Homeಕರ್ನಾಟಕಮುಂಗಾರು ಅಧಿವೇಶನ ಆರಂಭ; ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮುಂಗಾರು ಅಧಿವೇಶನ ಆರಂಭ; ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಮಗ ಹಗರಣ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಎಸ್​ಸಿ ಎಸ್​​ಟಿ ಅನುದಾನದ ಹಣ ಬಳಸಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆ ಸದನ ಆರಂಭಕ್ಕೂ ಮುನ್ನವೇ ಪ್ರತಿಪಕ್ಷ ಬಿಜೆಪಿಯು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾ ನಿರತ ಬಿಜೆಪಿ ನಾಯಕರು ಆಗ್ರಹಿಸಿದರು. ರಾಜ್ಯ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಂತು ಆಕ್ರೋಶ ಹೊರಹಾಕಿದರು.

ಸಾವಿರಾರು ಕೋಟಿ ಮೊತ್ತದ ಮುಡಾ ಹಗರಣ ಮತ್ತು ದಲಿತರ ಹಣವನ್ನು ಲೂಟಿ ಮಾಡಿದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಉತ್ತರ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

“ಮುಖ್ಯಮಂತ್ರಿಗಳಿಗೆ ನಿಜವಾಗಿ ತಾಕತ್ತಿದ್ದರೆ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಮುಖ್ಯಮಂತ್ರಿಗಳ ಕುಟುಂಬವೇ ಪಾಲುದಾರರಿದ್ದು, ಸಾವಿರಾರು ಕೋಟಿ ಬೆಲೆಬಾಳುವ ನಿವೇಶನಗಳಿಗೆ ಸಂಬಂಧಿಸಿ ಮೈಸೂರು ಮುಡಾ ಹಗರಣ ನಡೆದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು” ಎಂದು ಒತ್ತಾಯಿಸಿದರು.

ಆರ್. ಅಶೋಕ್ ಮಾತನಾಡಿ, “ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧಿಕಾರಿಯೂ ದಲಿತರೇ ಆಗಿದ್ದಾರೆ. ಕಾಂಗ್ರೆಸ್ಸಿಗರಿಗೆ ದಲಿತರ ವೋಟ್ ಬೇಕು; ದಲಿತರ ನೋಟು ಕೂಡ ಬೇಕು; ದಲಿತರ ಸಾವು ಬೇಕು. ಇದು ಕಾಂಗ್ರೆಸ್ ನೀತಿ” ಎಂದು ಟೀಕಿಸಿದರು.

“ಈ ಸರಕಾರವು ನೈತಿಕವಾಗಿ ಸತ್ತು ಹೋಗಿದೆ. ಅಧಿಕಾರದಲ್ಲಿ ಉಳಿಯುವ ಯೋಗ್ಯತೆ ಕಳಕೊಂಡಿದೆ. ಮಾನ ಮರ್ಯಾದೆ ಇದ್ದರೆ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕಿತ್ತು. ಇವತ್ತು ಯಾವ ಮುಖ ಇಟ್ಟುಕೊಂಡು ವಿಧಾನಸೌಧಕ್ಕೆ ಬರುತ್ತಾರೋ ಅರ್ಥ ಆಗುತ್ತಿಲ್ಲ” ಎಂದರು.

ಸಿಎಂ ಉತ್ತರ

ಇದೇ ವೇಳೆ ಸಿಎಂ ಸಿದ್ದರಾಮಯ್ಯಗೂ ಬಿಜೆಪಿಯ ಪ್ರತಿಭಟನೆ ಬಿಸಿ ತಟ್ಟಿತ್ತು. ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾಗಲೇ ಸಿಎಂ ಕಾರು ಆಗಮಿಸಿತ್ತು. ಈ ವೇಳೆ ಕೆಲಕಾಲ ಗೊಂದಲ ಉಂಟಾಗಿತ್ತು.

ಇದೇ ವೇಳೆ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಮುಡಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಸದನದಲ್ಲಿ ಉತ್ತರಿಸುವೆ” ಎಂದು ಹೇಳಿದರು.

“ಬಿಜೆಪಿ ನಾಯಕರು ಸದನದಲ್ಲಿ ಚರ್ಚೆ ಮಾಡಲು ನಿಲುವಳಿ ನೀಡಿದ್ದಾರೆ. ಅದಕ್ಕೆ ಸದನದ ಒಳಗಡೆಯೇ ಉತ್ತರ ಕೊಡುತ್ತೇನೆ. ಅವರು ಪ್ರತಿಭಟನೆ ಮಾಡಲಿ” ಎಂದರು.

ಬಸನಗೌಡ ದದ್ದಲ್ ಪ್ರತ್ಯಕ್ಷ

ಭಾನುವಾರ ಆಂಧ್ರಪ್ರದೇಶದತ್ತ ತೆರಳಿದ್ದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್, ಇವತ್ತು ವಿಧಾನಸೌಧದಲ್ಲಿ ಪ್ರತ್ಯಕ್ಷರಾದರು. ಕಲಾಪದಲ್ಲಿ ಭಾಗಿಯಾಗಲು ವಿಧಾನಸೌಧಕ್ಕೆ ಬಂದರು. ಸದನದಲ್ಲೇ ಮಾತನಾಡುತ್ತೇನೆ. ನನಗೆ ಯಾವ ನೋಟಿಸ್ ಬಂದಿಲ್ಲ ಎಂದರು. ಅಧಿವೇಶನ ಆರಂಭವಿದ್ದಾಗ ಶಾಸಕರನ್ನು ಬಂಧಿಸಲು ಸಭಾಧ್ಯಕ್ಷರ ಅನುಮತಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದದ್ದಲ್‌ ಅಧಿವೇಶನಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments