Homeಕರ್ನಾಟಕಅಮೆಜಾನ್ ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್

ಅಮೆಜಾನ್ ಕಂಪನಿಯ ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಸಚಿವ ಎಂ ಬಿ ಪಾಟೀಲ್

ಅಮೆಜಾನ್ ಕಂಪನಿಯು ಇಲ್ಲಿನ ಯಲಹಂಕ ಸಮೀಪದ ವಿನಾಯಕ ನಗರದಲ್ಲಿ ನಿರ್ಮಿಸಿರುವ, 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಇದು ರಾಜ್ಯದಲ್ಲಿ ಅಮೆಜಾನ್ ಕಂಪನಿಯ 10ನೆಯ ಕಾರ್ಪೊರೇಟ್ ಕಚೇರಿಯಾಗಿದೆ. ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಸಿಗಲಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ’” ಎಂದು ಹೇಳಿದರು.

“ರಾಜ್ಯವು 3.80 ಲಕ್ಷ ರೂ.ಗಳಿಗಿಂತ ಹೆಚ್ಚು ತಲಾ ಆದಾಯ ಹೊಂದಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿ.ಎಸ್.ಟಿ ಪಾವತಿ ಮೂಲಕ ದ್ವಿತೀಯ ಸ್ಥಾನದಲ್ಲಿದ್ದೇವೆ. ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳ ಒಳಗೆ ಕಾಣಿಸಿಕೊಂಡಿರುವ ದೇಶದ ಏಕೈಕ ನಗರ ಬೆಂಗಳೂರಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 14.6 ಮಿಲಿಯನ್ ಚದರ ಅಡಿ ಜಾಗವನ್ನು ಕೈಗಾರಿಕಾ ವಹಿವಾಟು ಉದ್ದೇಶಕ್ಕೆ ಭೋಗ್ಯಕ್ಕೆ ನೀಡಿದ್ದು, ನಾವು ಪ್ರಥಮ ಸ್ಥಾನದಲ್ಲಿದ್ದೇವೆ” ಎಂದು ವಿವರಿಸಿದರು.

“ದೇಶದಲ್ಲಿ ಒಟ್ಟು 900 ಜಿಸಿಸಿ ಕೇಂದ್ರಗಳಿದ್ದು, ಇವುಗಳ ಪೈಕಿ ಶೇ.35ರಷ್ಟು ಕರ್ನಾಟಕದಲ್ಲೇ ಇವೆ. ಇ-ಕಾಮರ್ಸ್ ವಹಿವಾಟಿಗೆ ಬೇಕಾದ ಮೂಲಸೌಕರ್ಯದಲ್ಲೂ ರಾಜ್ಯವು ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ 42.48 ಲಕ್ಷ ಟನ್ ದಾಸ್ತಾನು ಸಂಗ್ರಹಿಸುವಷ್ಟು ಉಗ್ರಾಣಗಳು ಮತ್ತು 233 ಶೀತಲಗೃಹಗಳಿವೆ. ಇದಕ್ಕೆ ತಕ್ಕಂತೆ ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ” ಎಂದು ತಿಳಿಸಿದರು.

“ರಾಜ್ಯವು ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತೆ ಸರಕು ಸಾಗಣೆಗೆ ಪ್ರತ್ಯೇಕ ರೈಲು ಕಾರಿಡಾರ್, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕುಗಳ ಅಭಿವೃದ್ಧಿ, ಡ್ರೈಪೋರ್ಟ್ ನಿರ್ಮಾಣ ಮತ್ತು ಟ್ರಕ್ ಟರ್ಮಿನಲ್ಲುಗಳ ನಿರ್ಮಾಣವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಅಮೆಜಾನ್ ಮತ್ತು ಜಾಗತಿಕ ಮಟ್ಟದ ಇತರ ಕಂಪನಿಗಳು ರಾಜ್ಯದಲ್ಲಿರುವ ಈ ಕೈಗಾರಿಕಾಸ್ನೇಹಿ ಕಾರ್ಯಪರಿಸರದ ಲಾಭವನ್ನು ಪಡೆದುಕೊಳ್ಳಲು ನಮ್ಮಲ್ಲಿ ಹೆಚ್ಚುಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಇಲ್ಲೇ ಉತ್ಪಾದನೆ ಮಾಡಿ, ಜಗತ್ತಿನ ಉಳಿದ ಭಾಗಗಳಿಗೆ ಇಲ್ಲಿಂದ ರಫ್ತು ಮಾಡಬೇಕು” ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಅಮೆಜಾನ್ ಕಂಪನಿಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಮತ್ತೋರ್ವ ಉಪಾಧ್ಯಕ್ಷ ಸಮೀರ್ ಕುಮಾರ್, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments