ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ಆಗ್ರಹ ದೇಶಾದ್ಯಂತ ಕೇಳಿ ಬಂದಿರುವ ಬೆನ್ನಲ್ಲೇ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದರು.
ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಮೂರು ಸೇನೆಗಳ ಮುಖ್ಯಸ್ಥರ ಭಾಗಿಯಾಗಿದ್ದಾರೆ. ದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರೋ ಪ್ರಧಾನಿಗಳ ಅಧಿಕೃತ ನಿವಾಸದಲ್ಲಿಈ ಮಹತ್ವದ ಸಭೆ ನಡೆದಿದೆ.
ಬುಧವಾರ ನಡೆಯಲಿರುವ ಕೇಂದ್ರ ಸರ್ಕಾರದ ಭದ್ರತಾ ಸಚಿವ ಸಂಪುಟ ಸಭೆಯ ಪೂರ್ವಭಾವಿ ಸಭೆ ಇದಾಗಿದ್ದು, ಈ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಿದೆ? ಭಾರತದ ಮುಂದಿನ ನಡೆಯೇನು? ಎಂಬ ಬಗ್ಗೆ ಅಧಿಕಾರಿಗಳಾಗಲಿ, ಪ್ರಧಾನಿ, ಸಚಿವರಾಗಲಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಭದ್ರತಾ ಸಂಪುಟ ಸಮಿತಿಯ ಸಭೆಯನ್ನು ಬುಧವಾರ ಬೆಳಗ್ಗೆ 11 ಗಂಟೆ ನಡೆಸಲಿದೆ. ನಂತರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ, ಕೇಂದ್ರ ಸಂಪುಟ ಸಮಿತಿ ಸಭೆಗಳು ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿವೆ. ಈ ಮೂರು ಸಭೆ ಮುಕ್ತಾಯಗೊಳ್ಳುವಷ್ಟರಲ್ಲೇ ಭಾರತ ಸರ್ಕಾರದಿಂದ ಅಂತಿಮ ತೀರ್ಮಾನವೊಂದು ಹೊರಬೀಳಲಿದೆ.