ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯೂ ನಡೆಯಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವು ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯವೂ ಕಂಡು ಬರುತ್ತಿದೆ. ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕು. ಅಮೂಲ್ಯವಾದ ಜೀವಹಾನಿಯೂ ತಪ್ಪಬೇಕು. ಮಾನವರ ಜೀವ ಉಳಿಸುವ ಕೆಲಸವೂ ಆಗಬೇಕಿದೆ.
ಇದು ನಿರ್ಧಾರವಲ್ಲ, ಒಂದು ಚಿಂತನೆ ಮಾತ್ರ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುವ ಅಗತ್ಯವಿದೆ. ಜೊತೆಗೆ ತತ್ಸಂಬಂಧವಾದ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿದ್ದು, ತಜ್ಞರು, ಕಾನೂನು ಪಂಡಿತರೊಂದಿಗೆ ಚರ್ಚಿಸಿ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಾಗುತ್ತದೆ ಎಂದರು.
ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು ಎಂದ ಅವರು, ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತದೋ ಅಲ್ಲಿ ಒಂದೆರೆಡು ವರ್ಷ ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಇಂತಹ ಆಲೋಚನೆ, ಚಿಂತನೆ ಇದೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುವ ಅಗತ್ಯವಿದೆ ಎಂದರು.
ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಬರಲು ಇಚ್ಛಿಸುವ ಅರಣ್ಯವಾಸಿಗಳ ಸ್ಥಳಾಂತರದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಆ ರೀತಿ ಸ್ವಯಂ ಪ್ರೇರಣೆಯಿಂದ ಹೊರಬರುವವರ ಪಟ್ಟಿ ಸಿದ್ಧಪಡಿಸಲು ತಿಳಿಸಿದ್ದು, ಪಟ್ಟಿ ಸಿದ್ಧವಾದ ಬಳಿಕ ಎಷ್ಟು ಹಣದ ಅಗತ್ಯ ಬರುತ್ತದೆ. ಆಯವ್ಯಯದಲ್ಲಿ ಎಷ್ಟು ಹಣ ನೀಡಲಾಗಿದೆ. ಎಷ್ಟು ಕೊರತೆ ಆಗುತ್ತದೆ ಎಂಬ ಬಗ್ಗೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಈ ರೀತಿ ಅರಣ್ಯದಲ್ಲಿರುವ ವಸತಿಪ್ರದೇಶಗಳನ್ನು ಸ್ಥಳಾಂತರಿಸುವುದರಿಂದ ವನ್ಯಜೀವಿಗಳ ಆವಾಸ್ಥಾನ ವಿಸ್ತರಣೆ ಆಗುತ್ತದೆ. ಮೂಲಭೂತ ಸೌಕರ್ಯ ಇಲ್ಲದೆ ಬದುಕುತ್ತಿರುವ ಅರಣ್ಯವಾಸಿಗಳನ್ನೂ ಸಮಾಜದ ಮುಖ್ಯವಾಹಿನಿಗೆ ತಂದಂತೆ ಆಗುತ್ತದೆ ಎಂದು ಈಶ್ವರ ಖಂಡ್ರೆ ವಿವರಿಸಿದರು.
ಆನೆ ದಾಳಿಗೆ ಕಾಫಿ ಬೆಳೆಗಾರ ಸಾವು: ಈಶ್ವರ ಖಂಡ್ರೆ ಸಂತಾಪ
ಇಂದು ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಮಾನವ- ಆನೆ ಸಂಘರ್ಷ ತಡೆಯಲು ಸರ್ಕಾರ ಮತ್ತು ಇಲಾಖೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಜೀವಕ್ಕೆ ಬೆಲೆ ನೀಡಲು ಸಾಧ್ಯವೆ ಇಲ್ಲ. ಈ ನೋವಿನ ಸಂದರ್ಭದಲ್ಲಿ ನೊಂದ ಕುಟುಂಬದ ಜೊತೆ ಸರ್ಕಾರ ಇದೆ ಎಂದು ಹೇಳಿದರು.
ಆನೆಗಳ ಸಮಸ್ಯೆ ಪರಿಹರಿಸಲು ಆನೆ ಧಾಮ ಮಾಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವಲ್ಲಿ ತೊಡಕಾಗಿದೆ. ಈ ಸಮಸ್ಯೆ ಪರಿಹರಿಸಿಕೊಂಡು ಆನೆ ಧಾಮ ನಿರ್ಮಾಣದ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.


