ಹರ ಹರ ಮಹಾದೇವ್ ಘೋಷಣೆಗಳ ಮಧ್ಯೆ ಪ್ರಯಾಗ್ರಾಜ್ನಲ್ಲಿ 45 ದಿನಗಳ ಕಾಲ ಜರುಗಿದ ಮಹಾ ಕುಂಭಮೇಳಕ್ಕೆ ಇಂದು ಮಹಾಶಿವರಾತ್ರಿಯ ತೆರೆ ಬೀಳಲಿದೆ.
ದೇಶದ ಕೋಟ್ಯಂತರ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಮುಕ್ತಾಯದ ದಿನವೂ ಲಕ್ಷಾಂತರ ಜನ ಸ್ನಾನ ಮಾಡಲಿದ್ದಾರೆ.
144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳವು 2025ರ ಜನವರಿ 13 ರಂದು ಆರಂಭವಾಯಿತು. ಒಟ್ಟು 45 ದಿನಗಳಲ್ಲಿ ನಾಗಾ ಸಾಧುಗಳ ಭವ್ಯ ಮೆರವಣಿಗೆಗೆಳು, ಪೂಜೆ ಹವನಗಳು, ಕೋಟಿ-ಕೋಟಿ ಭಕ್ತರ ದಂಡು, ಮೂರು ಅಮೃತ ಸ್ನಾನಗಳನ್ನು ಪ್ರಯಾಗ್ರಾಜ್ ಕಂಡಿದೆ. ಸುಮಾರು 64 ಕೋಟಿ ಭಕ್ತರು ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಂಕಿ- ಅಂಶಗಳು ಹೇಳುತ್ತಿವೆ.
ಇಂದು ಮಹಾಕುಂಭದ ಕೊನೆಯ ಪುಣ್ಯಸ್ನಾನಕ್ಕಾಗಿ ಮಧ್ಯರಾತ್ರಿಯಿಂದಲೇ ತ್ರಿವೇಣಿ ಸಂಗಮದ ಬಳಿ ಹೆಚ್ಚಿನ ಭಕ್ತರು ಸೇರಲು ಆರಂಭಿಸಿದ್ದು, ಕೆಲವರು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಲು ತಾಳ್ಮೆಯಿಂದ ಕಾಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ನಿಗದಿತ ಸಮಯಕ್ಕಿಂತ ಮುಂಚೆಯೇ ಸ್ನಾನದ ವಿಧಿಗಳನ್ನು ನೆರವೇರಿಸಿಕೊಂಡರು.
ಮಹಾಶಿವರಾತ್ರಿಯು ಶಿವ ಮತ್ತು ಪಾರ್ವತಿ ದೇವಿಯರ ದೈವಿಕ ವಿವಾಹವನ್ನು ಸ್ಮರಿಸುವ ಹಿಂದೂ ಹಬ್ಬ. ಮತ್ತು ಕುಂಭಮೇಳದ ಸಂದರ್ಭದಲ್ಲಿ ಈ ಬಾರಿಯ ಶಿವರಾತ್ರಿ ವಿಶೇಷ ಮಹತ್ವವನ್ನು ಹೊಂದಿದೆ. ಅಲ್ಲದೇ ಹಿಂದೂ ಪುರಾಣಗಳ ಪ್ರಕಾರ, ದೇವತೆಗಳು ಮತ್ತು ಅಸುರರ ನಡುವೆ ಅಮರತ್ವವನ್ನು ನೀಡುವ ಅಮೃತಕ್ಕಾಗಿ ಸಮುದ್ರ ಮಂಥನ ನಡೆಯುತ್ತದೆ.
ಜನವರಿ 13 ರಂದು ಪುಷ್ಯ ಹುಣ್ಣಿಮೆ, ಜನವರಿ 14 ರಂದು ಮಕರ ಸಂಕ್ರಾಂತಿ, ಜನವರಿ 29 ರಂದು ಮೌನಿ ಅಮವಾಸ್ಯೆ, ಫೆಬ್ರವರಿ 3 ರಂದು ವಸಂತ ಪಂಚಮಿ, ಫೆಬ್ರವರಿ 12 ರಂದು ಮಾಘಿ ಪೂರ್ಣಿಮೆ ಮತ್ತು ಫೆಬ್ರವರಿ 26 ರಂದು ಮಹಾಶಿವರಾತ್ರಿ ಜತೆಗೆ ಮೂರು ‘ಅಮೃತ ಸ್ನಾನ’ ಮಾಡಲಾಗಿದೆ.
ಕೊನೆಯ ದಿನವಾದ ಇಂದು ಅಧಿಕ ಭಕ್ತರು ಆಗಮಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮವನ್ನು ಅಲ್ಲಿನ ಆಡಳಿತ ಮಂಡಳಿ ಕೈಗೊಂಡಿದ್ದು, ಕುಂಭಮೇಳ ಪ್ರದೇಶದಲ್ಲಿ ವಾಹನ ರಹಿತ ವಲಯವನ್ನು ಜಾರಿಗೊಳಿಸಲಾಗಿದೆ. ಬುಧವಾರದ ಜನಸಂದಣಿಯು ಮಂಗಳವಾರಕ್ಕಿಂತ (1.33 ಕೋಟಿ) ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಇಲ್ಲಿನ ಡಿಐಜಿ ತಿಳಿಸಿದ್ದಾರೆ.