ವಿಶೇಷ ಚೇತನರಿಗಾಗಿ ಎಡಿಐಪಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಂಗಳವಾರ ನಡೆದ ಸಂಸತ್ ಸದನದ ಪ್ರಶ್ನೋತ್ತರ ವೇಳೆಯಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಿಗೆ ಮಾಹಿತಿ ಕೇಳಿದರು ಹಾಗೂ ಸಂಸದರ ಪ್ರಶ್ನೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ.ವೀರೇಂದ್ರ ಕುಮಾರ್ ಉತ್ತರ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸಹಾಯಧನದ ಮೊತ್ತದಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿದೆಯೇ? ವೆಚ್ಚಗಳು ಏರಿಕೆಯಾಗುತ್ತಿರುವ ಬಗ್ಗೆ ಕಾರಣವೇನು ಎಂಬ ಕುರಿತು ಸಂಸದರು ಮಾಹಿತಿ ಕೇಳಿದ್ದಾರೆ. ಹಾಗೆಯೇ, ಉದ್ಯೋಗ ಸಂಬಂಧವಾಗಿ, ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ಚೇತನರಿಗೆ ನೀಡಲಾಗಿರುವ ಮೀಸಲಾತಿಯ ಪ್ರಸ್ತುತ ಸ್ಥಿತಿ. ವಿಶೇಷವಾಗಿ, ಮಂಜೂರಾದ ಒಟ್ಟು ಹುದ್ದೆಗಳ ಸಂಖ್ಯೆ, ಭರ್ತಿಯಾದ ಹುದ್ದೆಗಳ ಸಂಖ್ಯೆ ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ವಿವರಗಳು ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕೇಳಿದ್ದರು.
ಸಂಸದರ ಪ್ರಶ್ನೆಗೆ ಕೇಂದ್ರ ಸರ್ಕಾರದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ.ವೀರೇಂದ್ರ ಕುಮಾರ್ ಉತ್ತರ ನೀಡಿದ್ದು ಸರ್ಕಾರವು ಅಂಗವಿಕಲರ ಉದ್ಯೋಗಾವಕಾಶ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. PMKVY ಮುಂತಾದ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ವಿಸ್ತರಿಸಲಾಗಿದೆ. ಉದ್ಯಮಶೀಲತೆಗೆ ಕಡಿಮೆ ಬಡ್ಡಿದರ ಸಾಲ ಸಹಾಯ ಒದಗಿಸಲಾಗುತ್ತಿದೆ. ‘ದಿವ್ಯ ಕಲಾ ಮೇಳಾ’ಗಳ ಮೂಲಕ ಉತ್ಪನ್ನ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಾಗಿದೆ. ಶಿಕ್ಷಣದಲ್ಲಿ ಮೀಸಲಾತಿ 3%ರಿಂದ 5%ಕ್ಕೆ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ 3%ರಿಂದ 4%ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮಗಳು ಅಂಗವಿಕಲರ ಸ್ವಾವಲಂಬನೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತವೆ ಎಂದು ತಿಳಿಸಿದ್ದಾರೆ.


