Homeಕರ್ನಾಟಕತಮ್ಮ ಕುಟುಂಬದ ಒಳ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಂದಿದೆ; ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ತಮ್ಮ ಕುಟುಂಬದ ಒಳ ಜಗಳದಿಂದ ಪ್ರಜ್ವಲ್‌ ಪ್ರಕರಣ ಹೊರಬಂದಿದೆ; ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಜೆಡಿಎಸ್‌ ನಾಯಕರ ಕುಟುಂಬದ ಒಳಗಿನ ಜಗಳದಿಂದಾಗಿಯೇ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಹೊರಬಂದಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

‘ಮೇ 7ರ ಬಳಿಕ ಪ್ರಕರಣ ಎಲ್ಲಿಗೆ ಹೋಗುತ್ತದೆ ಕಾದು ನೋಡಿ’ ಎಂಬ ಎಚ್‌ ಡಿ ಕುಮಾರಸ್ವಾಮಿ ಅವರ ಆರೋಪದ ಕುರಿತು ಶನಿವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, “ಮೇ 7 ಅಲ್ಲ. ಅಲ್ಲಿವರೆಗೂ ಏಕೆ ಕಾಯಬೇಕು. ಇದರ ಮೂಲ, ಹಿನ್ನೆಲೆ ಏನು ಎಂಬುದನ್ನು ಬಿಚ್ಚಬೇಕಾ? ಇದು ಅವರ ಕುಟುಂಬದ ಆಂತರಿಕ ವಿಷಯ”ಎಂದರು.

“ವಿಡಿಯೊಗಳು ಬಹಿರಂಗವಾದ ಬಳಿಕ ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳಿದವರು ಯಾರು? ರಾಜ್ಯದ ಜನರ ಕ್ಷಮೆ ಕೇಳಿದ್ದು ಯಾರು? ಅವರ ಕುಟುಂಬ ಮತ್ತು ನಮ್ಮ ಕುಟುಂಬ ಬೇರೆ ಬೇರೆ ಎಂದು ಹೇಳಿದವರು ಯಾರು? ಬಿಜೆಪಿಯವರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಿದ್ದಾರೆ. ಜೆಡಿಎಸ್‌ನವರೂ ಅದೇ ರೀತಿ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.

ಒಕ್ಕಲಿಗ ನಾಯಕತ್ವ ಪಡೆಯಲು ಪ್ರಜ್ವಲ್‌ ಪ್ರಕರಣ ಹೊರ ಹಾಕಲಾಗಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, “ನನಗೆ ಕಾಂಗ್ರೆಸ್‌ ನಾಯಕ ಎಂಬುದೇ ಸಾಕು. ಒಕ್ಕಲಿಗ ನಾಯಕನ ಪಟ್ಟ ಬೇಕಿಲ್ಲ. ಒಕ್ಕಲಿಗನಾಗಿ ಹುಟ್ಟಿದ್ದೇನೆ. ಆ ಸಮಾಜಕ್ಕೆ ಗೌರವ ಕೊಡುವುದು, ಸಹಾಯ ಮಾಡುವುದು ನನ್ನ ಕರ್ತವ್ಯ ಅದನ್ನು ಮಾಡುತ್ತೇನೆ. ಆದರೆ, ಒಕ್ಕಲಿಗ ನಾಯಕ ಎಂದು ಕರೆಸಿಕೊಳ್ಳಲು ನನಗೆ ಇಷ್ಟವಿಲ್ಲ” ಎಂದು ತಿಳಿಸಿದರು.

ಜೆಡಿಎಸ್‌ ಶಾಸಕರನ್ನು ಕಾಂಗ್ರೆಸ್‌ ನಾಯಕರು ಸಂಪರ್ಕಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಜೆಡಿಎಸ್‌ ಪಕ್ಷದ ಯಾರ ಜತೆಗೂ ನಾನು ಸಂಪರ್ಕದಲ್ಲಿಲ್ಲ. ಅವರ ಪಕ್ಷದ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ. ಅವರ ಶಾಸಕರು, ಕುಟುಂಬದವರು ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments