ಕರ್ನಾಟಕ ಸರ್ಕಾರದಲ್ಲಿ ಕೈಗಾರಿಕೆ, ಜವಳಿ, ಕಬ್ಬು ಅಭಿವೃದ್ಧಿ, ಮತ್ತು ಸಕ್ಕರೆ ನಿರ್ದೇಶನಾಲಯದ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ ಸವಾಲನ್ನು ಸ್ವೀಕರಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಭಾಧ್ಯಕ್ಷ ಯು.ಟಿ ಖಾದರ್ ಅವರ ಕೊಠಡಿಗೆ ತೆರಳಿ ಶುಕ್ರವಾರ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್ ಈ ರಾಜೀನಾಮೆಯಲ್ಲಿ ಅಂಗೀಕರಿಸಿದರೆ ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಲಿದೆ.
ಕಳೆದೆರಡು ದಿನಗಳ ಹಿಂದೆ ಮಾಧ್ಯಮದೊಂದಿಗೆ ಮಾತನಾಡಿದ್ದ ಯತ್ನಾಳ್ ಶಿವಾನಂದ ಪಾಟೀಲ್ ವಿರುದ್ದ ವಾಗ್ದಾಳಿ ನಡೆಸಿದ್ದರು. “ಶಿವಾನಂದ್ ಪಾಟೀಲ್ ಅವರಪ್ಪನಿಗೆ ಹುಟ್ಟಿದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ, ಅವರ ಮನೆ ಹೆಸರು ಪಾಟೀಲ್ ಅಲ್ಲ ಹಚಡದ ಎಂದು, ನಿಮ್ಮಪ್ಪ ನೀವು ಸೇರಿ ನಿಮ್ಮ ಅಡ್ಡ ಹೆಸರು ಬದಲಾಯಿಸಿಕೊಂಡಿದ್ದೀರಿ, ರಾಜಕಾರಣಕ್ಕಾಗಿ ಪಾಟೀಲ್ ಎಂದು ಮಾಡಿಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.
ಶಿವಾನಂದ ಪಾಟೀಲ್ ಹಾಗೂ ವಿಜಯಾನಂದ ಕಾಶಪ್ಪನವರ ಒಂದು ವಾರದಲ್ಲಿ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಸಭಾಪತಿಯವರಿಂದ ರಾಜೀನಾಮೆ ಅಂಗೀಕಾರ ಮಾಡಿಕೊಂಡು ಬನ್ನಿ, ನೀವು ಪಕ್ಷೇತರರಾಗಿ ಬನ್ನಿ ನಾನು ಬರುವೆ, ಬಾಗೇವಾಡಿಯಲ್ಲೇ ಬಂದು ಮಣ್ಣು ಕೊಡುತ್ತೇನೆಂದು ಹೇಳಿದ್ದರು. ಇದೀಗ ಈ ಸವಾಲನ್ನು ಸ್ವೀಕರಿಸಿರುವ ಶಿವಾನಂದ ಪಾಟೀಲ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಈಗ ಶಿವಾನಂದ ಪಾಟೀಲ್ ಅವರ ಸವಾಲನ್ನು ಸ್ವೀಕರಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಕಾದು ನೋಡಬೇಕು.