ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನೇ ದಿನೆ ಹೊಸ ತಿರುವು ಪಡೆಯುತ್ತಿದ್ದು, ಪ್ರಕರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಆಪ್ತರೇ ಬಂಧನವಾಗುತ್ತಿದ್ದಾರೆ.
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಏಪ್ರಿಲ್ 21 ರಂದು ಪ್ರೀತಂಗೌಡ ಆಪ್ತ ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್ ನಾಯಕರು ದೂರು ನೀಡಿದ್ದರು. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ ರಚಿಸಿತು. ಪೆನ್ ಡ್ರೈವ್ ಪ್ರಕರಣ ನಿಧಾನವಾಗಿ ಎಸ್ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲ ಆಯಾಮಗಳಲ್ಲೂ ತನಿಖೆ ಕೈಗೆತ್ತಿಕೊಂಡಿದೆ. ತನಿಖೆಯ ಆರಂಭಿಕವಾಗಿಯೇ ಪ್ರೀತಂಗೌಡರ ಕೆಲ ಆಪ್ತರನ್ನು ಬಂಧಿಸಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಸ್ಐಟಿ ಭಾನುವಾರ (ಮೇ 12) ರಂದು ಪ್ರೀತಂಗೌಡರ ಮತ್ತಿಬ್ಬರು ಆಪ್ತರನ್ನು ಬಂಧಿಸಿದೆ.
ಬಂಧನಕ್ಕೊಳಗಾಗಿರುವ ಆರೋಪಿಗಳಾದ ಲಿಖಿತ್ ಗೌಡ ಮತ್ತು ಚೇತನ್, ಬಿಜೆಪಿಯ ಪ್ರೀತಂಗೌಡ ಅವರ ಆಪ್ತರಾಗಿದ್ದಾರೆ. ಮೊದಲಿಗೆ ಪೆನ್ಡ್ರೈವ್ ವೈರಲ್ ಸಂಬಂಧ ದಾಖಲಾಗಿದ್ದ ಕೇಸ್ನಲ್ಲಿ ಈ ಇಬ್ಬರ ಹೆಸರು ಇರಲಿಲ್ಲ. ನಂತರ ಈ ಇಬ್ಬರ ಮೇಲೆ ವಿಡಿಯೊ ಹಂಚಿಕೆ ಆರೋಪದಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು. ಪೆನ್ ಡ್ರೈವ್ ಪ್ರಕರಣವನ್ನು ರಾಜಕೀಯಗೊಳಿಸಿ ಮಾತನಾಡುತ್ತಿದ್ದ ಬಿಜೆಪಿ ನಾಯಕರಿಗೆ ಈಗ ಪದೇ ಪದೇ ಮುಜುಗರವಾಗುತ್ತಿದೆ. ಇದು ಕಮಲ ನಾಯಕರಿಗೆ ಆಘಾತ ತಂದಿದ್ದು, ಇನ್ನಷ್ಟು ನಿದ್ದೆಗೆಡುವಂತೆ ಮಾಡಿದೆ.
ದೇವರಾಜೇಗೌಡನಿಗೆ ತಪ್ಪಿಲ್ಲ ಸಂಕಷ್ಟ
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಹಿರಂಗವಾಗಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರ ಮತ್ತು ಎಸ್ಐಟಿ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದ ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡನಿಗೆ ಪೆನ್ ಡ್ರೈವ್ ಪ್ರಕರಣ ಉರುಳಾಗುವ ಸಾಧ್ಯತೆ ಇದೆ.
ಲೈಂಗಿಕ ದೌರ್ಜನ್ಯ ಆರೋಪ ಕೇಳಿಬರುತ್ತಿದ್ದಂತೆ ವಿಚಾರಣೆಗೆ ಹಾಜರಾಗದೆ ಕರ್ನಾಟಕ ಬಿಟ್ಟು ಹೊರಟಿದ್ದ ದೇವರಾಜೇಗೌಡರನ್ನು ಹೊಳೆನರಸೀಪುರ ಪೊಲೀಸರು ಆರೆಸ್ಟ್ ಮಾಡಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಜ್ವಲ್ ಕೇಸ್ ಸಂಬಂಧ ತನಿಖೆಗೆ ವಕೀಲ ದೇವರಾಜೇಗೌಡರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಎಸ್ಐಟಿ ಕೇಳುವ ಸಾಧ್ಯತೆ ಇದ್ದು, ಇದಕ್ಕಾಗಿ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಕೇಳಬಹುದು. ತನಿಖೆ ವೇಳೆ ಒಂದು ಮೊಬೈಲ್, ದಾಖಲೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ದೇವರಾಜೇಗೌಡನ ವಿಚಾರಣೆ ಅಗತ್ಯವಿದೆ.
ನವೀನ್ ಗೌಡ, ಪುಟ್ಟರಾಜುಗಾಗಿ ಹುಡುಕಾಟ
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಈಗಾಗಲೇ ಇಬ್ಬರ ಬಂಧನವಾಗಿದ್ದು, ನವೀನ್ ಗೌಡ ಹಾಗೂ ಪುಟ್ಟರಾಜುಗಾಗಿ ಎಸ್ಐಟಿ ಹುಡುಕಾಟ ನಡೆಸಿದೆ.