ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಪರಾರಿಯಾಗಿದ್ದಾರೆ.
ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ರಿಂದ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು,ಈ ಸಂಬಂಧ ಲೋಕಾಯುಕ್ತ ದಾಳಿ ಸುಳಿವು ದೊರೆತ ಕುಮಾರ್ ಪರಾರಿಯಾಗಿದ್ದು,ಅವರ ಪತ್ತೆಗೆ ಶೋಧ ನಡೆಸಲಾಗಿದೆ.
ಸುಳ್ಳು ಕೇಸ್ ಹಾಕಿ ಚೆನ್ನೇಗೌಡರ 4 ಕೋಟಿ ರೂ. ಮೌಲ್ಯದ ಮನೆಯನ್ನು ತಮ್ಮ ಸಂಬಂಧಿಕರಿಗೆ ಕಡಿಮೆ ಬೆಲೆಗೆ ನೋಂದಣಿ ಮಾಡಿಕೊಡುವಂತೆ ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡುತ್ತಿದ್ದರು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ದಂಪತಿಗೆ ಇನ್ಸ್ಪೆಕ್ಟರ್ ಕಿರುಕುಳ ಕೊಟ್ಟಿದ್ದರು ಎನ್ನುವ ಆರೋಪವಿದೆ.
ಈ ಹಿಂದೆ ದಾಖಲಾಗಿದ್ದ ಪ್ರಕರಣದ ಸಂಬಂಧ ಬಿ ರಿಪೋರ್ಟ್ಗೆ ಹಾಕುತ್ತೇನೆ. ಮನೆಯನ್ನು ಬರೆದುಕೊಡಿ ಎಂದು ಇನ್ಸ್ಪೆಕ್ಟರ್ ಕುಮಾರ್ ಅವರು ಚೆನ್ನೇಗೌಡ ಅವರ ಮನೆಗೆ ಕೆಲ ಪುಂಡರನ್ನು ನುಗ್ಗಿಸಿ ದಾಂಧಲೆ ಮಾಡಿಸಿದ್ದರು. ಪುಂಡರ ದಾಂಧಲೆಯನ್ನು ಚೆನ್ನೇಗೌಡ ಅವರು ವಿಡಿಯೋ ಮಾಡಿಕೊಂಡಿದ್ದರು.
ಇನ್ಸ್ಪೆಕ್ಟರ್ ಕುಮಾರ್ ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಗೆ ಮನೆ ಕೊಡಿಸಲು ಸಂಚು ಮಾಡಿ 4 ಕೋಟಿ ಮೌಲ್ಯದ ಮನೆಯನ್ನು 60 ಲಕ್ಷ ರೂ.ಗೆ ಮಾರಾಟ ಮಾಡುವಂತೆ ಚೆನ್ನೇಗೌಡ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮನೆ ನೋಡಿಕೊಂಡು ಬರಲು ಠಾಣೆಯ ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರ ಜೊತೆ ಸಂಬಂಧಿಕರನ್ನು ಕಳುಹಿಸಿದ್ದರು.ಇನ್ಸ್ಪೆಕ್ಟರ್ ಸೂಚನೆಯಂತೆ ಇಬ್ಬರು ವ್ಯಕ್ತಿಗಳೊಂದಿಗೆ ಮನೆ ನೋಡಬೇಕೆಂದು ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರು ಚೆನ್ನೇಗೌಡ ಅವರ ಮನೆಗೆ ನುಗ್ಗಿದ್ದರು.
ಮಾ. 18ರಂದು ಸಮಯ 3:25 ನಿಮಿಷಕ್ಕೆ ಕೆಂಪು ಬಣ್ಣದ ಕೆಎ 42 ಪಿ 0919 ನೋಂದಣಿಯ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು. ಈ ಬಗ್ಗೆ ಪ್ರಶ್ನಿಸಿದ ಚೆನ್ನೇಗೌಡ ಅವರು ವಿಡಿಯೋ ಸಹ ಮಾಡಿದ್ದರು. ಈ ವೇಳೆ ಠಾಣೆಯಿಂದ ಕಾರು ಸಮೇತ ಕರೆದುಕೊಂಡು ಬರುವುದಾಗಿ ಹೇಳಿ ಹೆಡ್ ಕಾನ್ಸ್ ಟೇಬಲ್ ಉಮೇಶ್ ಅವರು ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಮತ್ತೊಂದಡೆ ನಾಗರಭಾವಿಯ ಖಾಸಗಿ ಹೊಟೇಲ್ನಲ್ಲಿ ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಹೆಡ್ ಕಾನ್ಸ್ಟೇಬಲ್ ಉಮೇಶ್, ಅನಂತ್ ಲೋಕಾ ಬಲೆಗೆ ಬಿದ್ದಿದ್ದಾರೆ.