ಗಾಂಧಿ ಕುಟುಂಬವನ್ನು ರಾಜಕೀಯವಾಗಿ ಎದುರಿಸಲಾಗದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಳ್ಳು ಖಾಸಗೀ ದೂರನ್ನು ದಾಖಲಿಸಿ ತನಿಖಾ ಸಂಸ್ಥೆಗಳ ದುರಪಯೋಗ ಮಾಡಿಕೊಂಡಿರುವುದಕ್ಕೆ ದೆಹಲಿ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ಕುಟುಕಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹಾಗೂ ಇತರ ಐದು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ್ದು ಮಾತ್ರವಲ್ಲ, ಚಾರ್ಜ್ ಶಿಟ್ ಅನ್ನೇ ಸಂಪೂರ್ಣವಾಗಿ ತಿರಸ್ಕರಿಸಿದೆ” ಎಂದಿದ್ದಾರೆ.
“ಗಾಂಧಿ ಕುಟುಂಬದ ಮೇಲೆ “ಮೋ-ಶಾ” ಜೋಡಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮಾಡಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯವೇ ತಕ್ಕ ಉತ್ತರ ಕೊಟ್ಟಿದೆ. ಬೆದರಿಕೆ, ಕಿರುಕುಳ, ಸೇಡಿನ ಅತ್ಯಂತ ಹೀನ ರಾಜಕಾರಣ ಮಾಡಿದ ಮೋ-ಶಾ ಜೋಡಿಗೆ ಇದೇ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಒಂದೊಂದು ಹೇಳಿಕೆಗಳು ಕಪಾಳಮೋಕ್ಷವಾಗಿದೆ” ಎಂದಿದ್ದಾರೆ.
“ಸ್ವತಂತ್ರ ಚಳುವಳಿಯಲ್ಲಿ ಮಹತ್ತರ ಪಾತ್ರವಹಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ಆಧಾರ ರಹಿತ ಆರೋಪ ಮಾಡಿರುವ ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿ ಸರ್ಕಾರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸೇಡಿನ ರಾಜಕೀಯವನ್ನು ಮುಂದುವರೆಸುತ್ತಲೇ ಬರುತ್ತಿರುವ ಮೋ-ಶಾಗಳಿಗೆ ನ್ಯಾಯಲಯ ಪಾಠ ಕಲಿಸಿದೆ, ಮುಂದೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.


