ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ರದ್ದು ಎನ್ನಲಾದ ಪೆನ್ಡ್ರೈವ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯಿಂದ ಪಾರದರ್ಶಕ ತನಿಖೆ ನಡೆಯಬಹುದು ಎಂದುಕೊಂಡಿದ್ದೆ. ಆದರೆ ಈಗ ಅನ್ನಿಸುತ್ತಿದೆ ಇದು ಎಸ್ಐಟಿ ಅಲ್ಲ, ‘ಸಿದ್ದರಾಮಯ್ಯ ತನಿಖಾ ತಂಡ’ ಮತ್ತು ‘ಡಿಕೆಶಿ ತನಿಖಾ ತಂಡ’ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಪ್ರಕರಣ ಎಸ್ಐಟಿಗೆ ಹೋದ ಮೇಲೆ ಯಾರು ಹೇಗೆಲ್ಲಾ ಕಾಲ್ ಮಾಡಿ ಮಾತನಾಡಿದ್ದಾರೋ ಅವರೆಲ್ಲರ ಮಾತು ಬಹಿರಂಗವಾಗಬೇಕು. ತನಿಖೆ ಪಾರದರ್ಶಕವಾಗಿ ನಡೆಯಬೇಕು” ಎಂದು ಆಗ್ರಹಿಸಿದರು.
“ಪೆನ್ಡ್ರೈವ್ನ ಸೂತ್ರದಾರಿ ಕಾರ್ತಿಕಗೌಡ ಎಲ್ಲಿದ್ದಾನೆ? ಅವನ ಬಂಧನ ಯಾಕೆ ಆಗಿಲ್ಲ? ಎಸ್ಐಟಿ ತನಿಖೆ ಕೇವಲ ಪ್ರಜ್ವಲ್ ಮತ್ತು ರೇವಣ್ಣ ಮೇಲೆ ಅಷ್ಟೇ ಮಾಡುತ್ತಿದ್ದಿರೋ ಎಂಬುದು ನಮಗೆ ಕಾಡುತ್ತಿರುವ ಪ್ರಶ್ನೆ” ಎಂದರು.
“ಮಹಿಳಾ ಆಯೋಗದ ಅಧ್ಯಕ್ಷರ ದೂರಿನ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಎಸ್ಐಟಿ ರಚನೆ ಮಾಡಿದ್ದಾರೆ. ನಾಗರತ್ನಾ ಅವರು ಬರೆದು ಪತ್ರದಲ್ಲಿ ಎಲ್ಲೂ ರೇವಣ್ಣ ಮತ್ತು ಪ್ರಜ್ವಲ್ ಹೆಸರಿಲ್ಲ. ಆದ್ರೆ ಸಿದ್ದರಾಮಯ್ಯ ಅವರೇ ಪ್ರಜ್ವಲ್ ಹೆಸರು ಉಲ್ಲೇಖಿಸಿ ಟ್ವೀಟ್ ಯಾಕೆ ಮಾಡಿದ್ರು” ಎಂದು ಪ್ರಶ್ನಿಸಿದರು.
“ನವೀನಗೌಡ ಎಂಬಾತ 8 ಪಿಎಂಗೆ ಪೆನ್ಡ್ರೈವ್ ಬಹಿರಂಗವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ನಮ್ಮ ಪೂರ್ಣಚಂದ್ರ ತೇಜಸ್ವಿ ಅವರು ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆದರೂ ಚೇತನ್, ನವೀನಗೌಡ, ಪುಟ್ಟರಾಜು ಹಾಗೂ ಕಾರ್ತಿಕ ಮೇಲೆ ಈವರೆಗೂ ಯಾವುದೇ ತನಿಖೆ ಇಲ್ಲ” ಎಂದು ಹರಿಹಾಯ್ದರು.
“ಗನ್ ನಳಿಕೆಯಡಿ ಅತ್ಯಾಚಾರ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಎಸ್ಐಟಿಯಿಂದ ತನಿಖೆಯ ಮಾಹಿತಿ ಹೇಗೆ ಸೋರಿಕೆಯಾಗುತ್ತಿದೆ? ಇದರ ಉದ್ದೇಶವೇನು? ತನಿಖೆಯ ಮಾಹಿತಿಗಳು ಸೋರಿಕೆಯಾಗಬಾದು ಅಲ್ವಾ? ಇಷ್ಟು ಗಂಭೀರ ಪ್ರಕರಣವನ್ನು ಎಸ್ಐಟಿ ಈಷ್ಟು ಲೈಟ್ ಆಗಿ ತೆಗೆದುಕೊಂಡಿದೆಯಾ” ಎಂದು ಪ್ರಶ್ನಿಸಿದರು.
