರ್ಚೆ ಇಲ್ಲ. ನಾವೆಲ್ಲರೂ ಸೇರಿ ಒಟ್ಟಾಗಿ ಶಿಸ್ತಿನಿಂದ ಕೆಲಸ ಮಾಡಬೇಕು. ಇದರ ಹೊರತಾಗಿ ಬೇರೆ ಯಾವುದೇ ವಿಚಾರವಿಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments