ನಮ್ಮಂತಹ ರಾಜಕಾರಣಿಗಳು ನಿಮ್ಮನ್ನು (ಪೊಲೀಸರನ್ನು) ರಾಜಕೀಯವಾಗಿ ಬಳಸಿಕೊಳ್ಳಬಾರದು. ನಿಮ್ಮ ಕರ್ತವ್ಯ, ನಿಮ್ಮ ಸಮವಸ್ತ್ರ, ನಿಮ್ಮ ಘನತೆಗೆ ಯಾವತ್ತೂ ಕಳಂಕ ಬರಬಾರದು. ನಾವು ಇವತ್ತು ಬರುತ್ತೇವೆ, ನಾಳೆ ಹೋಗುತ್ತೇವೆ. ಆದರೆ ನಿಮ್ಮ ಖಾಕಿ ಹಾಗೂ ಅದರ ಖದರ್, ಶಿಸ್ತು, ಪೊಲೀಸರಿಗೆ ಇರುವ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಪುಲಕೇಶಿನಗರದಲ್ಲಿ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಜನ ನಿಮ್ಮ ಬಳಿ ನ್ಯಾಯ ಪಡೆಯಲು ಬರುತ್ತಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ನಿಮ್ಮಿಂದ ಯಶಸ್ವಿಯಾಗಲಿ. ಮನುಷ್ಯಲ್ಲಿರುವ ಅತ್ಯಂತ ಶ್ರೇಷ್ಠವಾದ ಗುಣ ನಂಬಿಕೆ. ಹೀಗಾಗಿ ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡಿ” ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು.
“ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸಚಿವ ಸಂಪುಟ ಅತ್ಯಂತ ಅನುಭವಿ ಸಚಿವರ ಸಂಪುಟ. ನಮ್ಮ ಸಂಪುಟದಲ್ಲಿ ನಾಲ್ವರು ಮಾಜಿ ಗೃಹ ಸಚಿವರು ಇದ್ದಾರೆ. ಪರಮೇಶ್ವರ್ ಅವರು 2 ಬಾರಿ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಹಾಗೂ ರಾಮಲಿಂಗಾ ರೆಡ್ಡಿ ಅವರಿಗೂ ಗೃಹ ಇಲಾಖೆಯ ಜವಾಬ್ದಾರಿ ಹೊತ್ತಿರುವ ಅನುಭವವಿದೆ. ಈ ಇಲಾಖೆಗೆ ಇವರೆಲ್ಲರೂ ಹೊಸ ರೂಪ ನೀಡಿದ್ದಾರೆ. ಹೀಗಾಗಿ ಪರಮೇಶ್ವರ್ ಅವರು ನಿಮಗೆ ನೀಡಿರುವ ಹಿತವಚನಗಳಂತೆ ಕೆಲಸ ಮಾಡಿ” ಎಂದು ತಿಳಿಸಿದರು.
“ಪರಮೇಶ್ವರ್ ಅವರು ಹೇಳಿದಂತೆ ಕರ್ನಾಟಕ ರಾಜ್ಯದ ಪೊಲೀಸರಿಗೆ ದೇಶದಲ್ಲಿ ತಮ್ಮದೇ ಆದ ಗೌರವವಿದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಇಂದು ಸುವರ್ಣ ದಿನ. ಮುಖ್ಯಮಂತ್ರಿಗಳು ಇಡೀ ದಿನ ನಿಮಗೆ ಸಮಯ ನೀಡಿದ್ದಾರೆ. ರಾಜ್ಯದಲ್ಲೇ ಅತ್ಯುತ್ತಮ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಪರಮೇಶ್ವರ್ ಅವರಿಗೆ ಅಭಿನಂದಿಸುತ್ತೇನೆ. ನಮ್ಮ ಸರ್ಕಾರ ನಿಮ್ಮ ಜತೆ ಸದಾ ಇರುತ್ತದೆ. ಹೊಸವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ಉತ್ತಮವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ” ಎಂದರು.
“ಬಂಗಾರಪ್ಪನವರ ಕಾಲದಲ್ಲಿ ನಾನು ಬಂಧಿಖಾನೆ ಹಾಗೂ ಹೋಂಗಾರ್ಡ್ ಇಲಾಖೆಯ ಜವಾಬ್ದಾರಿ ಹೊತ್ತಿದ್ದೆ. ಆಗಿನ ಕಾಲಕ್ಕೂ ಈಗಲೂ ಅನೇಕ ತಂತ್ರಜ್ಞಾನಗಳು ಆಧುನೀಕರಣಗೊಂಡಿವೆ. ಅಪರಾಧಗಳನ್ನು ಬಗೆಹರಿಸಲು ಸೈಬರ್ ಕ್ರೈಂ ಹಾಗೂ ಅಂತಾರ್ಜಾಲದ ಮೂಲಕ ಪತ್ತೆ ಮಾಡುವ ಅವಕಾಶವಿದೆ. ಹೀಗಾಗಿ ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು” ಎಂದು ಹೇಳಿದರು.