“ಸಂತ್ರಸ್ತೆಯವರನ್ನು ಹುಡುಕುತ್ತಿದ್ದೇವೆ ಎಂದು ಎಸ್ಐಟಿ ಹೇಳುತ್ತಿದೆ. ಯಾವ ಯಾವ ಮಹಿಳೆಯರಿಗೆ ಎಷ್ಟು ದುಡ್ಡುಕೊಟ್ಟು ದೂರು ದಾಖಲಿಸುತ್ತಿದ್ದಾರೆ ಎಂಬುದು ಕಂಡುಹಿಡಿಯಿರಿ? ನೀವು ಹೇಗೆ ತನಿಖೆ ನಡೆಸುತ್ತಿದ್ದೀರಿ? ಗೃಹ ಸಚಿವ ಪರಮೇಶ್ವರ್ ಅವರೇ ಏನು ಮಾಡುತ್ತಿದ್ದೀರಿ?” ಎಂದು ಕುಮಾರಸ್ವಾಮಿ ಕೇಳಿದರು.
“ರಾಹುಲ್ ಗಾಂಧಿ ಹೇಳುತ್ತಾರೆ, 16 ವರ್ಷದೊಳಗಿನ ಬಾಲಕಿಯರು ಈ ವಿಡಿಯೊದಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಯಾವ ಆಧಾರದ ಮೇಲೆ ರಾಹುಲ್ ಗಾಂಧಿ ಹೇಳಿಕೆ ಕೊಟ್ಟರು? ತನಿಖೆಗೆ ಕರೆದ್ರಾ? ನಿಜ ಆದ್ರೆ ಆರೋಪಿಗಳನ್ನು ಜೀವನಪರ್ಯಂತ ಜೈಲಿಗೆ ಕಳುಹಿಸಿಬಹುದು. ಎಸ್ಐಟಿ ಮುಖ್ಯಸ್ಥ ಬಿ ಕೆ ಸಿಂಗ್ ಏನು ಮಾಡುತ್ತಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಈ ಪ್ರಕರಣದಲ್ಲಿ ಎಳೆದುತಂದಿದ್ದು ನೋಡಿದರೆ ಕಾಂಗ್ರೆಸ್ ಗ್ಯಾರಂಟಿಗಳು ಜನರ ಮೇಲೆ ಪರಿಣಾಮ ಬೀರಿಲ್ಲ. ಪೆನ್ಡ್ರೈವ್ನಲ್ಲಿ ಮಹಿಳೆಯರ ಫೋಟೋ ಹಾಕಿ ಕಾಂಗ್ರೆಸ್ನವರು ಏನು ನೆರವು ನೀಡ್ತೀರಿ?” ಎಂದರು.
“ಪ್ರಜ್ವಲ್ ನನ್ನ ಮಗ ಎಂದು ಹೇಳಿದ್ದೇನೆ. ನನಗೆ ಈ ಪ್ರಕರಣದಲ್ಲಿ ಗೊತ್ತಿರಲಿಲ್ಲ. ಯಾರ ಯಾರ ಮಹಿಳೆಯರ ಫೋಟೋ ಬಿಡಬೇಕು ಎಂದು ಸುರ್ಜೇವಾಲಾ ಟಿಕ್ ಮಾಡಿದ್ದಾರೆ. ಅದರಂತೆ ಅದು ಬಹಿರಂಗವಾಗಿದೆ. ಈಗ ನೀವು ಪೆನ್ಡ್ರೈವ್ ಬಿಟ್ಟ ಮೇಲೆ ನನಗೆ ಅರಿವಾಗಿದೆ. ನಮ್ಮ ಕಾರ್ಯಕರ್ತರು ಪ್ರಜ್ವಲ್ ಬಗ್ಗೆ ಅಸಮಾಧಾನ ಹೇಳಿದ್ದರು. ಹಾಗಾಗಿ ನಾನು ಅಭ್ಯರ್ಥಿ ಬದಲಿಸಬೇಕು ಎಂದಿದ್ದು ನಿಜ” ಎಂದು ಹೇಳಿದರು.
“ರಾಜ್ಯದಲ್ಲಿ ಇಂತಹ ಕೆಟ್ಟ ಬೆಳವಣಿಗೆ ನೋವು ತಂದಿದೆ. ನಮ್ಮ ಸಂಬಂಧಿಕರಿರಲಿ. ಈ ಪ್ರಕರಣದಲ್ಲಿ ಯಾರೇ ಭಾಗಿ ಇರಲಿ ನಾನು ರಕ್ಷಣೆಗೆ ಬರಲ್ಲ. ಈ ನೆಲದ ಕಾನೂನಿನಡಿ ಶಿಕ್ಷೆಯಾಗಲಿ. ಯಾವ ವ್ಯಕ್ತಿಯನ್ನು ನಾನು ರಕ್ಷಿಸಲು ಹೋಗುವುದಿಲ್ಲ” ಎಂದು ಕುಮಾರಸ್ವಾಮಿ ಹೇಳಿದರು.